ಆಸ್ಟೇಲಿಯಾದ ಮೆಲ್ಬೋರ್ನ್‌ನಿಂದ ಭಾರತಕ್ಕೆ ಆಗಮಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು ವಿಮಾನದಲ್ಲೇ ಪ್ರಾಣಬಿಟ್ಟ ಆಘಾತಕಾರಿ ಘಟನೆ ಮೆಲ್ಬೋರ್ನ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ದೆಹಲಿ ಮೆಲ್ಬೋರ್ನ್ ಕ್ವಾಂಟಸ್ ವಿಮಾನದಲ್ಲಿ ನಡೆದಿದೆ. 

ಮೆಲ್ಬೋರ್ನ್‌: ಆಸ್ಟೇಲಿಯಾದ ಮೆಲ್ಬೋರ್ನ್‌ನಿಂದ ಭಾರತಕ್ಕೆ ಆಗಮಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು ವಿಮಾನದಲ್ಲೇ ಪ್ರಾಣಬಿಟ್ಟ ಆಘಾತಕಾರಿ ಘಟನೆ ಮೆಲ್ಬೋರ್ನ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ದೆಹಲಿ ಮೆಲ್ಬೋರ್ನ್ ಕ್ವಾಂಟಸ್ ವಿಮಾನದಲ್ಲಿ ನಡೆದಿದೆ. ಜೂನ್ 20 ರಂದು ಘಟನೆ ನಡೆದಿದ್ದು, ಮೃತ ಯುವತಿಯನ್ನು ಮನ್‌ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ. 

ಭಾರತ ಮೂಲದ ಈಕೆ ಇಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡುವುದಕ್ಕಾಗಿ ನಾಲ್ಕು ವರ್ಷಗಳ ನಂತರ ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಹೀಗೆ ಹಠಾತ್ ಸಾವು ಸಂಭವಿಸಿದೆ. ವಿಮಾನದಲ್ಲಿ ಕುಳಿತು ವಿಮಾನ ಇನ್ನೇನು ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಯುವತಿಯನ್ನು ಸಾವು ಎಳೆದೊಯ್ದಿದೆ. 

ಟುಲ್ಲಾಮೇರಿನ್ (Tullamarine Airport) ವಿಮಾನ ನಿಲ್ದಾಣದಲ್ಲಿ ವಿಮಾನವೇರಿದ ಸ್ವಲ್ಪ ಹೊತ್ತಿನಲ್ಲೇ ಮನ್‌ಪ್ರೀತ್ ಕೌರ್ ಅವರಿಗೆ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡಿದೆ. ಅವರ ಸ್ನೇಹಿತರೊಬ್ಬರು ಹೇಳುವ ಪ್ರಕಾರ, 24 ವರ್ಷದ ಈ ವಿದ್ಯಾರ್ಥಿನಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಅನಾರೋಗ್ಯ ಕಾಡಿದೆ. 4 ವರ್ಷಗಳ ನಂತರ ತಮ್ಮೂರು ಹಾಗೂ ತಮ್ಮವರನ್ನು ಕಾಣುವ ತವಕದಲ್ಲಿದ್ದ ಅವರು ಭಾರತದ ದೆಹಲಿಗೆ ಹೊರಟು ನಿಂತಿದ್ದ ವಿಮಾನವೇರುವ ವೇಳೆ ಯಾವುದೇ ತೊಂದರೆ ಇಲ್ಲದೇ ವಿಮಾನ ಹತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ವಿಮಾನವೇರಿದ ಸ್ವಲ್ಪ ಹೊತ್ತಿನಲ್ಲೇ ಅವರು ಬದುಕಿಗೆ ಗುಡ್‌ ಬೈ ಹೇಳಿದ್ದಾರೆ. 

ನೀರಲ್ಲಿ ಬೈಕ್‌ ಸ್ಟಾಟರ್‌ನಲ್ಲಿರಿಸಿ ರೈಲು ಪ್ರಯಾಣಿಕರಿಗೆ ನೀರೆರಚಿದ ಕಿಡಿಗೇಡಿಗಳು: ಆಮೇಲೇನಾಯ್ತು ವೀಡಿಯೋ ನೋಡಿ

ವಿಮಾನದಲ್ಲಿ ಕುಳಿತ ನಂತರ ಸೀಟ್ ಬೆಲ್ಸ್ ಹಾಕುವ ವೇಳೆ ವಿಮಾನದೊಳಗೆಯೇ ಕೌರ್ ನೆಲಕ್ಕೆ ಕುಸಿದು ಅಲ್ಲೇ ಹಠಾತ್ ಸಾವು ಕಂಡಿದ್ದಾರೆ. ಆಕೆ ವಿಮಾನವೇರಿದ ನಂತರ ಸೀಟ್ ಬೆಲ್ಸ್ ಹಾಕಲು ಕಷ್ಟಪಡುತ್ತಿದ್ದಳು. ಅದಾಗಿ ಸೆಕೆಂಡ್‌ಗಳಲ್ಲಿ ವಿಮಾನ ಇನ್ನೇನು ಟೇಕಾಫ್ ಆಗಬೇಕು ಅನ್ನುವಷ್ಟರಲ್ಲಿ ಆಕೆ ತಮ್ಮ ಸೀಟಿನ ಮುಂದೆಯೇ ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪಿದಳು ಎಂದು ಆಕೆಯ ಸ್ನೇಹಿತ ಗುರುದೀಪ್ ಗ್ರೇವಾಲ್ ಆಸ್ಟೇಲಿಯಾದ ಮಾಧ್ಯಮ ಹೆರಾಲ್ಡ್ ಸನ್‌ಗೆ ಮಾಹಿತಿ ನೀಡಿದ್ದಾರೆ. 

ಕೂಡಲೇ ವಿಮಾನದ ಸಿಬ್ಬಂದಿ ಹಾಗೂ ತುರ್ತು ಸೇವಾ ವಿಭಾಗವೂ ಆಕೆಯ ವೈದ್ಯಕೀಯ ಸಹಾಯಕ್ಕೆ ಧಾವಿಸಿತ್ತು. ಆದರೆ ಆಕೆ ಅಷ್ಟರಲ್ಲಿ ಸಾವನ್ನಪ್ಪಿದ್ದಾಳೆ. ಆಕೆಯ ರೂಮ್‌ಮೇಟ್ ಹೇಳುವ ಪ್ರಕಾರ, ಮನ್‌ಪ್ರೀತ್ ಕೌರ್ ಆಸ್ಟೇಲಿಯಾ ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದು, ಆಕೆಗೆ ಪಾಕತಜ್ಞೆಯಾಗುವ (chef) ಆಸೆ ಇತ್ತು ಎಂದು ಹೇಳಿದ್ದರು. ಈಗ ಮನ್ ಪ್ರೀತ್ ಹಠಾತ್ ನಿಧನದಿಂದ ಅವರ ಕುಟುಂಬ ಆಘಾತಕ್ಕೀಡಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬದ ನೆರವಿಗಾಗಿ ಸ್ನೇಹಿತರು ಗೋ ಫಂಡ್ ಮಿ (GoFundMe) ಮೂಲಕ ಹಣ ದೇಣಿಗೆ ಪಡೆದು ಕುಟುಂಬಕ್ಕೆ ನೀಡಲು ಮುಂದಾಗಿದ್ದಾರೆ. 

ಅಮೆರಿಕಾದಲ್ಲಿ ಶಿಕ್ಷಣ ಕೊಡಿಸೋದಾಗಿ ಬಾಲಕನ ಕರೆದೊಯ್ದು ಕೆಲಸಕ್ಕಿಟ್ಟುಕೊಂಡ ಎನ್‌ಆರ್‌ಐ ಜೋಡಿ

ಒಟ್ಟಿನಲ್ಲಿ 4 ವರ್ಷದ ಬಳಿಕ ತನ್ನೂರು ತಮ್ಮವರನ್ನು ನೋಡಬೇಕೆಂಬ ತವಕದಿಂದ ಅನಾರೋಗ್ಯದ ನಡುವೆಯೂ ವಿಮಾನವೇರಿದ ಯುವತಿ ತಾಯ್ನಾಡು ತಲುಪುವ ಮೊದಲೇ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸವೇ ಸರಿ.