ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರಕ್ಕೆ ಮೋದಿಗೆ ಆಹ್ವಾನ
ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರಕ್ಕೆ ಮೋದಿಗೆ ಆಹ್ವಾನ | ನಾಳೆ ದಿಲ್ಲಿ ಮುಖ್ಯಮಂತ್ರಿಯಾಗಿ ಶಪಥ ಗ್ರಹಣ | ಆದರೆ ಮೋದಿ ಹೋಗುವುದು ಅನುಮಾನ!
ನವದೆಹಲಿ (ಫೆ. 15): ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ದಿಲ್ಲಿ ಮುಖ್ಯಮಂತ್ರಿಯಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಆಹ್ವಾನಿಸಿದ್ದಾರೆ.
ಶುಕ್ರವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಪತ್ರವನ್ನು ಕಳಿಸಲಾಗಿದೆ. ಜೊತೆಗೆ ದಿಲ್ಲಿಯ ಎಲ್ಲ 7 ಬಿಜೆಪಿ ಸಂಸದರು ಹಾಗೂ 8 ನೂತನ ಬಿಜೆಪಿ ಶಾಸಕರಿಗೂ ಪ್ರಮಾಣವಚನ ಸ್ವೀಕಾರಕ್ಕೆ ಆಹ್ವಾನಿಸಲಾಗಿದೆ ಎಂದು ಆಪ್ ದಿಲ್ಲಿ ಘಟಕದ ಸಂಚಾಲಕ ಗೋಪಾಲ್ ರಾಯ್ ಹೇಳಿದ್ದಾರೆ.
ಕೇಜ್ರಿ ಪದಗ್ರಹಣಕ್ಕೆ ಜ್ಯೂ. ಕೇಜ್ರಿ: ಪೋರ ಬರಲಿದ್ದಾನೆ ಹಾಕದೇ ಅರ್ಜಿ!
ಆದರೆ ಪ್ರಧಾನಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಖಚಿತಪಟ್ಟಿಲ್ಲ. ಪೂರ್ವನಿಗದಿತ ಕಾರ್ಯಕ್ರಮದ ಪ್ರಕಾರ ಅಂದು ಪ್ರಧಾನಮಂತ್ರಿಗಳು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ತೆರಳಬೇಕಿದ್ದು, 30 ವಿವಿಧ ಯೋಜನೆಗಳನ್ನು ಉದ್ಘಾಟಿಸುವವರಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಸಮಾರಂಭ ನಡೆಯಲಿದೆ. ದಿಲ್ಲಿ ನಾಗರಿಕರೆಲ್ಲ ಸಮಾರಂಭಕ್ಕೆ ಬರಬೇಕು ಎಂದು ಕೇಜ್ರಿವಾಲ್ ಅವರು ಶುಕ್ರವಾರದ ಬಹುತೇಕ ಎಲ್ಲ ದಿನಪತ್ರಿಕೆಗಳ ಮುಖಪುಟಗಳಿಗೆ ಜಾಹೀರಾತು ನೀಡಿದ್ದಾರೆ.