ಕಾಲುವೆಗೆ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿದ ತಂದೆ ಬಂಧನ. ತಾಯಿ ಮುಂದೆಯೇ ಕೊಲೆ, ಗಂಡನ ಬೆದರಿಕೆಗೆ ಸುಮ್ಮನಿದ್ದ ಮಹಿಳೆ. ಒಂದು ತಿಂಗಳ ಬಳಿಕ ಸತ್ಯ ಬಯಲು.
ಅಹಮಾದಾಬಾದ್: ನರ್ಮದಾ ಕಾಲುವೆಗೆ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿರುವ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಮುಂದೆಯೇ ಈ ಕೊಲೆ ನಡೆದಿದ್ದು, ಗಂಡ ಬೆದರಿಕೆ ಹಾಕಿದ್ದರಿಂದ ಮಹಿಳೆ ಸುಮ್ಮನಾಗಿದ್ದಳು. ವಿಜಯ್ ಸೋಲಂಕಿ ಬಂಧಿತ ತಂದೆ. ಏಳು ವರ್ಷದ ಭೂಮಿಕಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಜೂನ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಮಗಳ ಸಾವಿನ ರಹಸ್ಯವನ್ನು ತಾಯಿ ಮರೆಮಾಡಿದ್ದಳು. ಹೆಚ್ಚು ದಿನ ಸತ್ಯ ಮರೆ ಮಾಡಲು ಸಾಧ್ಯವಾಗದ ಕಾರಣ ಪೊಲೀಸರಿಗೆ ತಿಳಿಸಿದ್ದಾಳೆ. ವಿಜಯ್ ಸೋಲಂಕಿ ಮತ್ತು ಅಂಜನಾ ಸೋಲಂಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು.
ವಿಜಯ್ ಸೋಲಂಕಿಗೆ ಗಂಡು ಬೇಕಿತ್ತು!
ಜೂನ್ 10ರಂದು ವಿಜಯ್ ಸೋಲಂಕಿ ಪತ್ನಿ ಮತ್ತು ಹಿರಿಯ ಮಗಳು ಭೂಮಿಕಾ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದನು. ಇದೇ ಸಮಯದಲ್ಲಿ ಅಂಜನಾ ತನ್ನ ತವರು ಮನೆಗೆ ಹೋಗುವಂತೆ ಹೇಳಿದ್ದಾಳೆ. ಇದಕ್ಕೆ ಗಂಡ ವಿಜಯ್ ಸೋಲಂಕಿ ಒಪ್ಪಿಲ್ಲ. ಈ ಸಂಬಂಧ ವಿಜಯ್ ಸೋಲಂಕಿ ಮತ್ತು ಅಂಜನಾ ಮಧ್ಯೆ ಗಲಾಟೆ ಶುರುವಾಗಿದೆ. ಈ ವೇಳೆ ಮಾರ್ಗ ಮಧ್ಯೆ ವಿಜಯ್ ಸೋಲಂಕಿ ನರ್ಮದಾ ಕಾಲುವೆ ಬಳಿ ಬೈಕ್ ನಿಲ್ಲಿಸಿದ್ದಾನೆ. ನನಗೆ ಗಂಡು ಮಗು ಬೇಕಿತ್ತು. ಆದ್ರೆ ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿ ಏಳು ವರ್ಷದ ಮಗಳು ಭೂಮಿಕಾಳನ್ನು ತುಂಬಿ ಹರಿಯುತ್ತಿದ್ದ ನರ್ಮದಾ ಕಾಲುವೆಗೆ ತಳ್ಳಿದ್ದಾನೆ.
ನಿಜ ಹೇಳಿದ್ರೆ ವಿಚ್ಛೇದನ ಕೊಡುವೆ
ಪೊಲೀಸರ ಮುಂದೆ ಕಾಲುವೆಯಲ್ಲಿ ಮಗಳು ಮೀನು ನೋಡಲು ಹೋದಾಗ ಆಯತಪ್ಪಿ ಕಾಲುವೆಗೆ ಬಿದ್ದಿದ್ದಾಳೆ ಎಂದು ವಿಜಯ್ ಸೋಲಂಕಿ ಮತ್ತು ಅಂಜನಾ ಹೇಳಿಕೆ ದಾಖಲಿಸಿದ್ದರು. ಪೊಲೀಸರು ಸಹ ಇದೇ ಹೇಳಿಕೆಯನ್ನು ಸತ್ಯ ಎಂದು ನಂಬಿದ್ದರು. ಸತ್ಯ ಹೇಳಿದ್ರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಅಂಜನಾ ಸತ್ಯ ಹೇಳದೇ ಗಂಡ ಆಜ್ಞೆಯಂತೆ ಸುಮ್ಮನಿದ್ದಳು.
ಇದೀಗ ಒಂದು ತಿಂಗಳ ಬಳಿಕ ಮಗಳು ಭೂಮಿಕಾ ಸಾವಿನ ಸತ್ಯವನ್ನು ಅಂಜನಾ ಹೇಳಿದ್ದಾಳೆ. ಮೀನು ತೋರಿಸುವ ನೆಪದಲ್ಲಿ ಕಾಲುವೆ ಬಳಿ ಕರೆದುಕೊಂಡು ಹೋಗಿ ತಳ್ಳಿ ಕೊಂದನು ಎಂದು ಅಂಜನಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅಂಜನಾ ಹೇಳಿಕೆ ಬೆನ್ನಲ್ಲೇ ಪೊಲೀಸರು ವಿಜಯ್ ಸೋಲಂಕಿಯನ್ನು ಬಂಧಿಸಿದ್ದಾರೆ.
ಪ್ಯಾಂಟ್ನಲ್ಲಿ ಸೂ*ಸೈಡ್ ನೋಟ್ ಬರೆದಿಟ್ಟು ಯುವಕ ಆತ್ಮಹ*ತ್ಯೆ
ಉತ್ತರ ಪ್ರದೇಶದ ಯುವಕನೊಬ್ಬ ಪ್ಯಾಂಟ್ ಮೇಲೆ ಡೆತ್ ನೋಟ್ ಬರೆದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಫರೂಕಾಬಾದ್ ಮೂಲದ ದಿಲೀಪ್ ರಜಪೂತ್ ಮನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಪತ್ನಿ ಮತ್ತು ಕುಟುಂಬದವರು ತಮ್ಮ ವಿರುದ್ಧ ದೂರು ದಾಖಲಿಸಿದ್ದರಿಂದ ಮತ್ತು ಪ್ರಕರಣವನ್ನು ಮುಚ್ಚಲು ಲಂಚ ಕೇಳಿದ್ದಕ್ಕಾಗಿ ಪೊಲೀಸರು ಥಳಿಸಿದ್ದರಿಂದ ಅವರು ಆತ್ಮಹ*ತ್ಯೆ ಮಾಡಿಕೊಂಡಿರೋದಾಗಿ ದಿಲೀಪ್ ರಜಪೂತ್ ಡೆತ್ನೋಟ್ನಲ್ಲಿ ಬರೆದುಕೊಂಡಿದ್ದಾರೆ.
ಮದ್ಯ ಸೇವಿಸಿದ ದಿಲೀಪ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು, ದಿಲೀಪ್ನನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಪ್ರಕರಣ ಇತ್ಯರ್ಥಪಡಿಸಲು ಕಾನ್ಸ್ಟೆಬಲ್ ಯಶವಂತ್ ಯಾದವ್ 50 ಸಾವಿರ ರೂ. ಲಂಚ ಕೇಳಿದ್ದರು. ಲಂಚ ನೀಡಲು ದಿಲೀಪ್ ಒಪ್ಪದಿದ್ದಾಗ ಕ್ರೂರವಾಗಿ ಥಳಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ನೊಂದ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
