ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡು ಆರ್‌ಜೆಡಿ ಜೊತೆಯಲ್ಲಿ ಬಿಹಾರದಲ್ಲಿ ಸರ್ಕಾರ ರಚಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಪದವಿಗೇರಿರುವ ನಿತೀಶ್‌ ಕುಮಾರ್‌, ತಮ್ಮ ಸಚಿವ ಸಂಪುಟ ರಚನೆ ಮಾಡಿದ್ದಾರೆ. ಲಾಲೂ ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಸೇರಿದಂತೆ 31 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಪಾಟ್ನಾ (ಆ.16): ಬಿಹಾರದಲ್ಲಿ ರಚನೆಯಾಗಿರುವ ನೂತನ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. ಮಂಗಳವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ನೇತೃತ್ವದಲ್ಲಿ 31 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆರ್‌ಜೆಡಿಯಿಂದ ಗರಿಷ್ಠ 16 ಹಾಗೂ 11 ಜೆಡಿಯು, ಇಬ್ಬರು ಕಾಂಗ್ರೆಸ್‌ ಹಾಗೂ ಹಿಂದುಸ್ತಾವ್‌ ಆವಂ ಪಕ್ಷ ಹಾಗೂ ಸ್ವತಂತ್ರ ಶಾಸಕರ ಪೈಕಿ ತಲಾ ಒಬ್ಬರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಸಂಪುಟದಲ್ಲಿ ಅತ್ಯಂತ ಅಚ್ಚರಿಯ ಹೆಸರು ಅನಂತ್ ಸಿಂಗ್ ಅವರ ಆಪ್ತ ಕಾರ್ತಿಕ್ ಸಿಂಗ್ ಅವರದ್ದು. ಕಾರ್ತಿಕ್ ಇತ್ತೀಚೆಗೆ ಪಾಟ್ನಾ ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯನ್ನು ಸೋಲಿಸಿ ಗೆದ್ದಿದ್ದರು. ಇತ್ತ ನಿತೀಶ್ ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಗುಸುಗುಸು ಶುರುವಾಗಿದೆ. ಕೋಪಗೊಂಡ ಕಾಂಗ್ರೆಸ್ಸಿಗರು ಸೋಮವಾರ ಪಕ್ಷದ ಕಚೇರಿಯ ಮುಂದೆ ಘೋಷಣೆಗಳನ್ನು ಕೂಗಿದರು. ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ರಾಜೇಂದ್ರ ಮಂಟಪದಲ್ಲಿ ಶೀಘ್ರದಲ್ಲೇ ನಡೆಯಲಿದೆ. ಸಿಎಂ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಾಜಿ ಸಿಎಂ ರಾಬ್ರಿ ದೇವಿ, ಜಿತನ್ ರಾಮ್ ಮಾಂಝಿ ಸೇರಿದಂತೆ ಹಲವು ನಾಯಕರು ಸಮಾರಂಭಕ್ಕೆ ಆಗಮಿಸಿದ್ದರು.

ಮೂಲಗಳ ಪ್ರಕಾರ, ಸಚಿವರಾದ ಎಲ್ಲಾ ನಾಯಕರಿಗೆ ತಡರಾತ್ರಿ ಕರೆ ಮಾಡಲಾಗಿದೆ ಮತ್ತು ಮಂಗಳವಾರ ಬೆಳಿಗ್ಗೆ ಪಾಟ್ನಾ ತಲುಪಲು ತಿಳಿಸಲಾಗಿದೆ. ಪ್ರಮಾಣ ವಚನದ ನಂತರ ನಿತೀಶ್ ಸಂಪುಟದ ಔಪಚಾರಿಕ ಸಭೆಯನ್ನೂ ಕರೆಯಬಹುದು ಎಂದು ವರದಿಯಾಗಿತ್ತು.

ಬಿಜೆಪಿ ಕೋರ್‌ ಕಮಿಟಿ ಸಭೆ: ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಜೆಪಿ ನಡ್ಡಾ ಮತ್ತು ಬಿಜೆಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ, ಬಿಹಾರದಲ್ಲಿ ಹೊಸ ಸರ್ಕಾರ ರಚನೆಯ ನಂತರ ಪಕ್ಷದ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗುವುದು ಮತ್ತು ಸಚಿವರ ಪ್ರಮಾಣವಚನ ಮತ್ತು ಬಿಹಾರದಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚೆ ಮಾಡಲಾಗುತ್ತದೆ.

ಇಡಿ, ಸಿಬಿಐನವರು ನನ್ನ ಮನೆಯಲ್ಲೇ ಕಚೇರಿ ತೆರೆಯಬಹುದು: ತೇಜಸ್ವಿ ಯಾದವ್

ಮೇಲ್ವರ್ಗದ ಸಚಿವರ ಸಂಖ್ಯೆ ಇಳಿಕೆ: ಮಹಾಮೈತ್ರಿಕೂಟದ ಹೊಸ ಸರ್ಕಾರದಲ್ಲಿ ಸಾಮಾಜಿಕ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ಸಚಿವರನ್ನು ಮಾಡಲಾಗಿದೆ. ಒಬಿಸಿ-ಇಬಿಸಿಯಿಂದ ಅತಿ ಹೆಚ್ಚು 17, ದಲಿತ-5 ಮತ್ತು 5 ಮುಸ್ಲಿಮ್‌ ಸಚಿವರನ್ನು ಹೊಂದಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಹೋಲಿಸಿದರೆ ಈ ಬಾರಿ ಮೇಲ್ವರ್ಗದ ಜಾತಿಗಳ ಪ್ರಾತಿನಿಧ್ಯ ಕಡಿಮೆಯಾಗಿದೆ. ಕಳೆದ ಬಾರಿ 11 ಮಂದಿ ಮೇಲ್ಜಾತಿಯ ಸಚಿವರಿದ್ದು, ಈ ಬಾರಿ 6ಕ್ಕೆ ಕುಸಿದಿದೆ. ಅದೇ ಸಮಯದಲ್ಲಿ, ಒಬಿಸಿ-ಇಬಿಸಿಯಿಂದ 13 ಮಂತ್ರಿಗಳಿದ್ದರೆ, ಮುಸ್ಲಿಮರನ್ನು 2 ಕ್ಯಾಬಿನೆಟ್‌ಗಳಲ್ಲಿ ಸೇರಿಸಲಾಗಿತ್ತು. ಸಚಿವ ಸಂಪುಟದಲ್ಲಿ ಎಲ್ಲ ಜಾತಿಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಆದಾಗ್ಯೂ, ಹೆಚ್ಚಿನ ಗಮನ ಒಬಿಸಿ ಮತ್ತು ಇಬಿಸಿ ಮೇಲೆ ಕೇಂದ್ರೀಕೃತವಾಗಿದೆ. ಜಾತಿ ಬಗ್ಗೆ ಮಾತನಾಡುವುದಾದರೆ, ಈ ಬಾರಿ ಯಾದವ ಜಾತಿಯ ಗರಿಷ್ಠ 6 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಆರ್‌ಜೆಡಿಯಿಂದ ಐವರು ಮತ್ತು ಜೆಡಿಯುನಿಂದ ಒಬ್ಬರು ಶಾಸಕರು ಸಚಿವರಾಗಿದ್ದಾರೆ. ಹಿಂದಿನ ಸಚಿವ ಸಂಪುಟದಲ್ಲಿ ಈ ಜಾತಿಯಿಂದ ಕೇವಲ 2 ಸಚಿವರಿದ್ದರು.

ಕೊಹ್ಲಿ ಜೊತೆ ಕ್ರಿಕೆಟ್‌ ಆಡಿದ್ದ ತೇಜಸ್ವಿ ಯಾದವ್‌ ಈಗ ಬಿಹಾರ ಸರ್ಕಾರದಲ್ಲಿ ವೈಸ್‌ ಕ್ಯಾಪ್ಟನ್‌!

ಆರ್‌ಜೆಡಿ ಪಕ್ಷದ ಸಚಿವರು: ತೇಜ್‌ ಪ್ರತಾಪ್‌ ಯಾದವ್‌, ಅಲೋಕ್‌ ಮೆಹ್ತಾ, ಸುರೇಂದ್ರ ಯಾದವ್‌, ರಮಾನಂದ್‌ ಯಾದವ್‌, ಲಲಿತ್‌ ಯಾದವ್‌, ಕುಮಾರ್‌ ಸರ್ವಜೀತ್‌, ಸಮೀರ್‌ ಮಹಾಸೇಥ್‌, ಚಂದ್ರಶೇಖರ್‌, ಅನಿತಾ ದೇವಿ, ಸುಧಾಕರ್‌ ಸಿಂಗ್‌, ಇಸ್ರೇಲ್‌ ಮನ್ಸೂರಿ, ಸುರೇಂದ್ರ ರಾಮ್‌, ಕಾರ್ತಿಕ್‌ ಸಿಂಗ್‌, ಶಹನವಾಜ್‌ ಆಲಂ, ಜಿತೇಂದ್ರ ಕುಮಾರ್‌ ರೈ, ಶಮೀಮ್‌ ಅಹ್ಮದ್‌,

ಜೆಡಿಯು ಪಕ್ಷದ ಸಚಿವರು: ವಿಜಯ್‌ ಚೌಧರಿ, ವಿಜೇಂದರ್‌ ಯಾದವ್‌, ಅಶೋಕ್‌ ಚೌಧರಿ, ಶ್ರವಣ್‌ ಕುಮಾರ್‌, ಲೇಸಿ ಸಿಂಗ್‌, ಮದನ್‌ ಸಾಹ್ನಿ, ಸಂಜಯ್‌ ಕುಮಾರ್‌ ಝಾ, ಶೀಲಾ ಮಂಡಲ್‌, ಸುನೀಲ್‌ ಕುಮಾರ್‌, ಜಯಂತ್‌ ರಾಜ್‌, ಮೊಹಮದ್‌ ಜಮಾ ಖಾನ್‌

ಕಾಂಗ್ರೆಸ್ ಪಕ್ಷದ ಮಂತ್ರಿಗಳು: ಅಫಾಕ್‌ ಆಲಂ, ಮುರಾರಿ ಗೌತಮ್‌

ಹಿಂದುಸ್ತಾನ್‌ ಆವಂ ಪಕ್ಷದ ಸಚಿವ: ಸಂತೋಷ್‌ ಸುಮನ್‌

ಸ್ವತಂತ್ರ ಸಚಿವ: ಸುಮಿತ್‌ ಕುಮಾರ್‌