Asianet Suvarna News Asianet Suvarna News

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರಿನಲ್ಲಿ ಕೋವಿಡ್‌ ಮುನ್ನೆಚ್ಚರಿಕೆ

ಕೊರೋನಾ ಸೋಂಕು ಹರಡುತ್ತಿರುವಾಗ ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ಶಿಫಾರಸುಗಳನ್ನು ತಜ್ಞರು ಮಾಡಿಲ್ಲ. ಇಡೀ ರಾಜ್ಯಕ್ಕೆ ಅನುಗುಣವಾಗಿ ಶಿಫಾರಸು ಮಾಡಿದ್ದಾರೆ. ಸರ್ಕಾರವು ಸಹ ಇಡೀ ರಾಜ್ಯಕ್ಕೆ ಅನುಗುಣವಾಗಿ ಮಾರ್ಗಸೂಚಿ ನೀಡಲಿದೆ ಎಂದು ತಿಳಿದುಬಂದಿದೆ.

Covid Precautions in the city as per government guidelines Vin
Author
First Published Dec 23, 2022, 10:30 AM IST

ರಾಜಧಾನಿಯಲ್ಲಿ ಕೊರೋನಾ ಸೋಂಕು (Corona virus) ನಿಯಂತ್ರಣ ಕುರಿತು ಮುಖ್ಯಮಂತ್ರಿಗಳ ನೇತೃತ್ವದ ಕೋವಿಡ್‌ ತಾಂತ್ರಿಕ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸೋಂಕಿನ ಕುರಿತು ಆಗುತ್ತಿರುವ ಬೆಳವಣಿಗಳನ್ನು ಗಮನಿಸುತ್ತಿರುವ ಕೋವಿಡ್‌ ತಜ್ಞರು ಸಭೆ ನಡೆಸಿ, ಮುಖ್ಯಮಂತ್ರಿಗಳ ನೇತೃತ್ವದ ಕೊರೋನಾ ತಾಂತ್ರಿಕ ಸಮಿತಿಗೆ ಕೆಲವು ಶಿಫಾರಸುಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಅನುಗುಣವಾಗಿ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಬಳಿಕ ಆರೋಗ್ಯ ಇಲಾಖೆ (Health department) ಹಾಗೂ ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಬಿಬಿಎಂಪಿ ಪಾಲನೆ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿಗೆ ಪ್ರತ್ಯೇಕವಾಗಿ ಯಾವುದೇ ಶಿಫಾರಸುಗಳನ್ನು ತಜ್ಞರು (Experts) ಮಾಡಿಲ್ಲ. ಇಡೀ ರಾಜ್ಯಕ್ಕೆ ಅನುಗುಣವಾಗಿ ಶಿಫಾರಸು ಮಾಡಿದ್ದಾರೆ. ಸರ್ಕಾರವು ಸಹ ಇಡೀ ರಾಜ್ಯಕ್ಕೆ ಅನುಗುಣವಾಗಿ ಮಾರ್ಗಸೂಚಿ ನೀಡಲಿದೆ. ಬೆಂಗಳೂರಿನಲ್ಲಿ ಹಬ್ಬ-ಆಚರಣೆಗಳು ನಡೆಯುವ ಬಗ್ಗೆ ತಜ್ಞರು ಮತ್ತು ಸರ್ಕಾರದ ಗಮನಕ್ಕೆ ಇದೆ. ಎಲ್ಲಾ ಅಂಶಗಳನ್ನು ಚರ್ಚೆ ನಡೆಸಿ ತೀರ್ಮಾನ (Decision) ತೆಗೆದುಕೊಳ್ಳಲಿದೆ ಎಂದು ಹೇಳಿದರು. ಹೆಚ್ಚು ಜನದಟ್ಟಣೆ ಇರುವ ಜಾಗಗಳಿಂದ ಸಾರ್ವಜನಿಕರು ದೂರುವಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್‌ ಧರಿಸಬೇಕು. ಆಗಾಗ ಕೈ ತೊಳೆಯುವ ಅಭ್ಯಾಸವನ್ನು ಮತ್ತೆ ರೂಢಿಸಿಕೊಳ್ಳಬೇಕು.

ಆದಷ್ಟು ಬೇಗ ಬೂಸ್ಟರ್‌ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ

ಬೂಸ್ಟರ್‌ ಡೋಸ್‌ಗಾಗಿ ಸರ್ಕಾರಕ್ಕೆ ಪತ್ರ
ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೂಸ್ಟರ್‌ ಲಸಿಕೆ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಈಗ ಮತ್ತೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಲಸಿಕೆ (Vaccine) ಪಡೆಯುವುದಕ್ಕೆ ಹೆಚ್ಚಿನ ಜನ ಮುಂದಾಗುವ ಸಾಧ್ಯತೆ ಇದೆ. ಬೂಸ್ಟರ್‌ ಡೋಸ್‌ಗಳ ಅವಧಿ ಮುಗಿದಿವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು-ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ.

ಸಭೆ, ಸಮಾರಂಭಗಳಿಗೆ ಪ್ರತ್ಯೇಕ ಮಾರ್ಗಸೂಚಿ
ಹಲವು ದೇಶಗಳಲ್ಲಿ ಕೋವಿಡ್‌ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಸಮಾರಂಭಗಳ ಆಯೋಜಕರು ಈ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟು ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ - ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲ್ಲದೆ, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್‌ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ. ಹಾಗೂ, ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದೂ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಿದೆ.

Corona 4th Wave: ಚಿತ್ರಮಂದಿರ, ಹೋಟೆಲ್‌, ಮಾಲ್‌, ಮೆಟ್ರೋದಲ್ಲಿ ಮಾಸ್ಕ್‌ ಕಡ್ಡಾಯ: ಶೀಘ್ರ ಮಾರ್ಗಸೂಚಿ ಪ್ರಕಟ

ಇದರ ಜತೆಗೆ, ಕೋವಿಡ್ - 19 ಮುನ್ನೆಚ್ಚರಿಕೆ ಹಾಗೂ ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಉತ್ತಮ ಅಂಶಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಮೇಲೆ ತಿಳಿಸಿರುವ ಸಲಹೆಗಳನ್ನು ಪಾಲಿಸಲು ಸಾರ್ವಜನಿಕರು ಹಾಗೂ ಸಭೆ / ಸಮಾರಂಭಗಳ ಆಯೋಜಕರಿಗೆ ಈ ಮಾಹಿತಿಯನ್ನು ನಿಖರವಾಗಿ ಪ್ರಚುರಪಡಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ / ಜಿಲ್ಲೆಗಳ ಆರೋಗ್ಯ ಪ್ರಾಧಿಕಾರಗಳಿಗೆ ಹಾಗೂ ಬಿ.ಬಿ.ಎಂ.ಪಿ ಆರೋಗ್ಯ ಪ್ರಾಧಿಕಾರಗಳಿಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. 

Follow Us:
Download App:
  • android
  • ios