ಬುಧವಾರವಷ್ಟೇ 104 ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡಿದ್ದ ಅಮೆರಿಕ ಸರ್ಕಾರ, ಇದೀಗ ಇನ್ನೂ 487 ಭಾರತೀಯರ ಗಡೀಪಾರಿಗೆ ಅಂತಿಮ ಆದೇಶ ಹೊರಡಿಸಿದೆ. 

ನವದೆಹಲಿ (ಫೆ.08): ಬುಧವಾರವಷ್ಟೇ 104 ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡಿದ್ದ ಅಮೆರಿಕ ಸರ್ಕಾರ, ಇದೀಗ ಇನ್ನೂ 487 ಭಾರತೀಯರ ಗಡೀಪಾರಿಗೆ ಅಂತಿಮ ಆದೇಶ ಹೊರಡಿಸಿದೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಭಾರತದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ಭಾರತೀಯರು ಎನ್ನಲಾದ 487 ಜನರನ್ನು ಗಡೀಪಾರು ಮಾಡಲು ಈಗಾಗಲೇ ಅಮೆರಿಕ ಸರ್ಕಾರ ಅಂತಿಮ ಆದೇಶ ಹೊರಡಿಸಿದೆ. ಈ ಪೈಕಿ 298 ಜನರ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ’ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆ.12-13ರಂದು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದು, ಅದಕ್ಕೂ ಮುನ್ನ ಈ ಎರಡನೇ ಹಂತದ ಗಡೀಪಾರಿನ ಪ್ರಕ್ರಿಯೆಗೆ ಅಮೆರಿಕ ಚಾಲನೆ ನೀಡಿದೆ. ಈ ನಡುವೆ ಬುಧವಾರ 104 ಅಕ್ರಮ ವಲಸಿಗ ಭಾರತೀಯರ ಕೈಗೆ ಕೋಳ, ಕಾಲಿಗೆ ಸರಪಳಿ ಹಾಕಿದ ರೀತಿಯ ಬಗ್ಗೆ ಪ್ರತಿಕ್ರಿಯಿಸಿದ ಮಿಸ್ರಿ, ನಾವು ಅಮೆರಿಕದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ಬೆಳವಣಿಗೆ ಕುರಿತು ನಮ್ಮ ಕಳವಳವನ್ನೂ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕೆನಡಾ, ಗ್ರೀನ್‌ಲ್ಯಾಂಡ್‌ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಣ್ಣು ಈಗ ಗಾಜಾ ಮೇಲೆ!

ಜೊತೆಗೆ ಹಿಂದಿನ ಗಡೀಪಾರು ಪ್ರಕ್ರಿಯೆಗೆ ಹೋಲಿಸಿದರೆ ಬುಧವಾರ ನಡೆದ ಗಡೀಪಾರು ವಿಭಿನ್ನವಾಗಿತ್ತು. ಏಕೆಂದರೆ ಪ್ರಸಕ್ತ ಅಮೆರಿಕದಲ್ಲಿರುವ ವ್ಯವಸ್ಥೆಯೇ ಬೇರೆ ರೀತಿ ಇದೆ. ಅಕ್ರಮ ವಲಸೆಯನ್ನು ಅಮೆರಿಕ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆ ಎಂದು ಘೋಷಿಸಿದೆ. ಈ ಕಾರಣಕ್ಕಾಗಿಯೇ ವಲಸಿಗರ ಗಡೀಪಾರಿಗೆ ಸೇನಾ ವಿಮಾನ ಬಳಸಲಾಗಿತ್ತು. ಜೊತೆಗೆ ವಲಸಿಗರನ್ನು ತವರಿಗೆ ಕರೆತರಲು ಪರ್ಯಾಯ ಅವಕಾಶವೇನಾದರೂ ಇದೆಯೇ ಎಂಬುದರ ಬಗ್ಗೆಯೂ ನಾವು ಪರಿಶೀಲಿಸುತ್ತೇವೆ ಎಂದು ಮಿಸ್ರಿ ತಿಳಿಸಿದರು.

ಟ್ರಂಪ್‌ ನೀತಿಗೆ ಅನಿರ್ದಿಷ್ಟ ತಡೆ: ವಿದೇಶಿ ದಂಪತಿಗೆ ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಜನ್ಮಜಾತ ಪೌರತ್ವ ತಿರಸ್ಕರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ಕಾನೂನಿಗೆ ಸಿಯಾಟೆಲ್‌ನ ನ್ಯಾಯಾಲಯ ಅನಿರ್ದಿಷ್ಟ ಅವಧಿಗೆ ತಡೆ ನೀಡಿದೆ. ಇದರಿಂದಾಗಿ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ಕೊಂಚ ನಿರಾಳರಾಗುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಯಾಟಲ್ ನ್ಯಾಯಾಲಯ, ‘ಅಧ್ಯಕ್ಷರಿಗೆ ಕಾನೂನಿನ ನಿಯಮವು ಅವರ ನೀತಿ ಗುರಿಗಳಿಗೆ ಅಡ್ಡಿಯಾಗಿದೆ ಎಂಬುದು ಹೆಚ್ಚು ಸ್ಪಷ್ಟ. 

205 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳಿಸಿದ ಅಮೆರಿಕ: ನಮ್ಮ ವಿರೋಧವಿಲ್ಲ ಎಂದ ಇಂಡಿಯಾ!

ಅವರ ಪ್ರಕಾರ ಕಾನೂನಿನ ನಿಯಮವು ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಮತ್ತು ನಿರ್ಲಕ್ಷಿಸಲು ಯೋಗ್ಯವಾದ ವಿಷಯ. ಅಮೆರಿಕದ ಜನ್ಮಸಿದ್ಧ ಪೌರತ್ವದ ನಿಯಮವನ್ನು ಸರ್ಕಾರ ಬದಲಿಸಲು ಹೊರಟರೆ ಅದು ಸಂವಿಧಾನವನ್ನೇ ತಿದ್ದುಪಡಿ ಮಾಡಬೇಕಾಗಿದೆ’ ಎಂದಿದೆ. ಜೊತೆಗೆ ಟ್ರಂಪ್ ನೀತಿಗೆ ಅನಿರ್ದಿಷ್ಟಾವಧಿಗೆ ತಡೆ ನೀಡಿದ್ದು ಈ ಆದೇಶ ದೇಶಾದ್ಯಂತ ಅನ್ವಯಿಸುತ್ತದೆ. ಪ್ರಕರಣ ಮುಗಿಯುವವರೆಗೂ ಚಾಲ್ತಿಯಲ್ಲಿರುತ್ತದೆ ಎಂದಿದೆ.