ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಟ ಯಾನ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಪ್ರಮುಖ ನಗರಗಳನ್ನು ಹಾದು ಸೋಮವಾರ ರಾತ್ರಿ ಮಧ್ಯಪ್ರದೇಶ ತಲುಪಿದೆ

ಬೆಂಗಳೂರು(ಆ.09): ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ತುಂಬುತ್ತಿರುವ ಐತಿಹಾಸಿಕ ಸಂದರ್ಭದಲ್ಲಿ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್ ಹಮ್ಮಿಕೊಂಡಿರುವ ‘ಇಂಡಿಯಾ @ 75’ ಹೆಸರಿನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಯಾತ್ರೆಯ ಶೇಷ ಭಾರತ ಚರಣ ಒಂದೇ ದಿನದಲ್ಲಿ 1400 ಕಿ.ಮೀ. ಪೂರೈಸಿದೆ.

ಕೇರಳದಿಂದ ಆರಂಭವಾಗಿ ಕರ್ನಾಟಕದಲ್ಲಿ ಸಂಚರಿಸಿರುವ ಯಾತ್ರೆಯ ರಾಯಭಾರಿಗಳಾಗಿ ಸಾಫ್ಟ್‌ವೇರ್‌ ಎಂಜಿನಿಯರ್‌ ಅನಂತ್‌ ರಾಮಪ್ರಸಾದ್‌ ಹಾಗೂ ಮತ್ತೋರ್ವ ಟೆಕಿ ಅನಿಲ್‌ ಮುಂದುವರಿಸುತ್ತಿದ್ದಾರೆ. ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಟ ಅವರ ಯಾನ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಪ್ರಮುಖ ನಗರಗಳನ್ನು ಹಾದು ಸೋಮವಾರ ರಾತ್ರಿ ಮಧ್ಯಪ್ರದೇಶ ತಲುಪಿದೆ. ಮಂಗಳವಾರ ಉತ್ತರಪ್ರದೇಶ, ದೆಹಲಿ, ಹರ್ಯಾಣ ಮೂಲಕ ಹಾದು ಬುಧವಾರ ಚಂಡೀಗಢಕ್ಕೆ ತಲುಪಲಿದೆ.

ಅಂತಿಮ ಹಂತಕ್ಕೆ ಪ್ರವೇಶಿಸಿದ ಎಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌-ಎನ್‌ಸಿಸಿ ವಜ್ರ ಜಯಂತಿ ಯಾತ್ರೆ

ಆಂಧ್ರದಿಂದ ದಿಲ್ಲಿಗೆ ಯುವಕನ ಕಾಲ್ನಡಿಗೆ!

‘ಇಂಡಿಯಾ @ 75’ ಯಾತ್ರೆ ಸಂದರ್ಭ ಮತ್ತೊಂದು ಸಾಹಸ ಪ್ರಯಾಣದ ಪರಿಚಯವಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬದ್ವೆಲ್‌ ಎಂಬಲ್ಲಿನ ಪತಿಪತಿ ನರಸಿಂಹ ಎಂಬ ಯುವಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾದಯಾತ್ರೆ ಹೊರಟಿದ್ದಾನೆ. ಜು.17ಕ್ಕೆ ತನ್ನೂರಿನಿಂದ ಹೊರಟು ಸದ್ಯ ಪೂರ್ವ ಮಹಾರಾಷ್ಟ್ರದ ಪೋಹಾಣಾ ಎಂಬಲ್ಲಿಗೆ ತಲುಪಿರುವ ನರಸಿಂಹ, ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಸೆ.17ರಂದು ದಿಲ್ಲಿ ಪ್ರವೇಶಿಸಲಿದ್ದಾನೆ. ಅಂದು ಸಾಧ್ಯವಾದರೆ ಮೋದಿಯವರನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿ ಶುಭ ಹಾರೈಸುವ ಬಯಕೆ ಈತನದ್ದು.