ಈ ಹಿಂದೆ ರಾಜಾಜಿನಗರದ ರಾಮೇಶ್ವರಂ ಕೆಫೆ ಶಾಖೆಯಲ್ಲಿ ಎರಡು ಬ್ಯಾಗ್‌ ಸಿಕ್ಕಿದ್ದವು. ಆದರೆ, ಆ ಬ್ಯಾಗ್‌ಗಳಲ್ಲಿ ಯಾವುದೇ ಸ್ಫೋಟಕಗಳು ಸಿಕ್ಕಿರಲಿಲ್ಲ. ಈ ಬಾರಿ ಬ್ಯಾಗ್‌ನಲ್ಲೇ ಸ್ಫೋಟ ಸಂಭವಿಸಿದೆ ಎಂಬುದು ತಿಳಿದು ಬಂದಿದೆ ಎಂದು ರಾಮೇಶ್ವರಂ ಕೆಫೆ ಸಹ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಎಸ್‌.ರಾವ್‌ ಹೇಳಿದ್ದಾರೆ.

ಬೆಂಗಳೂರು (ಮಾ.2): ಈ ಹಿಂದೆ ರಾಜಾಜಿನಗರದ ರಾಮೇಶ್ವರಂ ಕೆಫೆ ಶಾಖೆಯಲ್ಲಿ ಎರಡು ಬ್ಯಾಗ್‌ ಸಿಕ್ಕಿದ್ದವು. ಆದರೆ, ಆ ಬ್ಯಾಗ್‌ಗಳಲ್ಲಿ ಯಾವುದೇ ಸ್ಫೋಟಕಗಳು ಸಿಕ್ಕಿರಲಿಲ್ಲ. ಈ ಬಾರಿ ಬ್ಯಾಗ್‌ನಲ್ಲೇ ಸ್ಫೋಟ ಸಂಭವಿಸಿದೆ ಎಂಬುದು ತಿಳಿದು ಬಂದಿದೆ ಎಂದು ರಾಮೇಶ್ವರಂ ಕೆಫೆ ಸಹ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಎಸ್‌.ರಾವ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ತಮ್ಮ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟದ ಘಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಹಿಂದೆ ಸಿಕ್ಕಿದ್ದ ಎರಡು ಬ್ಯಾಗ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೆವು. ಆ ಬ್ಯಾಗ್‌ಗಳಲ್ಲಿ ಯಾವುದೇ ಸ್ಫೋಟಕ ಅಥವಾ ಸ್ಫೋಟಕ ವಸ್ತುಗಳು ಇರಲಿಲ್ಲ. ಈ ಬಾರಿ ಬ್ರೂಕ್‌ ಫೀಲ್ಡ್‌ನ ಹೋಟೆಲ್‌ನ ಶಾಖೆಯಲ್ಲಿ ಬ್ಯಾಗ್‌ ಸ್ಫೋಟಗೊಂಡಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.

ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು 'ನಮ್ಮ ಬ್ರದರ್ಸ್' ಅಂದಿದ್ದ ಡಿಕೆಶಿ, ಈಗ ಬಾಂಬರ್‌ಗೆ ಆಂಕಲ್ ಅಂತಾರಾ? ಬಿಜೆಪಿ ಕಿಡಿ

ಹೋಟೆಲ್‌ನಲ್ಲಿ ಗ್ರಾಹಕರು ಕೈ ತೊಳೆಯುವ ಪ್ರದೇಶದಲ್ಲಿ ಬ್ಯಾಗ್‌ ಬ್ಲಾಸ್ಟ್‌ ಆಗಿದೆ. ಯಾರು ಯಾವ ಉದ್ದೇಶಕ್ಕೆ ಈ ಕೃತ್ಯ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಸ್ಫೋಟದ ಜಾಗದಲ್ಲಿ ಐಡಿ ಕಾರ್ಡ್‌, ಬ್ಯಾಟರಿ ಸಿಕ್ಕಿದೆ ಎಂದು ಮಾಹಿತಿ ಬಂದಿದೆ. 10 ಸೆಕೆಂಡ್ ಅಂತರದಲ್ಲಿ ಎರಡು ಬಾರಿ ಸ್ಫೋಟವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ನಮ್ಮ ಮೂವರು ಸಿಬ್ಬಂದಿ ಸೇರಿದಂತೆ ಕೆಲ ಗ್ರಾಹಕರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಉಗ್ರ ಚಟುವಟಿಕೆ ಹೆಚ್ಚಳ -ಈಶ್ವರಪ್ಪ

ಸ್ಫೋಟದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲ ವಿಡಿಯೊಗಳನ್ನು ಪೊಲೀಸರಿಗೆ ನೀಡಲಾಗಿದೆ. ಈ ಘಟನೆಯಿಂದ ನಾನು ಶಾಕ್‌ನಲ್ಲಿ ಇದ್ದೇನೆ. ಯಾಕೆ ನಮ್ಮನ್ನೇ ಗುರಿಯಾಗಿಸಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ನಾವು ಕಷ್ಟಪಟ್ಟು ಹೋಟೆಲ್‌ ವ್ಯವಹಾರ ಮಾಡುತ್ತಿದ್ದೇವೆ. ಈ ಸ್ಫೋಟದ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರೇ ತನಿಖೆ ಮಾಡಿ ಬೆಳಕಿಗೆ ತರಬೇಕು ಎಂದು ಹೇಳಿದರು.