ಗಾಲಿಕುರ್ಚಿಯಲ್ಲಿ ರಾಜ್ಯಸಭೆಗೆ ಬಂದ 90ರ ಹರೆಯದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ನಿನ್ನೆ ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಬದಲಾಯ್ತು. ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ 90 ವರ್ಷದ ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯ ಮೂಲಕ ರಾಜ್ಯಸಭಾ ಕಲಾಪಕ್ಕೆ ಆಗಮಿಸಿದ್ದರು
ನವದೆಹಲಿ: ನಿನ್ನೆ ರಾಜ್ಯಸಭೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಬದಲಾಯ್ತು. ಈ ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ 90 ವರ್ಷದ ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯ ಮೂಲಕ ರಾಜ್ಯಸಭಾ ಕಲಾಪಕ್ಕೆ ಆಗಮಿಸಿದ್ದರು. ರಾಜ್ಯಸಭೆಯಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತದ ಕೊರತೆಯಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಈ ಬಿಲ್ಗೆ ತಡೆ ಬೀಳಲೇಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ತನ್ನ ವಯೋವೃದ್ಧ ಹಿರಿಯ ನಾಯಕನನ್ನು ಕೂಡ ಕಲಾಪಕ್ಕೆ ಬರುವಂತೆ ಮಾಡಿತ್ತು. ಆದರೆ ಅಲ್ಲಿ ಜಗನ್ ನೇತೃತ್ವದ ವೈಎಸ್ಆರ್ ಸೇರಿದಂತೆ ಕೆಲ ಪಕ್ಷಗಳು ಆಡಳಿತರೂಢ ಬಿಜೆಪಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ದೆಹಲಿ ಸುಗ್ರೀವಾಜ್ಞೆ ಸಲೀಸಾಗಿ ರಾಜ್ಯಸಭೆಯಲ್ಲೂ ಪಾಸಾಯ್ತು. ಈ ಮಧ್ಯೆ ವಯೋವೃದ್ಧರಾದ ಮನಮೋಹನ್ ಸಿಂಗ್ ಅವರನ್ನು ಕೇವಲ ವಿಧೇಯಕಕ್ಕೆ ವೋಟು ಹಾಕುವುದಕ್ಕಾಗಿ ಗಾಲಿ ಕುರ್ಚಿಯಲ್ಲಿ ಕರೆ ತಂದ ಕಾಂಗ್ರೆಸ್ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ-2023 ರ ಮಂಡನೆ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಆಗಮಿಸಿದ ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧನ್ಯವಾದ ತಿಳಿಸಿದರು. ಇಂದು, ರಾಜ್ಯಸಭೆಯಲ್ಲಿ, ಡಾ. ಮನಮೋಹನ್ ಸಿಂಗ್, (Dr.Manmohan Singh) ಅವರು ಸಮಗ್ರತೆಯ ದಾರಿದೀಪವಾಗಿ ನಿಂತರು ಹಾಗೂ ವಿಶೇಷವಾಗಿ ಕಪ್ಪು ಸುಗ್ರೀವಾಜ್ಞೆಯ ವಿರುದ್ಧ ಮತ ಚಲಾಯಿಸಲು ಬಂದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಅವರ ಅಚಲವಾದ ಬದ್ಧತೆಯು ಇತರರಿಗೆ ಸ್ಫೂರ್ತಿಯಾಗಿದೆ. ಅವರ ಅಮೂಲ್ಯ ಬೆಂಬಲಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ರಾಘವ್ ಚಡ್ಡಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು.
ಆದರೆ ರಾಜ್ಯಸಭೆಯಲ್ಲಿ (Upper House) ಸಿಂಗ್ ಅವರ ಉಪಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ರಾಜಕೀಯ ಚರ್ಚೆಗೆ ಕಾರಣವಾಯ್ತು. ಕಾಂಗ್ರೆಸ್ ಕ್ರಮವನ್ನು ಟೀಕಿಸಿದ ಬಿಜೆಪಿ ಕಾಂಗ್ರೆಸ್ನ ಈ ಹುಚ್ಚುತನವನ್ನು ದೇಶ ಸದಾ ನೆನಪು ಮಾಡಿಕೊಳ್ಳಲಿದೆ. ತನ್ನ ಅಪ್ರಾಮಾಣಿಕ ಮೈತ್ರಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್, ಹದಗೆಟ್ಟ ಆರೋಗ್ಯ ಸ್ಥಿತಿಯಲ್ಲಿರುವ ಮಾಜಿ ಪ್ರಧಾನಿಯವರನ್ನು ತಡರಾತ್ರಿವರೆಗೂ ಸಂಸತ್ತಿನಲ್ಲಿ (Parliment) ಗಾಲಿಕುರ್ಚಿಯಲ್ಲಿ ಕೂರಿಸಿದೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಆದರೆ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಡಾ. ಸಿಂಗ್ ಅವರ ಪ್ರಜಾಪ್ರಭುತ್ವದ ಬಗೆಗಿನ ಈ ಸಮರ್ಪಣೆ ಈ ದೇಶದ ಸಂವಿಧಾನದ ಮೇಲಿನ ಅವರ ನಂಬಿಕೆಗೆ ಸಾಕ್ಷಿಯಾಗಿದೆ. ಬಿಜೆಪಿ ತನ್ನ ಹಿರಿಯರನ್ನು ಮಾನಸಿಕ ಕೋಮಾಕ್ಕೆ ತಳ್ಳಿದೆ. ಆದರೆ ನಮ್ಮ ಹಿರಿಯರು ನಮಗೆ ಸ್ಫೂರ್ತಿ, ಅವರು ನಮ್ಮ ಧೈರ್ಯವಾಗಿದ್ದಾರೆ. ನಿಮ್ಮ ಪಕ್ಷದ ಯಜಮಾನನಿಗೆ ಏನನ್ನಾದರು ಕಲಿಯಲು ಹೇಳಿ ಎಂದು ಕಾಂಗ್ರೆಸ್ ನಾಯಕಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ನಿರ್ವಹಿಸುವ ಸುಪ್ರಿಯಾ ಶ್ರೀನಾಟೆ (Supriya Srinate) ತಿರುಗೇಟು ನೀಡಿದ್ದಾರೆ.
ಸಿಂಗ್ ಅವರ ಹೊರತಾಗಿ ವಿರೋಧ ಪಕ್ಷ ಕಾಂಗ್ರೆಸ್, ಜಾರ್ಖಂಡ್ ಮುಕ್ತಿ ಮೋರ್ಚಾದ (Jharkhand Mukti Morcha) ನಾಯಕ ಶಿಬು ಸೊರೇನ್ (Shibu Soren) ಅವರನ್ನು ಕೂಡ ರಾಜ್ಯಸಭೆಗೆ ಕರೆ ತಂದಿತ್ತು. ವಿಪಕ್ಷಗಳ ಈ ಸಂಘಟಿತ ಪ್ರಯತ್ನದ ನಂತರವೂ ಈ ಬಿಲ್ ರಾಜ್ಯಸಭೆಯಲ್ಲಿ ಸಲೀಸಾಗಿ ಪಾಸಾಯ್ತು. ಮಸೂದೆ ಪರ 131 ಮತ ಬಂದರೆ, ಮಸೂದೆ ವಿರುದ್ಧ ತೊಡತಟ್ಟಿದ್ದ ವಿಪಕ್ಷ ಇಂಡಿಯಾ ಕೂಟಕ್ಕೆ ಕೇವಲ 102 ಮತ ಬಂದವು. ಇತ್ತೀಚೆಗೆ ಮಸೂದೆಗೆ ಲೋಕಸಭೆ ಕೂಡ ಅಂಗೀಕಾರ ನೀಡಿತ್ತು. ಹೀಗಾಗಿ ಸುಗ್ರೀವಾಜ್ಞೆಗೆ ಈಗ ಶಾಶ್ವತವಾಗಿ ಕಾನೂನು ಸ್ವರೂಪ ಸಿಕ್ಕಿದೆ.
ಮಾಜಿ ಪಿಎಂ ಡಾ. ಸಿಂಗ್ ಅನಾರೋಗ್ಯ, ಬೇಗ ಗುಣಮುಖರಾಗಿ ಎಂದು ಹಾರೈಸಿದ ಮೋದಿ!
ಏನಿದು ಮಸೂದೆ? ಏಕೆ?
ದಿಲ್ಲಿಯಲ್ಲಿ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ಅಧಿಕಾರ ದೆಹಲಿಯ ಚುನಾಯಿತ ಸರ್ಕಾರದ (Delhi Government) ಬಳಿ ಇರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ತನ್ಮೂಲಕ ಕೇಜ್ರಿವಾಲ್ ಸರ್ಕಾರಕ್ಕೆ ಅಧಿಕಾರ ದೊರೆತಿತ್ತು. ಆದರೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು. ಅಂದರೆ ವರ್ಗಾವಣೆ/ನಿಯೋಜನೆ ಬಗ್ಗೆ ಇನ್ನು ಕೇಂದ್ರ ಸರ್ಕಾರದ ಅಧೀನದ ಉಪ ರಾಜ್ಯಪಾಲರು ನಿರ್ಣಯ ಕೈಗೊಳ್ಳುತ್ತಾರೆ. ಸುಗ್ರೀವಾಜ್ಞೆಗೆ 6 ತಿಂಗಳ ವಾಯಿದೆ ಇರುವ ಕಾರಣ ಈಗ ಮಸೂದೆ ಅಂಗೀಕರಿಸಿದೆ. ತನ್ಮೂಲಕ ಸುಗ್ರೀವಾಜ್ಞೆ (Ordinance)ಅಂಶ ಕಾಯ್ದೆ ರೂಪ ಪಡೆದಿದೆ.
ಇದಲ್ಲದೆ, ರಾಜ್ಯಸಭೆಯಲ್ಲಿ ಮಸೂದೆಗೆ ಜಯ ಆಗಿರುವುದು ಕೇಂದ್ರ ಸರ್ಕಾರದ ಪಾಲಿಗೆ ಮಹತ್ವದ ಯಶಸ್ಸಾಗಿದ್ದರೆ, ಕೇಂದ್ರದ ವಿರುದ್ಧ ತೊಡೆ ತಟ್ಟಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ‘ಇಂಡಿಯಾ’ ವಿಪಕ್ಷ ಕೂಟಕ್ಕೆ ಹಿನ್ನಡೆ ಆಗಿದೆ. ಏಕೆಂದರೆ ಕೇಜ್ರಿವಾಲ್ (Arvind Kejriwal) ಅವರು ದೇಶಾದ್ಯಂತ ಸುತ್ತಾಡಿ ವಿಪಕ್ಷ ಸಂಸದರು ಮಸೂದೆ ವಿರುದ್ಧ ಮತ ಹಾಕಲು ಕೋರಿದ್ದರು. ಕಾಂಗ್ರೆಸ್ ಆದಿಯಾಗಿ ಅನೇಕ ವಿಪಕ್ಷಗಳು ಕೇಜ್ರಿವಾಲ್ಗೆ ಬೆಂಬಲ ಘೋಷಿಸಿ ಮಸೂದೆ ವಿರುದ್ಧ ಮತಕ್ಕೆ ಒಪ್ಪಿದ್ದರು. ಆದರೆ ಕೊನೆಗೆ ಬಿಜೆಡಿ ಹಾಗೂ ವೈಎಸ್ಸಾರ್ ಕಾಂಗ್ರೆಸ್ನ ತಲಾ 9 ಸದಸ್ಯರು ಮೋದಿ ಸರ್ಕಾರದ ಬೆನ್ನಿಗೆ ನಿಲ್ಲುವ ಮೂಲಕ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಎದುರಿಸುತ್ತಿದ್ದ ಎನ್ಡಿಎಗೆ ಸಾಥ್ ನೀಡಿದ್ದಾರೆ.