ಬೆಂಗಳೂರಿನಲ್ಲಿ ವಾಹನಗಳನ್ನು ಪಂಚರ್ ಮಾಡಲು ರಸ್ತೆಗಳಲ್ಲಿ ಮೊಳೆಗಳನ್ನು ಹಾಕುತ್ತಿದ್ದ ಕಿಡಿಗೇಡಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಪಂಚರ್ ಅಂಗಡಿಗಳ ವ್ಯವಹಾರಕ್ಕಾಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಇವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಗಳ ಬದಿಯಲ್ಲಿ ಕಬ್ಬಿಣದ ಮೊಳೆಗಳನ್ನು ಹಾಕುತ್ತಿದ್ದ ಕಿಡಿಗೇಡಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಇವರೇ ನೋಡಿ ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ ನಡೆಸಲು ಕಚೇರಿಗಳು, ಆಸ್ಪತ್ರೆ, ಮಾರುಕಟ್ಟೆ ಹೀಗೆ ದೈನಿಕ ಕೆಲಸಗಳಿಗೆ ಹೋಗುತ್ತಿದ್ದವರ ಬೈಕ್ ಹಾಗೂ ಕಾರುಗಳನ್ನು ಪಂಚರ್ ಮಾಡುತ್ತಿದ್ದ ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಮೊಳೆಗಳನ್ನು ಹಾಕುವಾರ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನ ವಿವಿಧ ಅತ್ಯಂತ ಜನನಿಬಿಡ ರಸ್ತೆಗಳ ಪಕ್ಕದಲ್ಲಿ ಕಬ್ಬಿಣದ ಅರ್ಧ ಹಾಗೂ ಒಂದು ಇಂಚಿನ ಕಬ್ಬಿಣದ ಮೊಳೆಗಳನ್ನು ಹಾಕಿ ಬೈಕ್ ಹಾಗೂ ಕಾರುಗಳನ್ನು ಪಂಚರ್ ಮಾಡುತ್ತಿದ್ದರು. ವಾಹನಗಳು ಪಂಚರ್ ಆದ ಬಳಿಕ ಮುಂದೆ ಎಲ್ಲಾದರೂ ಪಂಚರ್ ಶಾಪ್ ಇದೆಯೇ ಎಂದು ಹುಡುಕಿಕೊಂಡು ಹೋದರೆ ಇವರ ಅಂಗಡಿಗಳೇ ಅಲ್ಲಿರುತ್ತಿದ್ದವು. ಅವರ ಬ್ಯೂಸಿನೆಸ್ಗಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಕಿಡಿಗೇಡಿಗಳು ಬೈಕ್ನಲ್ಲಿ ಹೋಗುತ್ತಾ ಮೊಳೆಗಳನ್ನು ರಸ್ತೆಯ ಬದಿ ಚೆಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೊಳೆಗಳನ್ನು ಆರಿಸಿದ ಪೊಲೀಸರು
ಈ ಬಗ್ಗೆ ವಿಡಿಯೋ ಸಂಗ್ರಹ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡಲೇ ಮೆಟಲ್ ಆಬ್ಸರ್ವರ್ (ಅಯಸ್ಕಾಂತ ದಂಡ) ಹಿಡಿದು ಮೊಳೆಗಳನ್ನು ಆರಿಸುವ ಕೆಲಸವನ್ನು ಮಾಡಿದ್ದಾರೆ. ಅಯಸ್ಕಾಂತಕ್ಕೆ ಕೆಜಿಗಟ್ಟಲೆ ಮೊಳೆಗಳು ಅಂಟಿಕೊಂಡಿದ್ದು, ಬೈಕ್ನಲ್ಲಿ ಬಂದವರು ಮೊಳೆ ಹಾಕಿ ಹೋಗಿರುವುದು ಸ್ಪಷ್ಟವಾಗಿದೆ. ಇದರ ಬೆನ್ನಲ್ಲಿಯೇ ಪೊಲೀಸರು ದೂರು ದಾಖಲಿಸಿದ್ದಾರೆ.
ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಇ.ಎಸ್ ರಿಂಗ್ ರಸ್ತೆಯಲ್ಲಿ ಪ್ರತಿನಿತ್ಯ ಯಾರೋ ದುಷ್ಕರ್ಮಿಗಳು ಪಂಚರ್ ಮಾಡಿ ಹಣವನ್ನು ಗಳಿಸುವ ಉದ್ದೇಶದಿಂದ ರಸ್ತೆಯಲ್ಲಿ ಸಣ್ಣ ಸಣ್ಣ ಮೊಳೆಗಳನ್ನು ಹಾಕುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಂಚರ್ ಆಗಿ ರಸ್ತೆಯ ಮಧ್ಯದಲ್ಲಿ ನಿಂತು ಪ್ರತಿನಿತ್ಯ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗಿ ಇದರಿಂದ ಸಂಚಾರ ದಟ್ಟಣೆ ಆಗುತ್ತಿರುತ್ತದೆ. ಇದರಿಂದ ಅಪಘಾತಗಳು ಸಹ ಉಂಟಾಗುವ ಸಂಭವ ಇರುತ್ತದೆ. ಪ್ರತಿ ನಿತ್ಯ 4-5 ವಾಹನಗಳು ಇದರಿಂದ ಪಂಚರ್ ಆಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ತಿಳಿಸಿರುತ್ತಾರೆ.
ಮೊಳೆ ಹಾಕಿದವರ ಮೇಲೆ ಕೇಸ್
ಚಂದ್ರಶೇಖರ್ ಎನ್ನುವವರು ಜಾಲಹಳ್ಳಿ ಠಾಣೆಗೆ ಬಂದು ದಿನಾಂಕ:17/04/2026 ರಂದು, ತಾನು ಎಂ.ಇ.ಎಸ್ ರೋಡ್ ನಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಬಿದ್ದಿದ್ದ ಮೊಳೆ ಅವರ ವಾಹನಕ್ಕೆ ರಸ್ತೆಯಲ್ಲಿ ಬಿದ್ದಿದ್ದ ಮೊಳೆ ಹೊಡೆದು ಪಂಚರ್ ಆಗಿದೆ. ನಂತರ ಪಂಚರ್ ಶಾಪ್ ಹುಡುಕಿಕೊಂಡು ಹೋದಾಗ ಮಾಮೂಲಿಗಿಂತ ಜಾಸ್ತಿ ಹಣವನ್ನು ಪಂಚರ್ ಗಾಗಿ ನೀಡಿರುವುದಾಗಿ ಈ ಬಗ್ಗೆ ಅವರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ನೀಡಿದ್ದರು. ಹೀಗಾಗಿ, ಆರೋಪಿಗಳನ್ನು ಪತ್ತೆ ಮಾಡುತ್ತಿರುವಾಗ ದುರುದ್ದೇಶದಿಂದ ರಸ್ತೆಯಲ್ಲಿ ಮೊಳೆಗಳನ್ನು ಹಾಕುತ್ತಿರುವ ದುಷ್ಕರ್ಮಿಗಳ ವಿಡಿಯೋ ಸಿಕ್ಕಿದ್ದು, ಇವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕಂಪ್ಲೇಂಟ್ ರಿಜಿಸ್ಟರ್ ಮಾಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ, ಕೆಲವರು ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲುತ್ತಾ ಸಾಗಿದ್ದಾರೆ. ಸಾಕ್ಷ್ಯದ ಸುಳಿವು ನಮ್ಮ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕೆಂಪು ಬಣ್ಣದ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆಯುತ್ತಿರುವುದು ದಾಖಲಾಗಿದೆ. ಎಎನ್ಪಿಆರ್ (ANPR) ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಬಿಟಿಪಿ ಅಸ್ತ್ರಮ್ (BTP ASTraM) ಆಪ್ ಮೂಲಕ ವರದಿ ಮಾಡಿ. ತುರ್ತು ಸೇವೆಗೆ 112 ಸಂಖ್ಯೆಗೆ ಕರೆ ಮಾಡಿ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.


