ಮೇಲ್ವರ್ಗ ಮೀಸಲು ಇರುತ್ತಾ? ರದ್ದಾಗುತ್ತಾ?: ಇಂದು ತೀರ್ಪು ಪಂಚ ಸದಸ್ಯ ಪೀಠದಿಂದ ತೀರ್ಪು ಪ್ರಕಟಕ್ಕೆ ಕ್ಷಣಗಣನೆ  3 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ನೀಡಿದ್ದ ಮೀಸಲು

ಪಿಟಿಐ ನವದೆಹಲಿ: ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.10ರಷ್ಟುಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಂದಿದ್ದ 103ನೇ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಲಾಗಿರುವ ಹಲವು ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಚ್‌ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಲಿದೆ. ಹೀಗಾಗಿ ‘ಮೇಲ್ವರ್ಗ ಮೀಸಲು’ ಎಂದೇ ಕರೆಯಲ್ಪಡುವ ಈ ಮೀಸಲಾತಿ ಮುಂದುವರಿಯುತ್ತದೆಯೇ? ಅಥವಾ ರದ್ದಾಗುತ್ತದೆಯೇ? ಅಥವಾ ಬದಲಾವಣೆಯಾಗುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ. ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌, ನ್ಯಾದಿನೇಶ್‌ ಮಹೇಶ್ವರಿ, ನ್ಯಾ ಎಸ್‌.ರವೀಂದ್ರ ಭಟ್‌, ನ್ಯಾ ಬೆಲಾ ಎಂ. ತ್ರಿವೇದಿ ಹಾಗೂ ನ್ಯಾಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪಂಚಸದಸ್ಯ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಲಿದೆ ಎಂದು ಸುಪ್ರೀಂಕೋರ್ಚ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

EWS Quota: ಸೋಮವಾರ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ಆರ್ಥಿಕವಾಗಿ ಹಿಂದುಳಿದವರಿಗೂ ಶೇ.10ರಷ್ಟುಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮಸೂದೆ ರೂಪಿಸಿತ್ತು. 2019ರ ಜ.8 ಹಾಗೂ 9ರಂದು ಲೋಕಸಭೆ ಮತ್ತು ರಾಜ್ಯಸಭೆ ಈ ವಿಧೇಯಕಗಳಿಗೆ ಒಪ್ಪಿಗೆ ನೀಡಿದ್ದವು. ಬಳಿಕ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಪರಿಶಿಷ್ಟಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಶೇ.50ರಷ್ಟುಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದೆ, ಅದರಿಂದ ಹೊರತಾದ ಶೇ.10ರಷ್ಟುಮೀಸಲಾತಿಯನ್ನು ಮೀಸಲಾತಿ ಪಡೆಯುತ್ತಿಲ್ಲದ ಸಮುದಾಯಗಳಿಗೆ ನೀಡುವ ಉದ್ದೇಶದಿಂದ ಸಂವಿಧಾನಕ್ಕೆ 103ನೇ ತಿದ್ದುಪಡಿ ಮಾಡಲಾಗಿತ್ತು.

ಇದನ್ನು ಪ್ರಶ್ನಿಸಿ ಸುಮಾರು 40 ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದವು. ಇದನ್ನೆಲ್ಲಾ ಸುಪ್ರೀಂಕೋರ್ಚ್‌ಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಕೇಂದ್ರ ಸರ್ಕಾರದ ಮೀಸಲಾತಿ ಅನುಷ್ಠಾನ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ. ಮೀಸಲಾತಿ ನೀಡಲು ಆರ್ಥಿಕತೆ ಮಾನದಂಡವಾಗಬಾರದು. ಕೇಂದ್ರ ಸರ್ಕಾರ ಮೀಸಲಾತಿಯ ಪರಿಕಲ್ಪನೆಯನ್ನೇ ಹಿಂಬಾಗಿಲಿನಿಂದ, ವಂಚನೆಯಿಂದ ನಾಶಪಡಿಸಲು ಯತ್ನಿಸುತ್ತಿದೆ ಎಂಬುದು ಅರ್ಜಿದಾರರ ಆರೋಪ. ಸೆಪ್ಟೆಂಬರ್‌ನಲ್ಲಿ ಈ ಕುರಿತು ಆರೂವರೆ ದಿನಗಳ ವಿಚಾರಣೆ ನಡೆದು, ಘಟಾನುಘಟಿ ನ್ಯಾಯವಾದಿಗಳು ವಾದಿಸಿದ್ದರು. ಸೆ.27ರಂದು ನ್ಯಾಯಾಲಯ ತೀರ್ಪು ಕಾದಿರಿಸಿತ್ತು. ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ: ಶಾಸಕ ರಾಜುಗೌಡ