ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಇತ್ತ ಭಾರತೀಯ ಮೌಲ್ಯ, ಒಗ್ಗಟ್ಟು ಪ್ರದರ್ಶಿಸಲು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ರಾಮೇಶ್ವರಂ ಕೆಫೆ ಹೈದರಾಬಾದ್‌ಗೆ ಭೇಟಿ ನೀಡಿ ತಿಂಡಿ ಸವಿದಿದ್ದಾರೆ.

ಹೈದರಾಬಾದ್(ಮಾ.03) ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ದೇಶದ ಜನರಲ್ಲಿ ಆತಂಕ ಹೆಚ್ಚಿಸಿದೆ. ಐಇಡಿ ಸ್ಫೋಟಕದ ಕುರಿತು ತನಿಖೆ ನಡೆಯುತ್ತಿದೆ. ಇದರ ನಡುವೆ ಜನರಿಂದ ಆತಂಕ ದೂರಗೊಳಿಸಲು ಹಾಗೂ ಒಗ್ಗಟ್ಟೂ ಮೂಡಿಸಲು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೈದರಾಬಾದ್‌ನಲ್ಲಿ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ತಿಂಡಿ ಸವಿದಿದ್ದಾರೆ. ಇದೇ ವೇಳೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟವನ್ನು ಖಂಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಹೈದರಾಬಾದ್‌ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಆಹಾರ ಸವಿದಿದ್ದೇನೆ. ಆಹಾರ ರುಚಿ ಉತ್ತಮವಾಗಿದೆ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಹೊಟೆಲ್‌ಗೆ ಇಡಲಾಗಿದೆ ಅನ್ನೋದು ನೆನನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರ. ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಹೇಡಿತನದ ಕೃತ್ಯ. ಇದು ಭಾರತೀಯ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಅಸಾದುದ್ದೀನ್ ಒವೈಸ್ ಹೇಳಿದ್ದಾರೆ.

ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ, ಟವರ್ ಡಂಪ್ ಅಧರಿಸಿ ಓರ್ವ ಬಂಧನ

ಒವೈಸಿ ಹೈದರಾಬಾದ್ ರಾಮೇಶ್ವರಂ ಕೆಫಗೆ ಭೇಟಿ ನೀಡುತ್ತಿದ್ದಂತೆ ಹಲವು ಬೆಂಬಲಿಗರು, ಅಭಿಮಾನಿಗಳು ಒವೈಸಿ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಒವೈಸಿ ಜೊತೆ ಮಾತುಕತೆ ನಡೆಸಿದ್ದಾರೆ. ಆಹಾರ ಸವಿಯುತ್ತಾ, ಹೊಟೆಲ್‌ಗೆ ಆಗಮಿಸಿದ ಗ್ರಾಹಕರ ಜೊತೆ ಒವೈಸಿ ಮಾತನಾಡಿದ್ದಾರೆ.

ಎಪಿಜಿ ಅಬ್ದುಲ್‌ ಕಲಾಂ ಅವರನ್ನು ಮಾದರಿಯಾಗಿ ತೆಗೆದುಕೊಂಡು ರಾಮೇಶ್ವರಂ ಕೆಫೆ ಹೋಟೆಲ್ ಆರಂಭಿಸಲಾಗಿದೆ. ಕೆಫೆಯ ಮಾಲೀಕ ರಾಘವೇಂದ್ರ ರಾವ್‌ ಕೋಲಾರ ಮೂಲದವರು. 2012ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭಿಸಿದ ಕೆಫೆ ಇದೀಗ ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಶಾಖೆಗಳನ್ನು ಹೊಂದಿದೆ. 

'ರಾಮೇಶ್ವರ ಕೆಫೆಯಲ್ಲಿ ಈ ಹಿಂದೆ 2 ಅನಾಥ ಬ್ಯಾಗ್‌ ಸಿಕ್ಕಿತ್ತು..: ಕೆಫೆ ಒಡತಿ ದಿವ್ಯಾ ರಾವ್‌ ಹೇಳಿದ್ದೇನು?

ಸದ್ಯ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಎನ್ಐಎ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಸೇರಿದಂತೆ ಹಲವರು ನಾಯಕರು ಭೇಟಿ ನೀಡಿದ್ದಾರೆ. ತನಿಖೆ ಕಾರಣದಿಂದ ಸದ್ಯ ರಾಮೇಶ್ವರಂ ಕೆಫೆಯನ್ನು ಮುಚ್ಚಲಾಗಿದೆ. ಶಿವರಾತ್ರಿಗೆ ರಾಮೇಶ್ವರಂ ಕೆಫೆ ಮತ್ತೆ ಕಾರ್ಯಾರಂಭಿಸಲಿದೆ ಎಂದು ರಾಘವೇಂದ್ರ ರಾವ್‌ ಹೇಳಿದ್ದಾರೆ.

Scroll to load tweet…

ಸದ್ಯ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯ ನಾಲ್ಕು ಶಾಖೆಗಳು ಹಾಗೂ ಹೈದರಾಬಾದ್‌ನಲ್ಲಿ ಒಂದು ಶಾಖೆ ಇದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆಯಲು ಕೆಫೆ ಮಾಲೀಕರು ಸಜ್ಜಾಗಿದ್ದಾರೆ. ಇದೇ ವೇಳೆ ಈ ಸ್ಫೋಟ ನಡೆದಿದೆ.