ಪೆಟ್ರೋಲ್, ಡೀಸೆಲ್ ಸುಂಕ ಇಳಿಸಿದ ಮೋದಿ ಸರ್ಕಾರವನ್ನು ಶ್ಲಾಘಿಸಿದ ಇಮ್ರಾನ್ ಖಾನ್!
* ಪೆಟ್ರೋಲ್ ದರ ಇಳಿಸಿದ ಮೋದಿ ಸರ್ಕಾರ
* ಮೋದಿ ಸರ್ಕಾರದ ನಡೆ ಶ್ಲಾಘಿಸಿದ ಇಮ್ರಾನ್ ಖಾನ್
* ಭಾರತವು ಅಮೆರಿಕದ ಒತ್ತಡಕ್ಕೆ ಒಳಗಾಗಲಿಲ್ಲ ಎಂದು ಭೇಷ್ ಎಂದ ಖಾನ್
ನವದೆಹಲಿ(ಮೇ.22): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪೆಟ್ರೋಲ್ ದರವನ್ನು ಲೀಟರ್ಗೆ 9.5 ರೂಪಾಯಿ ಮತ್ತು ಡೀಸೆಲ್ಗೆ 7 ರೂಪಾಯಿಯಷ್ಟು ಕಡಿಮೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ದೊಡ್ಡ ರಿಲೀಫ್ ನೀಡಿದೆ. ಭಾರತ ಸರ್ಕಾರದ ಈ ನಡೆಯನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘಿಸಿದ್ದಾರೆ. ಇದರೊಂದಿಗೆ ತಮ್ಮ ದೇಶದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತವು ಅಮೆರಿಕದ ಒತ್ತಡಕ್ಕೆ ಒಳಗಾಗಲಿಲ್ಲ ಎಂದು ಮೋದಿ ಸರ್ಕಾರದ ಬೆನ್ನು ತಟ್ಟಿದ್ದಾರೆ.
ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತವು ರಷ್ಯಾದಿಂದ ತೈಲವನ್ನು ಸಬ್ಸಿಡಿ ದರದಲ್ಲಿ ಖರೀದಿಸಿ ಮತ್ತು ತನ್ನ ಸಾಮಾನ್ಯ ಜನರಿಗೆ ಸಂಕಷ್ಟದಿಂದ ಮುಕ್ತಿ ನೀಡುತ್ತದೆ. ಭಾರತ ಕ್ವಾಡ್ನ ಭಾಗವಾಗಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಅಮೆರಿಕದ ಒತ್ತಡದ ಹೊರತಾಗಿಯೂ, ಅವರು ಸಾರ್ವಜನಿಕರಿಗೆ ಪರಿಹಾರ ನೀಡಲು ಸಬ್ಸಿಡಿ ರಷ್ಯಾದ ತೈಲವನ್ನು ಖರೀದಿಸಿದರು. ಪಾಕಿಸ್ತಾನದ ಸ್ವತಂತ್ರ ವಿದೇಶಾಂಗ ನೀತಿಗಾಗಿ ತಮ್ಮ ಸರ್ಕಾರವೂ ಕೆಲಸ ಮಾಡುತ್ತಿತ್ತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಬಾಹ್ಯ ಒತ್ತಡದಿಂದ ಪಾಕಿಸ್ತಾನದಲ್ಲಿ ಅಧಿಕಾರ ಬದಲಾವಣೆ
ಪ್ರಸ್ತುತ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಸರ್ಕಾರವನ್ನು ಗುರಿಯಾಗಿಸಿದ ಇಮ್ರಾನ್, ಪಾಕಿಸ್ತಾನದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಮತ್ತು ಸರ್ಕಾರ ತಲೆಯಿಲ್ಲದಂತೆ ನಡೆಯುತ್ತಿದೆ ಎಂದು ಹೇಳಿದರು. 'ಮೀರ್ ಜಾಫರ್ ಮತ್ತು ಮೀರ್ ಸಾದಿಕ್' ಅವರು ಬಾಹ್ಯ ಒತ್ತಡಕ್ಕೆ ಮಣಿದು ಪಾಕಿಸ್ತಾನದಲ್ಲಿ ಅಧಿಕಾರವನ್ನು ಬದಲಾಯಿಸಿದ್ದಾರೆ ಎಂದು ಅವರು ಹೇಳಿದರು.
ಇತ್ತೀಚೆಗಷ್ಟೇ ಸಂಯುಕ್ತ ವಿಪಕ್ಷಗಳು ಅವಿಶ್ವಾಸ ನಿರ್ಣಯದ ನೆರವಿನಿಂದ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಕುರ್ಚಿಯಿಂದ ಕೆಳಗಿಳಿಸಲಾಗಿದೆ. ಸರ್ಕಾರದ ಪತನಕ್ಕೆ ಅಮೆರಿಕದ ಪಿತೂರಿಯೇ ಕಾರಣ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು. ವಿದೇಶಿ ಪಿತೂರಿಯಿಂದ ತನ್ನನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರ ಮಹತ್ವದ ಕ್ರಮ
ಬಹು ವರ್ಷಗಳ ಗರಿಷ್ಠಕ್ಕೇರಿರುವ ಹಣದುಬ್ಬರದಿಂದ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ನೀಡಲು ಕೇಂದ್ರ ಸರ್ಕಾರ, ಪಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮಹತ್ವದ ಘೋಷಣೆ ಮಾಡಿದೆ. ಪೆಟ್ರೋಲ್ ಮೇಲೆ 8 ರು. ಮತ್ತು ಡೀಸೆಲ್ ಮೇಲೆ 6 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಇದರಿಂದಾಗಿ, ಇತರ ತೆರಿಗೆ ದರಗಳು ಸೇರಿದಂತೆ ಪೆಟ್ರೋಲ್ ದರವು ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೀಟರ್ಗೆ 9.5 ರು. ಮತ್ತು ಡೀಸೆಲ್ ದರ 7 ರು.ಗಳಷ್ಟುಕಡಿಮೆಯಾಗಲಿದೆ. ಭಾನುವಾರವೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.
ಜೊತೆಗೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್ಪಿಜಿ ಸಂಪರ್ಕ ಪಡೆದಿರುವ ಬಡ ಕುಟುಂಬಗಳ ಪ್ರತಿ ಸಿಲಿಂಡರ್ಗೆ 200 ರು. ಸಹಾಯಧನ (ಸಬ್ಸಿಡಿ) ಪ್ರಕಟಿಸಲಾಗಿದೆ. ಇದರಿಂದ ಬಡವರಿಗೆ ಇನ್ನು 1003 ರು. ಬದಲು ಸುಮಾರು 803 ರು. ದರದಲ್ಲಿ ಎಲ್ಪಿಜಿ ಲಭಿಸಲಿದೆ.
ಶನಿವಾರ ಸಂಜೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಣಿ ಟ್ವೀಟ್ಗಳ ಮೂಲಕ ಈ ಘೋಷಣೆಗಳನ್ನು ಮಾಡಿದ್ದು, ‘ಯುದ್ಧ, ಹಣದುಬ್ಬರಂಥ ಸವಾಲಿನ ಸ್ಥಿತಿಯಲ್ಲೂ ನಮ್ಮ ಸರ್ಕಾರ ಜನಪರ ನಿರ್ಣಯಗಳನ್ನು ಕೈಗೊಂಡಿದೆ. ಕಳೆದ ಬಾರಿ ತೆರಿಗೆ ಕಡಿತ ಮಾಡದ ರಾಜ್ಯಗಳು ಈ ಬಾರಿ ತೆರಿಗೆ ಕಡಿತ ಮಾಡುವ ಮೂಲಕ ಜನರಿಗೆ ನೆರವಾಗ ಬೇಕು’ ಎಂದಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, ‘ನಮಗೆ ಜನಹಿತವೇ ಮೊದಲು. ನಮ್ಮ ನಿರ್ಧಾರದಿಂದ ಜನರ ಜೀವನ ಸುಲಭಗೊಳಿಸಲಿವೆ’ ಎಂದು ಬಣ್ಣಿಸಿದ್ದಾರೆ.
ಭಾನುವಾರದಿಂದಲೇ ಜಾರಿ:
ದರ ಇಳಿಕೆ ಘೋಷಣೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಪೆಟ್ರೋಲ್ ಮೇಲಿನ ಕೇಂದ್ರೀಯ ಸುಂಕವನ್ನು 8 ರು. ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 6 ರು. ಕಡಿತ ಮಾಡುತ್ತಿದ್ದೇವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1 ಲಕ್ಷ ಕೋಟಿ ರು.ನಷ್ಟುಹೊರೆ ಬೀಳಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ತೆರಿಗೆ ಕಡಿತದ ನಂತರ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆಯು ಲೀಟರ್ಗೆ 19.9 ರು. ಮತ್ತು ಡೀಸೆಲ್ ಮೇಲಿನ ತೆರಿಗೆ 15.8 ರು. ಆಗಲಿದೆ. ಭಾನುವಾರದಿಂದ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 95.91 ರು.ಗೆ, ಡೀಸೆಲ್ ದರ 89.67ಕ್ಕೆ ಇಳಿಕೆಯಾಗಲಿದೆ.