ಬಿಹಾರದ ನೂತನ ಉಪಮುಖ್ಯಂತ್ರಿ ಸಾಮ್ರಾಟ್ ಚೌಧರಿ ತಮ್ಮ ಪಗಡಿ ತೆಗೆಯುವ ನಿರ್ಧಾರಕ್ಕೆ ಬಂದಿದ್ದಾರೆ.ಈ ಹಿಂದೆ ಬಿಜೆಪಿ ಮೈತ್ರಿ ಮುರಿದ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸಿದಾಗ ಚೌಧರಿ ಪಗಡಿ ಶಪಥ ಮಾಡಿದ್ದರು. ಇದೀಗ ಶಪಥ ಪೂರ್ಣಗೊಂಡಿದೆ.ಹೀಗಾಗಿ ಆಯೋಧ್ಯೆ ರಾಮ ಮಂದಿರಕ್ಕೆ ತೆರಳಿ ಪಗಡಿ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟಕ್ಕೂ ನೂತನ ಡಿಸಿಎಂ ಮಾಡಿದ್ದ ಶಪಥ ಏನು?

ಪಾಟ್ನಾ(ಜ.29) ಬಿಹಾರ ರಾಜಕೀಯ ಅಲ್ಲೋಲಕಲ್ಲೋಲವಾಗಿ ಇದೀಗ ಹೊಸ ಸರ್ಕಾರ ರಚನೆಯಾಗಿದೆ. ನಿತೀಶ್ ಕುಮಾರ್ 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ಸಾಮ್ರಾಟ್ ಚೌಧರಿ ಹಾಗೂ ಅಶೋಕ್ ಸಿನ್ಹಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ ನಿತೀಶ್ ಕುಮಾರ್ ಬಿಜೆಪಿ ಮೈತ್ರಿ ಮುರಿದು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದಾಗ ಸಾಮ್ರಾಟ್ ಚೌಧರಿ ಮಾಡಿದ್ದ ಶಪಥವೊಂದು ಪೂರ್ಣಗೊಂಡಿದೆ. ಹೀಗಾಗಿ ತಮ್ಮ ತಲೆಗೆ ಕಟ್ಟಿರುವ ಪಗಡಿಯನ್ನು ಆಯೋಧ್ಯೆ ರಾಮ ಮಂದಿರಕ್ಕೆ ತೆರಳಿ ತೆಗೆಯುವುದಾಗಿ ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಬಿಸಿ ಸಮುದಾಯದ ಪ್ರಬಲ ನಾಯಕ ಸಾಮ್ರಾಟ್ ಚೌಧರಿ ಶ್ರೀರಾಮನ ಪರಮ ಭಕ್ತ. ಬಿಜೆಪಿ ತನಗೆ ಎರಡನೇ ತಾಯಿ ಎಂದೇ ಹೇಳಿಕೊಳ್ಳುತ್ತಾರೆ. ಆದರೆ ಕಳೆದ ಬಾರಿ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮುರಿದು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ್ದರು. ಈ ವೇಳೆ ಸಾಮ್ರಾಟ್ ಚೌಧರಿ ಶಪಥವೊಂದನ್ನು ಮಾಡಿದ್ದರು. ನಿತೀಶ್ ಕುಮಾರ್ ಸಿಎಂ ಸ್ಥಾನದಿಂದ ರಾಜೀನಾಮೆ ನೀಡುವವರೆಗೆ ಪಗಡಿ ಬಿಚ್ಚುವುದಿಲ್ಲ ಎಂದು ಶಪಥ ಮಾಡಿದ್ದರು.

Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

ಇದೀಗ ನಿತೀಶ್ ಕುಮಾರ್ ಕಾಂಗ್ರೆಸ್, ಆರ್‌ಜೆಡಿ ಮೈತ್ರಿಗೆ ಗುಡ್ ಬೈ ಹೇಳಿದ ಬಳಿಕ ಮುಖ್ಯಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು. ಸಾಮ್ರಾಟ್ ಚೌಧರಿ ಶಪಥ ಮಾಡಿದಂತೆ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿ ಜೊತೆ ಸೇರಿ ಮತ್ತೆ ಸಿಎಂ ಆಗಿದ್ದಾರೆ. ಆದರೆ ಸಾಮ್ರಾಟ್ ಚೌಧರಿ ಶಪಥ ಪೂರ್ಣಗೊಂಡಿದೆ. ಇಷ್ಟೇ ಅಲ್ಲ ಸಾಮ್ರಾಟ್ ಚೌಧರಿ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ತಾವು ಆಯೋಧ್ಯೆಗೆ ತೆರಳಿ ತಲೆಗೆ ಕಟ್ಟಿರುವ ಪಗಡಿ ಬಿಚ್ಚುವುದಾಗಿ ಹೇಳಿದ್ದಾರೆ.

ನಿತೀಶ್ ಕುಮಾರ್ ಪ್ರಮಾಣವಚನ ಸಮಾರಂಭದಲ್ಲೇ ಡಿಸಿಎಂಗಳು ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ, ರಾಜ್ಯದ ಪ್ರಮುಖ ಒಬಿಸಿ ಸಮುದಾಯಗಳ ಪೈಕಿ ಒಂದಾದ ಕುಶ್ವಾಹಾ ಸಮುದಾಯದ ಸಾಮ್ರಾಟ್‌ ಚೌಧರಿ ಮತ್ತು ಮೇಲ್ವರ್ಗದ ಭೂಮಿಹಾರ್‌ ಸಮುದಾಯದ ಅಶೋಕ್‌ ಸಿನ್ಹಾ ಉಪಮುಖ್ಯಮಂತ್ರಿಗಳಾಗಿದ್ದಾರೆ. 

ಬಿಹಾರದಲ್ಲಿ ಬಿಜೆಪಿ ಮೈತ್ರಿ ಸರ್ಕಾರ ರಚನೆ, 9ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ!

ಇವರ ಜೊತೆಗೆ ಬಿಜೆಪಿಯ ಪ್ರೇಮ್‌ ಕುಮಾರ್‌, ಜೆಡಿಯುದ ವಿಜಯ್‌ ಕುಮಾರ್‌ ಚೌಧರಿ, ಶ್ರವಣ್‌ ಕುಮಾರ್‌ ಮತ್ತು ಮಾಜಿ ಸಿಎಂ ಜೀತನ್ ಕುಮಾರ್‌ ಮಾಂಝಿ ಅವರ ಪಕ್ಷದ ಸಂತೋಷ್‌ ಕುಮಾರ್‌ ಸುಮನ್‌, ಪಕ್ಷೇತರ ಸದಸ್ಯ ಸುಮಿತ್‌ ಸಿಂಗ್‌ ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.