ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಾರ್ಗಮಧ್ಯದಲ್ಲಿಯೇ ಬಸ್ಸಿನಲ್ಲಿ ಮಹಿಳಾ‌ ನಿರ್ವಾಹಕಿ (ಕಂಡಕ್ಟರ್) ಹೆರಿಗೆ ಮಾಡಿಸಿದ್ದಾರೆ.

ಚಿಕ್ಕಮಗಳೂರು (ಮೇ 15): ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಹಿಳೆಗೆ ಮಾರ್ಗಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು ಬಸ್ಸಿನ ಮಹಿಳಾ‌ ನಿರ್ವಾಹಕಿ (ಕಂಡಕ್ಟರ್) ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕ ವಾಹನ ಸಂಖ್ಯೆ ಕೆ.ಎ-18,ಎಫ್-0865ರಲ್ಲಿ ಬೆಂಗಳೂರು- ಚಿಕ್ಕಮಗಳೂರು ಮಾರ್ಗ ಮಧ್ಯೆ ಕಾರ್ಯಾಚರಣೆಯ ವೇಳೆ, ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ, ಮಧ್ಯಾಹ್ನ 1.25ರ ವೇಳೆ ನಿಗಮದ ವಾಹನ ಸಂಚರಿಸುತ್ತಿತ್ತು. ಬಸ್ಸಿನಲ್ಲಿ ಒಟ್ಟು 45 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಪೈಕಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಸ್‌ ಸಾಗುವ ಮಾರ್ಗದಲ್ಲಿ ಹತ್ತಾರು ಕಿಲೋಮೀಟರ್‌ ದೂರದಲ್ಲಿ ಯಾವುದೇ ಆಸ್ಪತ್ರೆಗಳು ಇರಲಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದ ಮಹಿಳಾ ಕಂಡಕ್ಟರ್‌ ವಾಹನವನ್ನು ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

ಗರ್ಭಿಣಿ ಸಾಯಿಸಿದ ಸರ್ಕಾರಿ ವೈದ್ಯರು: ತಾಯಿ ಸತ್ತರೂ ಮಗು ಬದುಕಿಸಿದ ಖಾಸಗಿ ವೈದ್ಯರು.!

ಎಸ್ ವಸಂತಮ್ಮ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್‌ ಆಗಿದ್ದಾರೆ. ಚಾಲಕ-ಕಂ-ನಿರ್ವಾಹಕಿ ಬಿಲ್ಲೆ ಸಂಖ್ಯೆ 245 ಇವರು ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯವಾಗಿದ್ದಾರೆ. ಗರ್ಭಿಣಿಯ ಕುಟುಂಬ ಸದಸ್ಯರು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ಯಾವುದೇ ಖಾಸಗಿ ಕಾರು ಅಥವಾ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಹೋಗಲಾಗದೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದರು.

ಇನ್ನು ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರದ ಹಿನ್ನೆಲೆಯಲ್ಲಿ ತತಕ್ಷಣದ ಖರ್ಚಿಗೆ ಅನುಕೂಲ ಆಗಲೆಂದು ಬಸ್‌ನ ಡ್ರೈವರ್‌ ಹಾಗೂ ಕಂಡಕ್ಟರ್‌ ಸೇರಿಕೊಂಡು ಪ್ರಯಾಣಿಕರ ಬಳಿ ಹಣ ಸಂಗ್ರಹಿಸಿ ಮಹಿಳೆಗೆ 1,500 ರೂ. ಹಣವನ್ನು ಕೊಟ್ಟು ಕಳುಹಿಸಿದ್ದಾರೆ. ನಂತರ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ಪಡೆಯಲು ಅನುಕೂಲ ಮಾಡಿದ್ದಾರೆ. ಮಹಿಳೆ ಮತ್ತು ಮಗು ಆರೋಗ್ಯವಾಗಿದ್ದಾರೆ.

138 ವರ್ಷಗಳಲ್ಲೇ ಮೊದಲ ಬಾರಿ ಕುಟುಂಬದಲ್ಲಿ ಹೆಣ್ಣು ಮಗು ಜನನ : ಲಕ್ಷ್ಮಿಯ ಆಗಮನಕ್ಕೆ ಕುಣಿದಾಡಿದ ಕುಟುಂಬ

ಕಂಡಕ್ಟರ್‌ ಕಾರ್ಯಕ್ಕೆ ಶ್ಲಾಘನೆ: ಬಸ್‌ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ವೇಳೆ ಸಮಯಕ್ಕೆ ಸರಿಯಾಗಿ ಗರ್ಭಿಣಿಗೆ ಸ್ಪಂದಿಸಿ ಮಗು‌ ಮತ್ತು ತಾಯಿಯನ್ನು‌ ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿಯ ಕಾರ್ಯವು ನಿಜಕ್ಕೂ ಶ್ಲಾಘನೀಯ. ಮಹಿಳಾ ಕಂಡಕ್ಟರ್‌ ಅವರ ಕಾರ್ಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.