ಸಾಲ ತೀರಿಸಲು ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ ತಂಗಿಯ ಕಥೆ. 12 ವರ್ಷಗಳ ಹಿಂದೆ ತಂದೆ ಪಡೆದಿದ್ದ ಕಡಲೆಬೀಜದ ಸಾಲವನ್ನು ಮಕ್ಕಳು ತೀರಿಸಿದರು. ವ್ಯಾಪಾರಿಯನ್ನು ಹುಡುಕಿ ಕುಟುಂಬಕ್ಕೆ ಹಣ ನೀಡಿದರು.

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಸಾಲ ಹಿಂದಿರುಗಿಸಲು ಇಬ್ಬರು ಅಮೆರಿಕದಿಂದ ಭಾರತಕ್ಕೆ ಬಂದಿರುವ ಫೋಟೋ ಕಳೆದೊಂದು ವಾರದಿಂದ ವೈರಲ್ ಆಗುತ್ತಿದೆ. ನೇಮಾನಿ ಪ್ರಣವ್, ಸೋದರಿ ಸುಚಿತಾ ತಂದೆ ಮೋಹನ್ ಜೊತೆ ಆಂಧ್ರ ಪ್ರದೇಶದ ಕೋಥಾಪಲ್ಲಿ ಬೀಚ್‌ಗೆ ಬಂದಿದ್ದರು. ಈ ವೇಳೆ ಸತ್ಯಯ್ಯಾ ಎಂಬ ವ್ಯಕ್ತಿ ಬಳಿಯಲ್ಲಿ ಕಡಲೆಬೀಜ (ಶೇಂಗಾ) ಖರೀದಿಸಿದ್ದರು. ಹಣ ನೀಡಲು ಮುಂದಾದಾಗ ಪರ್ಸ್ ಹೋಟೆಲ್‌ನಲ್ಲಿಯೇ ಬಿಟ್ಟು ಬಂದಿರೋದು ಗೊತ್ತಾಗಿದೆ. ಅವರ ಬಳಿ ಆ ಸಮಯದಲ್ಲಿ ವ್ಯಾಪಾರಿಗೆ ನೀಡಲು ಹಣ ಇರಲಿಲ್ಲ. ಆದರೆ ವ್ಯಾಪಾರಿ ಸತ್ಯಯ್ಯ ಹಣ ನೀಡುವಂತೆ ಒತ್ತಡ ಹಾಕದೇ ಕಡಲೆಬೀಜವನ್ನು ಉಚಿತವಾಗಿಯೇ ನೀಡಿದ್ದರು. ಈ ಘಟನೆ 2010ರಲ್ಲಿ ನಡೆದಿತ್ತು.

Add Asianetnews Kannada as a Preferred SourcegooglePreferred

ಹಣ ಹಿಂದಿರುಗಿಸದೇ ಅಮೆರಿಕಾಗೆ ಹೋಗಿದ್ರು ಮೋಹನ್

ಆ ಸಮಯದಲ್ಲಿ ಉಚಿತವಾಗಿ ಕಡಲೆಬೀಜ ಪಡೆದುಕೊಂಡಿದ್ದ ಮೋಹನ್, ಹಣ ಹಿಂದಿರುಗಿಸೋದಾಗಿ ಮಾತು ನೀಡಿದ್ದರು. ಈ ಸಮಯದಲ್ಲಿ ಸತ್ಯಯ್ಯ ಅವರ ಫೋಟೋವೊಂದನ್ನು ಸಹ ಕ್ಲಿಕ್ಕಿಸಿಕೊಂಡಿದ್ದರು. ಆದ್ರೆ ಕಾರಣಾಂತರಗಳಿಂದ ಆ ಸಮಯದಲ್ಲಿ ಮೋಹನ್ ಅವರಿಗೆ ಹಣ ಹಿಂದಿರುಗಿಸಲು ಸಾಧ್ಯವಾಗರಲಿಲ್ಲ. ಮೋಹನ್ ಓರ್ವ ಎನ್‌ಆರ್‌ಐ ಆಗಿದ್ದರಿಂದ ವಿದೇಶಕ್ಕೆ ಹಿಂದಿರುಗಿದ್ದರು. ಈ ಸಾಲವನ್ನು ಮೋಹನ್ ಅವರ ಮಕ್ಕಳಾದ ನೇಮಾನಿ ಮತ್ತು ಸುಚಿತಾ ಹಿಂದಿರುಗಿಸಿದ್ದಾರೆ.

11 ವರ್ಷಗಳ ಬಳಿಕ ಭಾರತಕ್ಕೆ ಬಂದ್ರು

11 ವರ್ಷಗಳ ಬಳಿಕ ಅಂದ್ರೆ 2022ಲ್ಲಿ ಅಮೆರಿಕಾದಿಂದ ಭಾರತಕ್ಕೆ ಆಗಮಿಸಿದ ನೇಮಾನಿ ಮತ್ತು ಸುಚಿತಾ ತಮಗೆ ಉಚಿತವಾಗಿ ಕಡಲೆಬೀಜ ನೀಡಿದ್ದ ವ್ಯಾಪಾರಿ ಸತ್ಯಯ್ಯ ಅವರನ್ನು ಹುಡುಕಲು ಮುಂದಾದರು. ಕೋಥಾಪಲ್ಲಿ ಬೀಚ್‌ನಲ್ಲಿ ಸತ್ಯಯ್ಯ ಅವರ ಫೋಟೋ ಹಿಡಿದುಕೊಂಡು ಹುಡುಕಾಟ ಆರಂಭಿಸಿದ್ದರು. ನೇಮಾನಿ, ಸುಚಿತಾ ತಂದೆ ಮೋಹನ್ ಅವರು ವ್ಯಾಪಾರಿಯುನ್ನು ಭೇಟಿಯಾಗಿ ಹಣ ಹಿಂದಿರುಗಿಸಬೇಕೆಂದು ದೃಢ ನಿರ್ಧಾರ ಮಾಡಿದ್ದರು. ಸತ್ಯಯ್ಯ ಹುಡುಕಿಕೊಡುವಂತೆ ಕಾಕಿನಾಡ ಅಂದಿನ ಶಾಸಕ ಚಂದ್ರಶೇಖರ್ ರೆಡ್ಡಿ ಅವರ ಸಹಾಯವನ್ನು ಕೇಳಿದ್ದರು.

25 ಸಾವಿರ ರೂ. ಕೊಟ್ಟ ಅಣ್ಣ ಮತ್ತು ತಂಗಿ

ಮೋಹನ್ ಮನವಿ ಆಲಿಸಿದ್ದ ಚಂದ್ರಶೇಖರ್ ರೆಡ್ಡಿ ಫೇಸ್‌ಬುಕ್‌ನಲ್ಲಿ, ಸತ್ಯಯ್ಯ ಅವರ ಫೋಟೋ ಹಾಕಿಕೊಂಡಿದ್ದರು. ಸತ್ಯತ್ಯ ಅವರ ಮಾಹಿತಿ ನೀಡಬೇಕೆಂದು ಸಾರ್ವಜನಿಕಲ್ಲಿ ಮನವಿ ಮಾಡಿಕೊಂಡಿದ್ದರು. ಫೇಸ್‌ಬುಕ್ ಪೋಸ್ಟ್ ಪರಿಣಾಮ ಸತ್ಯಯ್ಯ ಕುಟುಂಬದ ಮಾಹಿತಿ ಸಿಕ್ಕಿತ್ತು. ಆದರೆ ಸತ್ಯಯ್ಯ ನಿಧನವಾಗಿರುವ ವಿಷಯ ಗೊತ್ತಾಗಿದೆ. ನೇಮಾನಿ ಮತ್ತು ಸುಚಿತಾ ಇಬ್ಬರು. ಸತ್ತಯ್ಯ ಕುಟುಂಬಸ್ಥರನ್ನು ಭೇಟಿಯಾಗಿ 25,000 ರೂ.ಗಳನ್ನು ನೀಡಿದ್ದಾರೆ. ನಂತರ ತುಂಬಾ ಸಮಯದವರೆಗೆ ಸತ್ಯಯ್ಯ ಕುಟುಂಬಸ್ಥರೊಂದಿಗೆ ಕುಳಿತು ಮಾತನಾಡಿದ್ದಾರೆ. ಇದೀಗ ಮತ್ತೊಮ್ಮೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

25 ವರ್ಷಗಳ ನಂತರ ಶ್ರೀಲಾಂಕಾಗೆ ತೆರಳಿ ಹಣ ಹಿಂದಿರುಗಿಸಿದ್ದ ಉದ್ಯಮಿ

2024ರಲ್ಲಿ ತಮಿಳುನಾಡು ಮೂಲದ ಉದ್ಯಮಿಯೊಬ್ಬರು ಶ್ರೀಲಂಕಾಗೆ ತೆರಳಿ ತಾವು ಕದ್ದಿದ್ದ ಹಣವನ್ನು ಸುಮಾರು 25 ವರ್ಷಗಳ ನಂತರ ಹಿಂದಿರುಗಿಸಿದ್ದರು. ಕಾಫಿ ಎಸ್ಟೇಟ್ ಮಾಲೀಕರ ಮನೆಯಲ್ಲಿ ಸ್ವಚ್ಛತಾ ಕೆಲಸ ಮಾಡುವಾಗ ಹಾಸಿಗೆ ಕೆಳಗೆ ಸುಮಾರು 800 ರೂ. ಹಣ ಸಿಕ್ಕಿತ್ತು. ಅಂದು ಬಡತನದಲ್ಲಿದ್ದ ಉದ್ಯಮಿ ಹಣವನ್ನು ಹಿಂದಿರುಗಿಸದೇ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲವೇ ವರ್ಷಗಳಲ್ಲಿಯೇ ಅವರು ಕೆಲಸ ಅರಸಿ ತಮಿಳುನಾಡಿಗೆ ಬಂದು ಬದುಕು ಕಟ್ಟಿಕೊಂಡಿದ್ದರು. ಆದ್ರೆ 800 ರೂ. ಹಣ ವಾಪಸ್ ನೀಡದಿರೋದು ಉದ್ಯಮಿಯಲ್ಲಿ ಪಾಪ ಪ್ರಜ್ಞೆಯನ್ನುಂಟು ಮಾಡಿತ್ತು. ಕೊನೆಗೆ ಶ್ರೀಲಂಕಾಗೆ ತೆರಳಿ ದೊಡ್ಡಮೊತ್ತದ ಹಣ ಹಿಂದಿರುಗಿಸಿ ಕುಟುಂಬಸ್ಥರ ಬಳಿಯಲ್ಲಿ ಕ್ಷಮೆ ಕೇಳಿದ್ದರು. ಈ ಸುದ್ದಿ ಸಹ ವೈರಲ್ ಆಗಿತ್ತು.