ಪ್ರಾಣಿಗಳ ಕಾಡುತ್ತಿರುವ ವೈರಸ್; ಕೊರೋನಾಕ್ಕೆ ಮತ್ತೊಂದು ಸಿಂಹ ಬಲಿ
* ಕೊರೋನಾಕ್ಕೆ ಬಲಿಯಾದ ಸಿಂಹ
* ಈ ತಿಂಗಳಿನಲ್ಲಿ ಎರಡು ಸಿಂಹ ಸಾವು
* ಪ್ರಾಣಿಗಳನ್ನು ಕಾಡುತ್ತಿದೆ ಮಾರಕ ವೈರಸ್
* ಚೆನ್ನೈ ಮೃಗಾಲಯದಲ್ಲಿ ಕಣ್ಣೀರ ಕಹಾನಿ
ಚೆನ್ನೈ( ಜು. 16) ಕೊರೋನಾ ಮಾನವರಿಗೆ ಮಾತ್ರ ಅಲ್ಲ ಪ್ರಾಣಿಗಳನ್ನು ಕಾಡುತ್ತಿದೆ. ಚೆನ್ನೈನಲ್ಲಿರುವ ವಂಡಲೂರು ಮೃಗಾಲಯದಲ್ಲಿ ಕೋವಿಡ್ ಸಾಂಕ್ರಾಮಿಕ ಸಾವಿನ ಸರಣಿ ಮುಂದುವರಿದಿದ್ದು, ಬುಧವಾರ ಗಂಡು ಸಿಂಹವೊಂದು ಸೋಂಕಿಗೆ ಬಲಿಯಾಗಿದೆ.
12 ವರ್ಷದ ಪದ್ಮನಾಥನ್ ಹೆಸರಿನ ಗಂಡು ಸಿಂಹವೊಂದು ಸಾವನ್ನಪ್ಪಿದೆ. ಈ ಹಿಂದೆಯೇ ಸಿಂಹ ಸೋಂಕಿಗೆ ತುತ್ತಾಗಿದ್ದು ದೃಢಪಟ್ಟಿತ್ತು. ಅಂದಿನಿಂದಲೇ ಸಿಂಹಕ್ಕೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಸಿಂಹದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಜೂನ್ 16 ಬೆಳಗ್ಗೆ 10. 15 ವೇಳೆ ಸಿಂಹ ಕೊನೆ ಉಸಿರು ಎಳೆದಿದೆ.
ಈ ಮೃಗಾಲಯದಲ್ಲಿ ಎರಡನೇ ಸಿಂಹ ಕೊರೋನಾಕ್ಕೆ ಬಲಿಯಾಗಿದೆ. ಜೂನ್ 3 ರಂದು ಒಂದು ಸಿಂಹ ಕೊರೋನಾದಿಂದ ಮೃತಪಟ್ಟಿತ್ತು. ಸಿಂಹ ಘನ ಆಹಾರವನ್ನು ತ್ಯಜಿಸಿತ್ತು. ಹೀಗಾಗಿ ಸಿಂಹಕ್ಕೆ ದ್ರವಾಹಾರ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಿಂಹ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮೃಗಾಲಯದಲ್ಲಿರುವ 14 ಸಿಂಹಗಳು ಪೈಕಿ ಮೂರು ಸಿಂಹಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಎಲ್ಲ ಸಿಂಹಗಳಲ್ಲೂ ಸೋಂಕು ದೃಢವಾಗಿತ್ತು.