ಪಶ್ಚಿಮ ಬಂಗಾಳದಲ್ಲಿ ಗೆದ್ದ ನಂತರ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅವರ ಈ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಬಂಗಾಳದ ನಂತರ ದೆಹಲಿಯನ್ನು ಆಕ್ರಮಿಸುವುದೇ ನನ್ನ ಗುರಿ ಎಂದ ಮಮತಾ ಬ್ಯಾನರ್ಜಿ:

ಕೋಲ್ಕತ್ತಾ: ನಿನ್ನೆಯಷ್ಟೇ ಪಶ್ಚಿಮ ಬಂಗಾಳದ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಹೀಗಿರುವಾಗ ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆದ್ದ ಬಳಿಕ ನಾವು ದೆಹಲಿಯಲ್ಲಿ ಗೆಲ್ಲುವತ್ತಾ ಗಮನ ಹರಿಸುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕ ಅಮಿತ್ ಶಾ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದು, ಮಮತಾಗೆ ಬಂಗಾಳದಲ್ಲಿ ಏನು ಉಳಿದಿಲ್ಲ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಚೌರಿಂಗೀ ಪ್ರದೇಶದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ, ತಾವು ದೆಹಲಿಯಲ್ಲಿ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಶಕ್ತಿ ಕಡಿಮೆ ಮಾಡುವುದಾಗಿ ಹೇಳಿದರು.

ಇದನ್ನೂ ಓದಿ: ಆಡುತ್ತಿದ್ದ ಜೋಕಾಲಿಯೇ ಪ್ರಾಣಕ್ಕೆ ಉರುಳಾಯ್ತು: ಜೋಕಾಲಿ ಆಡುತ್ತಿದ್ದಾಗ ಕುಣಿಕೆ ಬಿಗಿದು ಬಾಲಕಿ ಸಾವು

ಇದನ್ನು ನೀವು ನೆನಪಿಟ್ಟುಕೊಳ್ಳಿ, ನೀವು ನಮ್ಮಸೋಲಿಸಲು ಸಾಧ್ಯವಿಲ್ಲ, ನಾವು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ನಾನು ಬಂಗಾಳದಲ್ಲಿಯೇ ಹುಟ್ಟಿ ಬೆಳೆದಿದ್ದೇನೆ ಹಾಗೂ ನಾನು ನನ್ನ ಕೊನೆ ಉಸಿರನ್ನು ಇಲ್ಲೇ ಬಿಡುತ್ತೇನೆ. ನಾನು ಈ ಬಂಗಾಳದಲ್ಲಿ ಗೆಲುವು ಖಚಿತಪಡಿಸಿಕೊಂಡ ನಂತರ ನಾನು ದೆಹಲಿಯನ್ನು ನಮ್ಮ ಸುಪರ್ದಿಗೆ ಪಡೆಯುತ್ತೇವೆ. ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು ಒಟ್ಟು ಸೇರಿಸುತ್ತೇನೆ. ನನಗೆ ಯಾವುದೇ ಅಧಿಕಾರ ಬೇಡ. ಆದರೆ ದೆಹಲಿಯಲ್ಲಿ ಸಂಪೂರ್ಣವಾಗಿ ಬಿಜೆಪಿಯನ್ನು ಕಿತ್ತು ಹಾಕುವುದು ನನ್ನ ಗುರಿ. ಬಂಗಾಳದಲ್ಲಿ ಅವರ ನಾಶ ಅನಿವಾರ್ಯ ಇದರ ಜೊತೆಗೆ ದೆಹಲಿಯಲ್ಲೂ ಅವರನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕು ಎಂದು ಪಶ್ಚಿಮ ಬಂಗಾಳ ಹಾಲಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದರು.

ಇಲ್ಲಿ ಟಿಎಂಸಿಯಿಂದ ಕಣಕ್ಕಿಳಿದಿರುವ ಎರಡು ಬಾರಿ ಶಾಸಕಿ ಆಗಿರುವ ನೈನಾ ಬಂಡೋಪಾಧ್ಯಾಯ ಪರ ಮಮತಾ ಅವರು ಇಲ್ಲಿ ಪ್ರಚಾರ ನಡೆಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಸಂತೋಷ್ ಪಠಾಕ್ ಅವರು ಕಣಕ್ಕಿಳಿದಿದ್ದಾರೆ. ಯಾರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೋ ಅವರೆಲ್ಲರ ಹೆಸರನ್ನು ನಾನು ಬರೆದಿಟ್ಟುಕೊಂಡಿದ್ದೇನೆ.

ಇದನ್ನೂ ಓದಿ: ಪ್ರಿ ಫೈರ್ ಗೇಮ್ ಅಡಿಕ್ಷನ್: ಆಟ ಆಡೋಕೆ ಮೊಬೈಲ್ ಕೊಟ್ಟಿಲ್ಲ ಅಂತ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ

ನಮ್ಮ ಮೇಲೆ ನಿಗಾ ಇಡಬಹುದೆಂದು ನೀವು ಭಾವಿಸುತ್ತೀರಾ? ನೀವು ಸೇರಿಸಿಕೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು, ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸಿದ ನಂತರವೇ ನೀವು ಅವರನ್ನು ಬಿಜೆಪಿಗೆ ಕರೆತಂದಿದ್ದೀರಿ ಮತ್ತು ಅದೇ ಮಾನದಂಡದ ಆಧಾರದ ಮೇಲೆ ಅಧಿಕಾರಿಗಳನ್ನು ನೇಮಿಸಿದ್ದೀರಿ ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಮಮತಾ ಬ್ಯಾನರ್ಜಿ ಮಾತಿಗೆ ಅಮಿತ್ ಷಾ ಹೇಳಿದ್ದೇನು?

ಆದರೆ ಮಮತಾ ಬ್ಯಾನರ್ಜಿಯವರ ಈ ರೋಷಾಕ್ರೋಶದಿಂದ ಕೂಡಿದ ಚುನಾವಣಾ ಪ್ರಚಾರದಲ್ಲಿ ಆಡಿದ ಮಾತಿಗೆ ಕೇಂದ್ರ ಗೃಹ ಸಚಿವ ಮುಸಿ ಮುಸಿ ನಕ್ಕಿದ್ದಾರೆ. ಅವರಿಗೆ ಇಲ್ಲಿ ಏನು ಉಳಿದಿಲ್ಲ, ಇನ್ನೂ ದೆಹಲಿಗೆ ಅವರು ಹೇಗೆ ಬರುತ್ತಾರೆ ಅವರ ಮಾತಿಗೆ ನಾನೇನು ಹೇಳಲಿ ಎಂದು ಅಮಿತ್ ಷಾ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಪರ ಪಶ್ಚಿಮ ಬಂಗಾಳದಲ್ಲಿ ಅಮಿತ್ ಷಾ ಪ್ರಚಾರ ನಡೆಸುತ್ತಿದ್ದಾರೆ.