ನಟ ಪ್ರಕಾಶ್ ರಾಜ್ಗೆ ಇಡಿ ಶಾಕ್, 100 ಕೋಟಿ ರೂ ಪ್ರಕರಣದಲ್ಲಿ ಸಮನ್ಸ್!
ನಟ ಪ್ರಕಾಶ್ ರಾಜ್ಗೆ ಇಡಿ ಶಾಕ್ ನೀಡಿದೆ. ಜ್ಯೂವೆಲ್ಲರಿ ಸಂಬಂಧಿಸಿದ 100 ಕೋಟಿ ರೂಪಾಯಿ ಚೈನ್ ಲಿಂಕ್ ಹೂಡಿಕೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
ನವದೆಹಲಿ(ನ.23) ಜಸ್ಟ್ ಆಸ್ಕಿಂಗ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ನಟ ಪ್ರಕಾಶ್ ರಾಜ್ಗೆ ಇದೀಗ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಚಿನ್ನಾಭರಣ ವ್ಯಾಪಾರ ಮಳಿಗೆ ಪ್ರಣವ್ ಜ್ಯುವೆಲ್ಲರ್ಸ್ ಚೈನ್ ಲಿಂಕ್ ಆಧಾರಿತ ಹೂಡಿಕೆ ಪ್ರಕರಣ ಸಂಬಂಧಿಸಿ ನಟ ಪ್ರಕಾಶ್ ರಾಜ್ಗೆ ಇಡಿ ಸಮನ್ಸ್ ನೀಡಿದೆ. ಪ್ರಣವ್ ಜ್ಯೂವೆಲ್ಲರಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಪ್ರಕಾಶ್ ರಾಜ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚೆನ್ನೈ, ಪುದುಚೇರಿ, ತಿರುಚ್ಚಿ ಸೇರಿದಂತೆ ತಮಿಳುನಾಡಿಲ್ಲಿ ಹಲವು ಶಾಖೆ ಹೊಂದಿರುವ ಪ್ರಣವ್ ಜ್ಯುವೆಲ್ಲರಿ ಮಳಿಗೆ ಚೈನ್ ಲಿಂಕ್ ಆಧಾರಲ್ಲಿ ಚಿನ್ನದ ಮೇಲೆ ಗ್ರಾಹಕರಿಂದ ಹೂಡಿಕೆ ಮಾಡಿಸಿದೆ. ಈ ಮೂಲಕ ಹೂಡಿಕೆದಾರರಿಗೆ 100 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇಡಿ ಅಧಿಕಾರಿಗಳು ತಿರುಚ್ಚಿ ಸೇರಿದಂತೆ ಪ್ರಣವ್ ಜ್ಯುವೆಲ್ಲರಿಯ ಕೆಲ ಶಾಖೆಗಳಿಗೆ ದಾಳಿ ನಡೆಸಿದ್ದರು.
ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್ ರಾಜ್ಗೆ ನೆಟ್ಟಿಗರ ತರಾಟೆ
ಅಕ್ಟೋಬರ್ ತಿಂಗಳಲ್ಲಿ ಈ ದಾಳಿ ನಡೆದಿತ್ತು. ಹೂಡಿಕೆದಾರರಿಂದ ಬಂದ ಹಲವು ದೂರಗಳ ಆಧರಿಸಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬ್ರಾಂಡ್ ಅಂಬಾಸಿಡರ್ ಆಗಿರುವ ನಟ ಪ್ರಕಾಶ್, ಹೂಡಿಕೆ ಕುರಿತು ಪ್ರಚಾರ ಮಾಡಿದ್ದರು. ಹೂಡಿಕೆದಾರರು ವಂಚನೆ ಕುರಿತು ದೂರು ದಾಖಲಿಸಿ, ಇಡಿ ದಾಳಿ ನಡೆಸಿದ್ದರೂ, ಈ ಕುರಿತು ಪ್ರಕಾಶ್ ರಾಜ್ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದರ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಪ್ರಕಾಶ್ ರಾಜ್ಗೆ ಸಮನ್ಸ್ ನೀಡಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಪ್ರಣವ್ ಜ್ಯುವೆಲ್ಲರಿ ಮಾಲೀಕ ಮದನ್ ಹಾಗೂ ಆತನ ಪತ್ನಿ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿತ್ತು. ಚಿನ್ನದ ಮೇಲೆ ಹೂಡಿಕೆ ನೆಪದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ ಈ ಮೊತ್ತವನ್ನೂ ಹೂಡಿಕೆದಾರರಿಗೆ ಹಿಂತಿರುಗಿಸಿಲ್ಲ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಪ್ರಕಾಶ್ ರಾಜ್ ಮಾನಸಿಕ ಆರೋಗ್ಯಕ್ಕಾಗಿ ಕಂಗನಾ ಫ್ಯಾನ್ಸ್ ಕ್ಲಬ್ ಸೇರಬೇಕಂತೆ! ನಟಿ ಟಾಂಗ್
ಈ ಕುರಿತು ಹೂಡಿಕೆದಾರರು ಹಲವು ಬಾರಿ ಮನವಿ ಮಾಡಿದ್ದಾರೆ. ಇತ್ತ ವಿವಿಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕ ಹಣವನ್ನು ಪ್ರಣವ್ ಜ್ಯೂವೆಲ್ಲರಿ ಚಿನ್ನಾಭರಣ ಖರೀದಿ ನೆಪದಲ್ಲಿ ಬೇರೆಡೆ ತಿರುಗಿಸಿದೆ. ಈ ಮೂಲಕ ಸಾರ್ವಜನಿಕರಿಗೆ ವಂಚಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.