ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ರೋಗಿ ಸಾವು!
ಪ್ಲಾಸ್ಮಾ ಥೆರಪಿ ಕೊರೋನಾ ರೋಗಿಗಳ ಕಾಪಾಡುವ ನಿಟ್ಟಿನಲ್ಲಿ ರಾಮಬಾಣವಾಗಿದೆ. ಹೀಗಿರುವಾಗಲೇ ದೇಶದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿ ಕುಖ್ಯಾತಿಗೆ ಪಾತ್ರವಾಗಿರುವ ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಮೊದಲ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಮೇ.01): ಕೊರೋನಾ ಸೋಂಕಿತರ ಜೀವ ಉಳಿಸಲು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ತುದಿಗಾಲಿನಲ್ಲಿ ನಿಂತಿರುವಾಗಲೇ, ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಕೊರೋನಾಗೆ ದೇಶದಲ್ಲೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಪಡೆದು ದೆಹಲಿಯ ರೋಗಿಯೊಬ್ಬರು ಗುಣಮುಖರಾದ ಬೆನ್ನಲ್ಲೇ, ಮೊದಲ ಸಾವಿನ ಸುದ್ದಿಯೂ ಬಂದಿದೆ. ಕೊರೋನಾಗೆ ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವೂ ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಏಪ್ರಿಲ್ 20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಗುಡ್ ನ್ಯೂಸ್: 95 ವರ್ಷದ ಅಜ್ಜಿ ಕೊರೋನಾದಿಂದ ಗುಣಮುಖ
ಮೃತ ರೋಗಿ ತನಗೆ ಸೋಂಕಿನ ಲಕ್ಷಣಗಳಾದ ಗಂಟಲು ಉರಿ, ಒಣ ಕೆಮ್ಮು ಹಾಗೂ ಜ್ವರ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ತಡ ಮಾಡಿದ್ದರು. ಹೀಗಾಗಿ ಶ್ವಾಸಕೋಶದ ಸೋಂಕು ಹಾಗೂ ನ್ಯುಮೋನಿಯಾ ಬೇಗ ಉಲ್ಬಣಗೊಂಡವು. ಏ.25ರಂದು ಇವರಿಗೆ ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ 200 ಎಂ.ಎಲ್. ಪ್ಲಾಸ್ಮಾ ನೀಡಲಾಗಿತ್ತು. ಜೊತೆಗೆ ಆ್ಯಂಟಿಬಯಾಟಿಕ್ ನೀಡಲಾಗುತ್ತಿತ್ತು. ಆದರೂ ಆರೋಗ್ಯ ಸುಧಾರಿಸದೆ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ.