Article 370: ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕವೆಂದ ಬಿಜೆಪಿ; ತಕ್ಷಣ ಎಲೆಕ್ಷನ್ಗೆ ‘ಕೈ’ ಆಗ್ರಹ
ಈ ಐತಿಹಾಸಿಕ ತೀರ್ಪು ಪ್ರತಿ ಭಾರತೀಯರಲ್ಲೂ ಸಂತಸ ಮೂಡಿಸಲಿದೆ. ಇಂದು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಹೊಸ ಪಥದಲ್ಲಿ ಹೆಜ್ಜೆ ಇಟ್ಟಿದೆ ಎಂದು ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.
![article 370 verdict by supreme court bjp congress reaction ash article 370 verdict by supreme court bjp congress reaction ash](https://static-ai.asianetnews.com/images/01hhbw1wan5gtscm82zfwecp23/Same-sex-marriage-news-update-1702279311701_363x203xt.jpg)
ನವದೆಹಲಿ (ಡಿಸೆಂಬರ್ 12, 2023): ಸಂವಿಧಾನದ 370ನೇ ವಿಧಿ ರದ್ದು ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿದ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ಬಿಜೆಪಿ ಬಣ್ಣಿಸಿದೆ. ಜೊತೆಗೆ, 370ನೇ ವಿಧಿ ರದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಹೊಸ ಶಕ್ತಿ ನೀಡಿದ್ದಾರೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ‘ಈ ಐತಿಹಾಸಿಕ ತೀರ್ಪು ಪ್ರತಿ ಭಾರತೀಯರಲ್ಲೂ ಸಂತಸ ಮೂಡಿಸಲಿದೆ. ಇಂದು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಹೊಸ ಪಥದಲ್ಲಿ ಹೆಜ್ಜೆ ಇಟ್ಟಿದೆ ಎಂದು ಬಣ್ಣಿಸಿದ್ದಾರೆ.
ಇನ್ನು, ‘ಈ ತೀರ್ಪು ರಾಷ್ಟ್ರೀಯ ಮನೋಭಾವ ಹೊಂದಿರುವವರಿಗೆ ಸಿಕ್ಕಿರುವ ಮತ್ತೊಂದು ಗೆಲುವು ಮತ್ತು ಸಂಭ್ರಮಾಚರಣೆ ಸಮಯ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಣ್ಣಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರ ವಿಮೋಚನೆಯ ಮೋದಿ ಕನಸು ನನಸು: ಏಕತಾ ಯಾತ್ರೆಯಿಂದ ಆರಂಭಿಸಿ ಮೂರೂವರೆ ದಶಕಗಳ ಹೋರಾಟ
ಜಮ್ಮು ಕಾಶ್ಮೀರ: ತಕ್ಷಣ ಎಲೆಕ್ಷನ್ಗೆ ‘ಕೈ’ ಆಗ್ರಹ
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವ ಸಂಸತ್ತಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ಸೆಪ್ಟೆಂಬರ್ 30, 2024ರೊಳಗೆ ಚುನಾವಣೆ ನಡೆಸಬೇಕು ಎಂದು ತೀರ್ಪು ನಿಡಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದ ಕಾಂಗ್ರೆಸ್ ಘಟಕವು ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದೆ. ಈ ಕುರಿತು ಮಾತನಾಡಿದ ಜಮ್ಮು ಕಾಂಗ್ರೆಸ್ ರಾಜ್ಯಾಧ್ಯಕ್ಷ ವಿಕಾರ್ ರಸೂರ್ ವಾನಿ, ‘ಸುಪ್ರೀಂ ಕೋರ್ಟ್ನ ತೀರ್ಪನ್ನು ನಾವು ಸ್ವಾಗತಿಸುತ್ತಿದ್ದು, ಚುನಾವಣೆ ನಡೆಸುವ ಮೊದಲು ಸಂಪೂರ್ಣ ರಾಜ್ಯದ ಸ್ಥಾನಮಾನ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿದಂಬರಂ, ‘ಸುಪ್ರೀಂ ಕೋರ್ಟ್ನ ಆದೇಶದಂತೆ ತಕ್ಷಣವೇ ಚುನಾವಣೆ ನಡೆಸಿ ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು’ ಎಂದು ತಿಳಿಸಿದ್ದಾರೆ.
ಇದನ್ನು ಓದಿ: Article 370: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೋದಿ, ಅಮಿತ್ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..
ಹಾಗೆಯೇ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಮಾತನಾಡಿ, ‘ಸುಪ್ರೀಂ ಕೋರ್ಟ್ ಜಮ್ಮು ಮತ್ತು ಲಡಾಖ್ಗೆ ಕೇಂದ್ರಾಡಳಿತದ ಸ್ಥಾನಮಾನ ಕೊಟ್ಟಿರುವ ಬಗ್ಗೆ ಯಾವುದೇ ತೀರ್ಪನ್ನು ಪ್ರಕಟಿಸದಿರುವುದು ಬೇಸರ ತರಿಸಿದೆ. ಜಮ್ಮು ಕಾಶ್ಮೀರದ ಜನತೆ ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದು, ಚುನಾಯಿತ ಸರ್ಕಾರ ನಡೆಸಲು ಬಿಜೆಪಿ ಏಕೆ ಭಯಪಡುತ್ತಿದೆ?’ ಎಂದು ವ್ಯಂಗ್ಯವಾಡಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಮೋದಿ ಸರ್ಕಾರಕ್ಕೆ ಜಯ