ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಿಂದ ಹಿಂದೆ ಸರಿದ ಪಶ್ಚಿಮ ಬಂಗಾಳ
- ಕೇಂದ್ರದಿಂದ ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮ
- ಕಾರ್ಯಕ್ರಮ ಆಚರಿಸದಿರಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧಾರ
- 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಆಯೋಜಿಸಿದ್ದ ಕಾರ್ಯಕ್ರಮ
ಪಶ್ಚಿಮ ಬಂಗಾಳ ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳು ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವ (AKAM) ಕಾರ್ಯಕ್ರಮದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ರಾಜ್ಯಗಳೊಂದಿಗೆ ಕೆಲಸ ಮಾಡಲು ಕೇಂದ್ರ ಸರ್ಕಾರವು ಎಲ್ಲರನ್ನೂ ಒಗ್ಗೂಡಿಸುವ ವಿಧಾನದ ಕೊರತೆಯಿಂದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಟಿಎಂಸಿ ಪಕ್ಷ ಹೇಳಿದೆ.
ಈ ರೀತಿ ಕೇಂದ್ರದ ಕಾರ್ಯಕ್ರಮವನ್ನು ಟಿಎಂಸಿ ಬಹಿಷ್ಕರಿಸುತ್ತಿರುವುದು ಹೊಸದೇನಲ್ಲ. ಪೋಷಣ್ ಅಭಿಯಾನದ ಅಡಿಯಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ, ಹೆರಿಗೆ ಯೋಜನೆಗಳು ಮತ್ತು ಕೇಂದ್ರದ ಪ್ರಮುಖ ಆರೋಗ್ಯ ವಿಮಾ ಯೋಜನೆ, ಆಯುಷ್ಮಾನ್ ಭಾರತ್ ಅಡಿಯಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಕೇಂದ್ರದ ಹಲವು ಯೋಜನೆಗಳನ್ನು ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಆಗಾಗ ಬಹಿಷ್ಕರಿಸಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವೂ ರೈತರಿಗೆ ವಾರ್ಷಿಕ ಕನಿಷ್ಠ ಆದಾಯ ಬೆಂಬಲ ಯೋಜನೆಯನ್ನು ಕೂಡ ಕೊನೆಯದಾಗಿ ಅಳವಡಿಸಿಕೊಂಡ ಸರ್ಕಾರವಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ನಡೆಸುವಂತಹ ಕಾರ್ಯಕ್ರಮವಾಗಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಇದನ್ನು ಪ್ರಾರಂಭಿಸಿದರು. ಅಭಿಯಾನದ ಪ್ರಮುಖ ಭಾಗವೆಂದರೆ 'ಗುಮ್ನಾಮ್ ನಾಯಕ್' ಅಂದರೆ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಕಥೆಗಳನ್ನು ಸ್ಮರಿಸುವ ಕಾರ್ಯಕ್ರಮವಾಗಿದೆ.
ಸಂಸ್ಕೃತಿ ಕಾರ್ಯದರ್ಶಿ ಗೋವಿಂದ್ ಮೋಹನ್ (Govind Mohan), ಕೇಂದ್ರದ ಈ ಕಾರ್ಯಕ್ರಮದಲ್ಲಿ ರಾಜ್ಯಗಳು ಹೇಗೆ ಭಾಗವಹಿಸುತ್ತಿವೆ ಎಂಬುದರ ಕುರಿತು ವಿವರಗಳನ್ನು ಪ್ರಸ್ತುತಪಡಿಸುವಾಗ, ಬಂಗಾಳವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಎಂದು ಹೇಳಿದರು. ಕೇಂದ್ರವು ತನ್ನ ಮೊದಲ ವರ್ಷವನ್ನು ಪೂರೈಸಿರುವ ಮಹೋತ್ಸವದ ಪ್ರಗತಿಯನ್ನು ಪರಿಶೀಲಿಸಲು ಅಮೃತ್ ಸಮಾಗಮ್ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ರಾಜ್ಯಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆಗೆ ಧ್ವನಿಯಾದ ಕ್ರೀಡಾ ತಾರೆಯರು!
ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ(Amit Shah), ರಾಜಕೀಯ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ರಾಜ್ಯಗಳು ಎಕಾಮ್ನಲ್ಲಿ ಭಾಗವಹಿಸಬೇಕು ಏಕೆಂದರೆ ಇದು ರಾಷ್ಟ್ರ ನಿರ್ಮಾಣ ಮತ್ತು ದೇಶವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ. ರಾಜ್ಯಗಳ ಪೈಕಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನವು ಕಳೆದ ಒಂದು ವರ್ಷದಲ್ಲಿ AKAM ಅಡಿಯಲ್ಲಿ 1,284 ಕಾರ್ಯಕ್ರಮಗಳ ಮೂಲಕ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹರಿಯಾಣ(Haryana) (1,208), ಗುಜರಾತ್(Gujarat) (1,018), ತ್ರಿಪುರ (Tripura)(716), ಮಧ್ಯಪ್ರದೇಶ(Madhya Pradesh) (402) ಮತ್ತು ಉತ್ತರ ಪ್ರದೇಶ ( Uttar Pradesh)(327) ಸಹ ಉತ್ಸಾಹದ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಿವೆ. ತೆಲಂಗಾಣ (11) ಮತ್ತು ಅಸ್ಸಾಂ (20) ಕಡಿಮೆ ಸಂಖ್ಯೆಯ ಕಾರ್ಯಕ್ರಮಗಳನ್ನು ದಾಖಲಿಸಿವೆ.
ಪಶ್ಚಿಮ ಬಂಗಾಳ ಸರ್ಕಾರ ಕಾರ್ಯಕ್ರಮ ಬಹಿಷ್ಕರಿಸಿದ ಬಗ್ಗೆ ಮಾತನಾಡಿದ ಟಿಎಂಸಿ ಸಂಸದ (TMC MP) ಸುಖೇಂದು ಶೇಖರ್ ರಾಯ್ (Sukhendu Sekhar Roy), ಆಡಳಿತಕ್ಕೆ ಬಂದಾಗ ರಾಜ್ಯವನ್ನು ಒಟ್ಟು ಸೇರಿಸುವಲ್ಲಿ ಕೇಂದ್ರದಿಂದ ಯಾವುದೇ ಒಗ್ಗಟ್ಟಿನ ಮಾರ್ಗವಿಲ್ಲ ಎಂದು ಇಕಾನಾಮಿಕ್ಸ್ ಟೈಮ್ಸ್ಗೆ ತಿಳಿಸಿದರು. ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶ್ರೀ ಅರಬಿಂದೋ ಅವರ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ನಾವು ನಮ್ಮ ಐಕಾನ್ಗಳನ್ನು ಗೌರವಿಸುತ್ತೇವೆ ಮತ್ತು ಅವರನ್ನು ಶ್ಲಾಘಿಸಲು ಮತ್ತು ಅವರ ಬಗ್ಗೆ ಜಾಗೃತಿ ಮೂಡಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ, ಆದರೆ ಕೇಂದ್ರವು ನಮ್ಮನ್ನು ಒಳಗೊಳ್ಳದೆ ಅಥವಾ ಯಾವುದೇ ಬೆಂಬಲವನ್ನು ತೆಗೆದುಕೊಳ್ಳದೆ ಕಾರ್ಯಕ್ರಮವನ್ನು ಮಾಡುತ್ತಿದೆ ಎಂದು ರಾಯ್ ಹೇಳಿದರು.