ಆಷಾಢದಲ್ಲೇ ಸಾಮಾನ್ಯ ಶೀತ ಜ್ವರ ನೆಗಡಿ ಕೆಮ್ಮು ಜಾಸ್ತಿ. ಹಾಗೆಯೇ ಕೊರೋನಾ ಕೂಡ ವ್ಯಾಪಿಸುವ ಸಾದ್ಯತೆ ಅತಿ ಹೆಚ್ಚು ಅಂತಿದ್ದಾರೆ ತಜ್ಞರು. ಅದು ಯಾಕೆ ಮತ್ತು ಅದನ್ನು ತಡೆಯೋದು ಹೇಗೆ ಅಂತ ನೋಡೋಣ ಬನ್ನಿ. 

ಮೇ ತಿಂಗಳವರೆಗೂ ಭಾರತದಲ್ಲಿ ಸಾಕಷ್ಟು ಬಿಸಿಲು ಇತ್ತು. ವಾತಾವರಣ ಬೆಚ್ಚಗಿತ್ತು. ಹಾಗಾಗಿ ಕೊರೋನಾ ಪ್ರಕರಣಗಳು ಅಷ್ಟೊಂದು ಹಬ್ಬಲಿಲ್ಲ. ಜೂನ್‌ನಲ್ಲಿ ಮುಂಗಾರು ಆರಂಭವಾಯಿತು. ಬಿಸಿಲು ಕಡಿಮೆಯಾಯಿತು. ವಾತಾವರಣ ತಣ್ಣಗಾಯಿತು. ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಆರಂಭಿಸಿದವು. ಈಗ ಆಷಾಢ ಬಂದಿದೆ. ಆಷಾಢದಲ್ಲಿ ಮೊದಲೇ ಶೀತ ಜ್ವರ ನೆಗಡಿ ಕೆಮ್ಮು ಮುಂತಾದ ಪ್ರಕರಣಗಳು ಜಾಸ್ತಿ. ಅದಕ್ಕೆ ಕಾರಣ ಬಿಟ್ಟೂ ಬಿಡದಂತೆ ಬರುವ ಮಳೆ ಮೈಮೇಲೆ ಬಿಸಿಲು ಬೀಳದಿರುವುದು. ಸಾಕಷ್ಟು ಮೈ ಉಷ್ಣಾಂಶ ಕಾಪಾಡುವ ಆಹಾರಗಳನ್ನು ಸೇವಿಸದಿರುವುದು ಇತ್ಯಾದಿ. ಎಲ್ಲಕ್ಕಿಂತ ಮುಖ್ಯವಾಗಿ, ಬಿಸಿಲು ಬೀಳದೆ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಉಂಟುಮಾಡುವ ವಿಟಮಿನ್‌ ಡಿ ಉತ್ಪತ್ತಿ ಆಗುವುದೇ ಇಲ್ಲ. ಇದರಿಂದ ಕೊರೊನಾ ಪ್ರಕರಣಗಳು ಈ ಬಾರಿ ಸಿಕ್ಕಾಫಟ್ಟೆ ಹೆಚ್ಚಾಗಲಿವೆ, ಆದ್ದರಿಂಧ ಹುಷಾರಾಗಿರಿ ಅಂತಿದ್ದಾರೆ ತಜ್ಞರು. ಅದು ಈಗಾಗಲೇ ಕಂಡುಬರುತ್ತಿದೆಯಲ್ಲ? ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗಿ ಆಸ್ಪತ್ರೆಯಲ್ಲಿ ಬೆಡ್‌ಗಳೂ ಇಲ್ಲದೆ ಜನ ಕುಸಿದುಬೀಳಲು ಆರಂಭಿಸಿದ್ದಾರೆ. ನಮ್ಮ ಎಚ್ಚರಿಕೆ ನಾವು ತಗೊಳ್ಲೇ ಬೇಕು ಈಗ. 

Add Asianetnews Kannada as a Preferred SourcegooglePreferred


ನಮ್ಮ ದೇಹ ಉತ್ಪತ್ತಿ ಮಾಡುವ ವಿಟಮಿನ್ ಅಂದರೆ ಅದು ವಿಟಮಿನ್ ಡಿ. ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಆದರೆ ಈಗಿನ ಜೀವನಶೈಲಿಯಲ್ಲಿ ಎಷ್ಟೋ ಜನರು ಸೂರ್ಯನ ಬೆಳಕಿಗೆ ಹೋಗುವುದೇ ಇಲ್ಲ. ಶೇ.50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲ, ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಉತ್ಪತ್ತಿಯಾಗದೆ, ವಿಟಮಿನ್ ಡಿ ಕೊರತೆ ಕಂಡು ಬರುವುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಮಕ್ಕಳನ್ನು ಬರೀ ಮೈಯಲ್ಲಿ ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ಡಿ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ.

ಕೊರತೆಯಿಂಧ ಏನಾಗುತ್ತದೆ? 
- ವಿಟಮಿನ್ ಡಿ ಕೊರತೆ ಉಂಟಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ನಮ್ಮ ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಡಿ ಕೂಡ ಒಂದು ಕಾರಣವಿರಬಹುದು.
- ವಿಟಮಿನ್ ಡಿ ಕೊರತೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.
- ಆಗಾಗ ತಲೆಸುತ್ತು, ಸುಸ್ತು, ತಲೆನೋವು ಕಂಡು ಬರುತ್ತಿದ್ದರೆ ಅದಕ್ಕೆ ವಿಟಮಿನ್ ಡಿ ಕೊರತೆ ಕಾರಣವಿರಬಹುದು. ರಕ್ತದಲ್ಲಿ 20ng/mlಕ್ಕಿಂತ ಕಡಿಮೆ ವಿಟಮಿನ್ ಡಿ ಕಂಡು ಬಂದರೆ ಡಿ ವಿಟಮಿನ್‌ನ ಕೊರತೆ ಇದೆ ಎಂದರ್ಥ.
- ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಅವಶ್ಯಕ. ಇದು ಮೂಳೆಯು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳಲ್ಲಿ ನೋವು ಹಾಗೂ ಬೆನ್ನು ನೋವು ಡಿ ವಿಟಮಿನ್ ಕೊರತೆ ಉಂಟಾದರೆ ಉಂಟಾಗುವುದು.
- ವಿಟಮಿನ್ ಡಿ ಕೊರತೆ ಉಂಟಾದರೆ ಖಿನ್ನತೆ ಕಾಡುವುದು. ಬಾಣಂತಿಯರಲ್ಲಿ ಹಾಗೂ ವಯಸ್ಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ವಿಟಮಿನ್ ಡಿ ಇರುವ ಆಹಾರಗಳನ್ನು ತಿನ್ನುವ ಮೂಲಕ ವಿಟಮಿನ್ ಡಿ ಕೊರತೆ ನೀಗಿಸಬಹುದು.
- ಡಿ ವಿಟಮಿನ್ ಕೊರತೆ ಉಂಟಾದರೆ ಗಾಯವಾಗಿದ್ದರೆ ಬೇಗನೆ ಒಣಗುವುದಿಲ್ಲ. ಉರಿಯನ್ನು ಕಡಿಮೆ ಮಾಡಿ, ಸೋಂಕನ್ನು ನಿಯಂತ್ರಿಸಿ ಗಾಯ ಬೇಗನೆ ಒಣಗಲು ವಿಟಮಿನ್ ಡಿ ಅವಶ್ಯಕ.
- ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೂದಲಿನ ಆರೋಗ್ಯಕ್ಕೆ ಆರೋಗ್ಯಕರ ಡಯಟ್‌ ಅವಶ್ಯಕವಾಗಿದ್ದು ನಿಮ್ಮ ಡಯಟ್‌ನಲ್ಲಿ ವಿಟಮಿನ್ ಡಿ ಇರುವ ಆಹಾರಗಳನ್ನು ಸೇರಿಸಿ.

ಕೊರೋನಾದ 5 ಹೊಸ ಲಕ್ಷಣಗಳಿವು; ನಿರ್ಲಕ್ಷಿಸಬೇಡಿ! 

ಕೊರತೆ ಆಗದಿರಲು ಏನು ಮಾಡಬೇಕು?
- ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು.
- ಕಪ್ಪು ಬಣ್ಣದ ತ್ವಚೆಯವರು ಬಿಳಿ ಬಣ್ಣದ ತ್ವಚೆಯವರಿಗಿಂತ ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಇನ್ನು ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು. ದಿನದಲ್ಲಿ 8-15 ನಿಮಿಷ ಬಿಸಿಲಿನಲ್ಲಿ ನಿಲ್ಲುವುದು ಒಳ್ಳೆಯದು.

ನೆನಪಿನ ಶಕ್ತಿ ಹೆಚ್ಚಿಸೋಕೆ ಬೇಕು ಈ ಜೀವನಶೈಲಿ
- ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಮೀನು, ಮೃದ್ವಂಗಿಗಳು, ಸಿಗಡಿಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.
- ನೈಸರ್ಗಿಕವಾಗಿ ಸಿಗುವ ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಿರುತ್ತದೆ.
- ಮೊಟ್ಟೆಯ ಹಳದಿ ಅಂಶದಲ್ಲಿ ವಿಟಮಿನ್‌ ಡಿ ಸಾಕಷ್ಟು ಇರುತ್ತೆ. 
- ದನದ ಹಾಲು ಕುಡಿಯುವುದು, ಸೋಯಾ ಹಾಲು, ಕಿತ್ತಳೆ ಜ್ಯೂಸ್ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ. ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ವಿಟಮಿನ್ ಡಿ ಇರುತ್ತದೆ.

ಕೊರೋನಾ ತಡೆಯಲು ನಿಮ್ಮ ಮನಸ್ಸು ಮೊದಲು ದೃಢವಾಗಿರಲಿ