ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ| ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ ಆಂತರಿಕ ವಿಚಾರ| ಈ ವಿಚಾರದಲ್ಲಿ ಬಾಹ್ಯ ರಾಷ್ಟ್ರಗಳ ಹಸ್ತಕ್ಷೇಪ ಸಹಿಸಲಾಗಲ್ಲ| ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಸರ್ಕಾರದ ಸಂದೇಶ

ನವದೆಹಲಿ(ಡಿ.05): ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಿಳಿದ ಭಾರತೀಯ ರೈತರ ಪರ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ನಡವಳಿಕೆ ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಭಾರತ ಎಚ್ಚರಿಸಿದೆ. ಟ್ರೂಡೋ ಹೇಳಿಕೆ ಸಂಬಂಧ, ಭಾರತದಲ್ಲಿನ ಕೆನಡಾ ರಾಯಭಾರಿಯನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ ಇಂಥದ್ದೊಂದು ಸಂದೇಶ ರವಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟು ಬಿಡದ ರೈತರು, ಕೃಷಿ ಕಾಯ್ದೆ ಪೂರ್ಣ ರದ್ದಿಗೆ ರೈತ ಸಂಘಟನೆಗಳ ಪಟ್ಟು!

ಕೆನಡಾ ದೇಶದ ಸಚಿವರು, ಸಂಸದರು ಸೇರಿ ಇನ್ನಿತರ ಮುಖಂಡರ ಹೇಳಿಕೆಗಳು ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಬಳಿ ಉಗ್ರಗಾಮಿ ಚಟುವಟಿಕೆಗಳನ್ನು ಪ್ರಚೋದಿಸುತ್ತವೆ. ಇದರಿಂದ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆ ಮತ್ತು ಸುರಕ್ಷತೆ ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಕೆನಡಾ ಸರ್ಕಾರ ಇಂಥ ಹೇಳಿಕೆಗಳಿಂದ ದೂರವಿರಬೇಕು. ಜೊತೆಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಕಚೇರಿಗಳಿಗೆ ಪೂರ್ಣ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದೆ.

ರೈತರ ಮೇಲೆ ಪ್ರಹಾರ: ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್‌ ಪಡೆದ ಶಾಸಕ!

ಕೇಂದ್ರ ಸರ್ಕಾರ ಜಾರಿಗೆ ನಿರ್ಧರಿಸಿರುವ ವಿವಾದಿತ 3 ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಕೈಗೊಂಡಿದ್ದ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ, ಶಾಂತಿಯುತ ಪ್ರತಿಭಟನೆಗಳ ಹಕ್ಕುಗಳನ್ನು ಕೆನಡಾ ಸರ್ಕಾರ ಸದಾ ಬೆಂಬಲಿಸಲಿದೆ. ಜೊತೆಗೆ ಭಾರತದಲ್ಲಿ ರೈತರ ಸ್ಥಿತಿ ಬಗ್ಗೆ ಕಳವಳಕಾರಿಯಾಗಿದೆ ಎಂದು ಹೇಳಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.