ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ  ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಗೆಲ್ಲಲೇಬೇಕೇದಾರ ಪಂದ್ಯದಲ್ಲಿ ಬಾಂಗ್ಲಾ ಕೊನೆಯವರೆಗೂ ಹೋರಾಟ ನೀಡಿತು. ಆದರೆ ಟೀಂ ಇಂಡಿಯಾ ಹರಸಾಹಸಪಟ್ಟು ರನ್ ರೋಚಕ ಗೆಲುವು ಸಾಧಿಸಿತು. ಈ ಗೆಲುವು ಭಾರತದ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿದೆ.

ಬರ್ಮಿಂಗ್‌ಹ್ಯಾಮ್(ಜು.02): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 28 ರನ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 13 ಅಂಕದೊಂದಿಗೆ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಆದರೆ ಭಾರತ ವಿರುದ್ದ ಸೋತ ಬಾಂಗ್ಲಾದೇಶದ ಸೆಮಿಫೈನಲ್ ಕನಸು ನುಚ್ಚು ನೂರಾಗಿದೆ. 

Add Asianetnews Kannada as a Preferred SourcegooglePreferred

315ರನ್ ಟಾರ್ಗೆಟ್ ಪಡೆದ ಬಾಂಗ್ಲಾದೇಶ ಅಬ್ಬರಿಸಲು ಸಜ್ಜಾಗಿತ್ತು. ಆದರೆ ಆರಂಭಿಕರ ಜೊತೆಯಾಟಕ್ಕೆ ಮೊಹಮ್ಮದ್ ಶಮಿ ಬ್ರೇಕ್ ಹಾಕಿದರು. ತಮೀಮ್ ಇಕ್ಬಾಲ್ 22 ರನ್ ಸಿಡಿಸಿ ಔಟಾದರು. ಹೀಗಾಗಿ ಮೊದಲ ವಿಕೆಟ್ ಜೊತೆಯಾಟ 39 ರನ್‌ಗಳಿಗೆ ಅಂತ್ಯವಾಯಿತು. ಸೌಮ್ಯ ಸರ್ಕಾರ್ ಹಾಗೂ ಶಕೀಬ್ ಅಲ್ ಹಸನ್ ಇನ್ನಿಂಗ್ಸ್ ಮುಂದುವರಿಸಿದರು.

ಸೌಮ್ಯ ಸರ್ಕಾರ್ 33 ರನ್ ಸಿಡಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಭರ್ಜರಿ ಫಾರ್ಮ್‌ನಲ್ಲಿರುವ ಶಕೀಬ್ ಹೋರಾಟ ಮುಂದುವರಿಸಿದರು. ಇತ್ತ ಮುಶ್ಫಿಕರ್ ರಹೀಮ್ 24 ರನ್ ಸಿಡಿಸಿ ಔಟಾದರು. ಲಿಟ್ಟನ್ ದಾಸ್ 22 ರನ್ ಕಾಣಿಕೆ ನೀಡಿದರು. ಆದರೆ ಮೊಸಾದೆಕ್ ಹುಸೈನ್ ಕೇವಲ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಹಾಫ್ ಸೆಂಚುರಿ ಸಿಡಿಸಿ ಬಾಂಗ್ಲಾ ತಂಡಕ್ಕೆ ಆಸರೆಯಾಗಿದ್ದ ಶಕೀಬ್ ಅಪಾಯದ ಸೂಚನೆ ನೀಡಿದ್ದರು. ಶಕೀಬ್ 66 ರನ್ ಸಿಡಿಸಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಸಬ್ಬೀರ್ ರಹಮಾನ್ ಹಾಗೂ ಮೊಹಮ್ಮದ್ ಸೈಫುದ್ದೀನ್ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತು. ಸಬ್ಬೀರ್ 36 ರನ್ ಸಿಡಿಸಿ ಔಟಾದರು. ಆದರೆ ಸೈಫುದ್ದೀನ್ ಅಬ್ಬರ ಮುಂದುವರಿಯಿತು.

ನಾಯಕ ಮೊಶ್ರಫೆ ಮೊರ್ತಝಾ 8 ರನ್ ಸಿಡಿಸಿ ಔಟಾದರು. ರುಬೆಲ್ ಹುಸೈನ್ ಜೊತೆ ಸೇರಿದ ಸೈಫುದ್ದೀನ್ ಅಬ್ಬರ ಮುಂದುವರಿಸಿದರು. ಹಾಫ್ ಸೆಂಚುರಿ ಸಿಡಿಸಿದ ಸೈಫುದ್ದೀನ್ ಭಾರತದ ತಲೆನೋವು ಹೆಚ್ಚಿಸಿದರು. ರುಬೆಲ್ ಹುಸೈನ್ ಹಾಗೂ ಮುಸ್ತಾಫಿಜುರ್ ರಹಮಾನ್ ವಿಕೆಟ್ ಕಬಳಿಸಿದ ಜಸ್ಬ್ರೀತ್ ಬುಮ್ರಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಬಾಂಗ್ಲಾದೇಶ 48 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 28 ರನ್ ಗೆಲುವು ಸಾಧಿಸಿತು. ಇಷ್ಟೇ ಸೆಮಿಫೈನಲ್ ಪ್ರವೇಶಿಸಿತು.