ಮಾತುಗಳಿಂದ ಜಗತ್ತನ್ನು ಗೆಲ್ಲಬಹುದು ನಿಜ, ಆದರೆ ಆ ಗೆಲುವು ಶಾಶ್ವತವಾಗಿರಬೇಕೆಂದರೆ ನಿಮ್ಮ ಧ್ವನಿಯನ್ನು ಸಂರಕ್ಷಿಸುವುದು ನಿಮ್ಮ ಜವಾಬ್ದಾರಿ. ಹಾಗಾಗಿ, ಅತಿಯಾಗಿ ಮಾತನಾಡುವ ಹವ್ಯಾಸ ನಿಲ್ಲಿಸಿ, ಆಗಾಗ 'ಮೌನ' ಎಂಬ ಸಂಜೀವಿನಿಯನ್ನು ಅಳವಡಿಸಿಕೊಳ್ಳಿ… ಹೇಗೆ? ಇಲ್ಲಿದೆ ನೋಡಿ ಟಿಪ್ಸ್!

ಮಾತು 'ಬೆಳ್ಳಿ' ಮೌನ 'ಬಂಗಾರ' ಮಾತ್ರವಲ್ಲ, ನಿಮ್ಮ ಧ್ವನಿಪೆಟ್ಟಿಗೆಯ 'ಲೈಫ್ ಇನ್ಶೂರೆನ್ಸ್' ಕೂಡ ಹೌದು!

Add Asianetnews Kannada as a Preferred SourcegooglePreferred

ಸಿನೆಮಾ ಇರಲಿ ಅಥವಾ ನೈಜ ಜೀವನವಿರಲಿ, ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದು ನಮ್ಮ 'ಮಾತು'. ಗ್ಲಾಮರ್ ಲೋಕದಲ್ಲಿ ಮಿಂಚುವ ನಟರು, ವೇದಿಕೆಯಲ್ಲಿ ಅಬ್ಬರಿಸುವ ಗಾಯಕರು, ಗಂಟೆಗಟ್ಟಲೆ ಪಾಠ ಮಾಡುವ ಉಪನ್ಯಾಸಕರು ಅಥವಾ ಮೈಕ್ ಮುಂದೆ ಕುಳಿತು ಹರಟೆ ಹೊಡೆಯುವ ಆರ್.ಜೆಗಳು.. ಇವರೆಲ್ಲರಿಗೂ ಬಂಡವಾಳವೇ ಅವರ 'ಧ್ವನಿ'. ಆದರೆ, ದಿನವಿಡೀ ಕೆಲಸ ಮಾಡುವ ಧ್ವನಿಪೆಟ್ಟಿಗೆಗೂ (Vocal Box) ಒಮ್ಮೊಮ್ಮೆ ಸುಸ್ತಾಗುತ್ತದೆ ಅನ್ನೋದು ನಿಮಗೆ ಗೊತ್ತೇ? ಅದಕ್ಕಾಗಿಯೇ ಇಂದಿನ ವೇಗದ ಬದುಕಿನಲ್ಲಿ 'ಮೌನವ್ರತ' ಕೇವಲ ಆಧ್ಯಾತ್ಮಿಕ ವಿಷಯವಾಗಿ ಉಳಿಯದೆ, ಒಂದು ವೈಜ್ಞಾನಿಕ 'ವೋಕಲ್ ಥೆರಪಿ'ಯಾಗಿ ಹೊರಹೊಮ್ಮಿದೆ!

ಧ್ವನಿಪೆಟ್ಟಿಗೆಗೆ ಬೇಕಿದೆ 'ಸಂಡೇ ರೆಸ್ಟ್'!

ನಾವು ಮಾಡುವ ಪ್ರತಿ ಶಬ್ದದ ಹಿಂದೆ ಧ್ವನಿಪೆಟ್ಟಿಗೆಯ ಕಂಪನ ಇರುತ್ತದೆ. ಪಿಸುಮಾತಿನಿಂದ ಹಿಡಿದು ಕಿರುಚುವವರೆಗೆ ಈ ಪುಟ್ಟ ಅಂಗ ನಿರಂತರವಾಗಿ ಶ್ರಮಿಸುತ್ತದೆ. ಅತಿಯಾದ ಬಳಕೆಯಿಂದ ಧ್ವನಿ ಕುಸಿಯುವುದು, ಗಂಟಲು ನೋವು ಅಥವಾ ಧ್ವನಿಯಲ್ಲಿ ಗಡಸುತನ ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಹಂತದಲ್ಲಿ ನೀವು ಮಾಡಬೇಕಾದ ಅತಿದೊಡ್ಡ ಕೆಲಸವೆಂದರೆ 'ಸುಮ್ಮನಿರುವುದು'. ಹೌದು, ಇದಕ್ಕೆ ವೈದ್ಯಕೀಯ ಲೋಕದಲ್ಲಿ 'ವೋಕಲ್ ರೆಸ್ಟ್' (Vocal Rest) ಎನ್ನಲಾಗುತ್ತದೆ. ಹಳೆಯ ಕಾಲದ ಮೌನವ್ರತದ ಹಿಂದೆಯೂ ಇಂಥದ್ದೇ ಒಂದು ಆರೋಗ್ಯದ ಗುಟ್ಟಡಗಿತ್ತು.

ಮೌನದ ಮಹತ್ವವೇನು?

ಧ್ವನಿಯ ಗುಣಮಟ್ಟದ ಸುಧಾರಣೆ: ನೀವು ಹಾಡುಗಾರರಾಗಿದ್ದರೆ ಅಥವಾ ಭಾಷಣಕಾರರಾಗಿದ್ದರೆ, ನಿಮ್ಮ ಶ್ರುತಿ ಮತ್ತು ಸ್ಪಷ್ಟತೆ ನಿಮ್ಮ ಯಶಸ್ಸಿನ ಮೆಟ್ಟಿಲು. ಆಗಾಗ ಮೌನ ಪಾಲಿಸುವುದರಿಂದ ಧ್ವನಿಯಲ್ಲಿ ಒಂದು ರೀತಿಯ ಹೊಸ ಮೆರುಗು ಮತ್ತು ಸ್ಪಷ್ಟತೆ ಮೂಡುತ್ತದೆ. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೇ ಪ್ರಮುಖ ಮದ್ದಾಗಿ ಬಳಸಲಾಗುತ್ತದೆ.

ಗಂಭೀರ ಕಾಯಿಲೆಗಳಿಂದ ಮುಕ್ತಿ: ಧ್ವನಿಪೆಟ್ಟಿಗೆಯನ್ನು ಸತತವಾಗಿ ಶೋಷಿಸುವುದರಿಂದ ಅಲ್ಲಿ 'ನಾಡ್ಯೂಲ್' ಅಥವಾ 'ಪಾಲಿಪ್ಸ್' ಅಂತಹ ಸಣ್ಣ ಗುಳ್ಳೆಗಳು ಏಳಬಹುದು. ಇವು ಹೆಚ್ಚಾದರೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಬೀಳಬಹುದು. ಮೌನವ್ರತ ಪಾಲಿಸುವುದರಿಂದ ಈ ಹಾನಿಯನ್ನು ಆರಂಭದಲ್ಲೇ ತಡೆಗಟ್ಟಬಹುದು.

ಮಾನಸಿಕ ನೆಮ್ಮದಿಯ ಸೀಕ್ರೆಟ್: ಪ್ರಪಂಚದ ಅಷ್ಟೂ ಗದ್ದಲಗಳಿಂದ ಹೊರಬಂದು ಕೆಲವು ಗಂಟೆಗಳ ಕಾಲ ಮೌನಕ್ಕೆ ಶರಣಾದರೆ, ನಿಮ್ಮ ಮನಸ್ಸು ಶಾಂತವಾಗುತ್ತದೆ. ಹೊರಗಿನವರ ಜೊತೆಗಿನ ಮಾತು ನಿಂತಾಗ, ನಿಮ್ಮೊಳಗಿನ 'ನೀವು' ನಿಮ್ಮ ಜೊತೆ ಮಾತನಾಡಲು ಆರಂಭಿಸುತ್ತೀರಿ. ಇದು ಅದ್ಭುತ ಮಾನಸಿಕ ನೆಮ್ಮದಿ ನೀಡುತ್ತದೆ.

ಮೌನವ್ರತ ಮಾಡುವುದು ಹೇಗೆ?

ಇದು ಕೇವಲ ಮಾತು ನಿಲ್ಲಿಸುವುದಲ್ಲ. ಮೌನವ್ರತದ ಸಮಯದಲ್ಲಿ ಪಿಸುಮಾತಿನಲ್ಲೂ (Whispering) ಮಾತನಾಡಬಾರದು, ಏಕೆಂದರೆ ಪಿಸುಮಾತು ಧ್ವನಿಪೆಟ್ಟಿಗೆಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ದಿನದ ಒಂದಿಷ್ಟು ಸಮಯ ಅಥವಾ ವಾರಕ್ಕೊಮ್ಮೆ ಸಂಪೂರ್ಣ ವಿಶ್ರಾಂತಿ ನೀಡಿ. ಈ ಸಮಯದಲ್ಲಿ ಧ್ವನಿಗೆ ತೇವಾಂಶ ನೀಡಲು 3-4 ಲೀಟರ್ ನೀರು ಕುಡಿಯುವುದು ಕಡ್ಡಾಯ. ಅಕಸ್ಮಾತ್ ಗಂಟಲಲ್ಲಿ ಕಿರಿಕಿರಿ ಇದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ 'ಗಾರ್ಗಲ್' ಮಾಡುವುದು ಉತ್ತಮ ಮನೆಮದ್ದು.

ಮಾತುಗಳಿಂದ ಜಗತ್ತನ್ನು ಗೆಲ್ಲಬಹುದು ನಿಜ, ಆದರೆ ಆ ಗೆಲುವು ಶಾಶ್ವತವಾಗಿರಬೇಕೆಂದರೆ ನಿಮ್ಮ ಧ್ವನಿಯನ್ನು ಸಂರಕ್ಷಿಸುವುದು ನಿಮ್ಮ ಜವಾಬ್ದಾರಿ. ಹಾಗಾಗಿ, ಅತಿಯಾಗಿ ಮಾತನಾಡುವ ಹವ್ಯಾಸ ನಿಲ್ಲಿಸಿ, ಆಗಾಗ 'ಮೌನ' ಎಂಬ ಸಂಜೀವಿನಿಯನ್ನು ಅಳವಡಿಸಿಕೊಳ್ಳಿ. ನೆನಪಿಡಿ, ಮೌನ ಕೇವಲ ಶಬ್ದದ ಕೊರತೆಯಲ್ಲ, ಅದು ಧ್ವನಿಯ ಹೊಸ ಚೈತನ್ಯ!