ಮಹಿಳೆ ಗರ್ಭಕೋಶದಲ್ಲಿ ಬೆಳೆದಿದ್ದ 2.5.ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಆಕೆಯ ಜೀವ ರಕ್ಷಿಸುವಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರು ಸಫಲರಾಗಿದ್ದಾರೆ.

ಕಬ್ಬೂರ (ಮೇ.25) ಮಹಿಳೆ ಗರ್ಭಕೋಶದಲ್ಲಿ ಬೆಳೆದಿದ್ದ 2.5.ಕೆಜಿ ತೂಕದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಆಕೆಯ ಜೀವ ರಕ್ಷಿಸುವಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರು ಸಫಲರಾಗಿದ್ದಾರೆ.

Add Asianetnews Kannada as a Preferred SourcegooglePreferred

ಗರ್ಭ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯೊಬ್ಬರು ಸೋಮವಾರ(ಮೇ 22)ವಷ್ಟೇ ಕಬ್ಬೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಂಡಿದ್ದು, ವೈದ್ಯರು ಹೆಚ್ಚಿನ ತಪಾಸಣೆ ನಡೆಸಿದಾಗ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಮಹಿಳೆ ಜೀವಕ್ಕೆ ಅಪಾಯ ಎಂಬುದನ್ನು ಅರಿತ ವೈದ್ಯರ ತಂಡ, ತಕ್ಷಣವೇ ಮಹಿಳೆಯನ್ನು ಚಿಕಿತ್ಸೆಗೆ ದಾಖಲಿಸಿಕೊಂಡರು. ಮಾರನೇ ದಿನ ಬುಧವಾರವೇ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಪ್ರಾಣ ಉಳಿಸಿದ್ದಾರೆ.

ಬುಧವಾರ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ.ವಿಶ್ವನಾಥ ಭೋವಿ ಹಾಗೂ ಡಾ.ಅಮೀತ ಅಂಬಲೆ, ಸೋಮಣ್ಣ , ಸುನೀತಾ, ಅನ್ನಪೂರ್ಣಾ ತಗಲಿ, ಭೀಮಪ್ಪಾ ಕಾಮಗೌಡ, ಸಂಗೀತಾ ಪಾಟೀಲ ಅವರ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಗೆಡ್ಡೆಯನ್ನು ಹೊರ ತೆಗೆದಿದ್ದು, 2.5 ಕೆಜಿಯಷ್ಟಿತ್ತು. ಮಹಿಳೆ ಈಗ ಆರೋಗ್ಯವಾಗಿದ್ದಾರೆ ಎಂದು ಈ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯೂ ಆದ ಡಾ.ವಿಶ್ವನಾಥ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು, ಇದು ವೈದ್ಯಲೋಕದ ಅಚ್ಚರಿ

ಮಹಿಳೆಯೊಬ್ಬರ ಗರ್ಭ ಕೋಶದಲ್ಲಿ ಬೆಳೆದಿದ್ದ ಈ ಗಾತ್ರದ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿರುವ ಕಬ್ಬೂರ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ಜನತೆ ಇಂಥ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಮಾದರಿಯಾಗಿದ್ದಾರೆ ಎಂದು ಮಹಿಳೆ ಕುಟುಂಬ ಮತ್ತು ಪಟ್ಟಣಿಗರು ಪ್ರಶಂಸೆ ವ್ಯಕ್ತಪಡಿಸಿದರು.