'ಸೇಕ್ರೆಡ್ ಗೇಮ್ಸ್' ಖ್ಯಾತಿಯ ನಟಿ ರಾಜಶ್ರೀ ದೇಶಪಾಂಡೆ ಅವರಿಗೆ ಗ್ರೇಡ್ 1 ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಸಾಮಾನ್ಯ ತಪಾಸಣೆ ವೇಳೆ ರೋಗ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಹಿತಿ ನೀಡಿದ್ದಾರೆ.

ಮುಂಬೈ (ಮಾ.4): ಪ್ರಖ್ಯಾತ ವೆಬ್ ಸಿರೀಸ್‌ 'ಸೇಕ್ರೆಡ್ ಗೇಮ್ಸ್'ನಲ್ಲಿ ನವಾಜುದ್ದೀನ್ ಸಿದ್ದಿಕಿಯವರ ಪತ್ನಿ ಸುಭದ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದ ಮರಾಠಿ ಮೂಲದ ಪ್ರತಿಭಾವಂತ ನಟಿ ರಾಜಶ್ರೀ ದೇಶಪಾಂಡೆ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಸ್ವತಃ ರಾಜಶ್ರೀ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಆಘಾತಕಾರಿ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸೇಕ್ರೆಡ್ ಗೇಮ್ಸ್'ನಲ್ಲಿ ಸಖತ್‌ ಬೋಲ್ಡ್‌ ನಟನೆಯಿಂದಲೇ ರಾಜಶ್ರೀ ದೇಶಪಾಂಡೆ ಮನೆಮಾತಾಗಿದ್ದರು.

ರೂಟಿನ್ ಚೆಕಪ್ ವೇಳೆ ಪತ್ತೆ

ರಾಜಶ್ರೀ ಅವರು ಸಾಮಾನ್ಯ ತಪಾಸಣೆಗಾಗಿ (Routine Checkup) ಆಸ್ಪತ್ರೆಗೆ ಹೋದಾಗ ಅವರಿಗೆ 'ಗ್ರೇಡ್ 1' ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈಗಾಗಲೇ ಅವರು ಚಿಕಿತ್ಸೆ ಪಡೆಯಲು ಆರಂಭಿಸಿದ್ದು, ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಸರ್ಜರಿ ಬಳಿಕ ಆಸ್ಪತ್ರೆಯ ಬೆಡ್ ಮೇಲೆ ಇರುವ ಫೋಟೋ ಪೋಸ್ಟ್ ಮಾಡಿರುವ ಅವರು, ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟದ ಬಗ್ಗೆ ಬರೆದುಕೊಂಡಿದ್ದಾರೆ.

View post on Instagram

ರಾಜಶ್ರೀ ದೇಶಪಾಂಡೆ ಅವರ ಪೋಸ್ಟ್

"ನೀವು ಈ ಪೋಸ್ಟ್ ಓದುತ್ತಿದ್ದೀರಿ ಎಂದರೆ, ನನಗೆ 'ಇನ್ಫಿಲ್ಟ್ರೇಟಿಂಗ್ ಡಕ್ಟಲ್ ಕಾರ್ಸಿನೋಮ (NOS)' ಎಂಬ ಗ್ರೇಡ್ 1 ಸ್ತನ ಕ್ಯಾನ್ಸರ್ ಇರುವುದನ್ನು ನನ್ನ ಪೋಷಕರಿಗೆ ತಿಳಿಸುವ ಧೈರ್ಯ ಬಂದಿದೆ ಎಂದರ್ಥ. ಈಗ ನಿಮಗೂ ಈ ವಿಷಯ ತಿಳಿಸುವ ಸಮಯ ಬಂದಿದೆ. ಅದೃಷ್ಟವಶಾತ್ ರೂಟಿನ್ ಚೆಕಪ್ ವೇಳೆ ಇದು ಪತ್ತೆಯಾದ ಕಾರಣ, ಇದರ ವಿರುದ್ಧ ಹೋರಾಡುವ ಅವಕಾಶ ಸಿಕ್ಕಿತು. ಹಲವಾರು ಟೆಸ್ಟ್ ಮತ್ತು ಸರ್ಜರಿಗಳಿಂದಾಗಿ ಈ ಪ್ರಯಾಣ ಏರಿಳಿತಗಳಿಂದ ಕೂಡಿತ್ತು, ಆದರೆ ಎಲ್ಲರ ಪ್ರೀತಿಯಿಂದಾಗಿ ನಾನು ಇದನ್ನು ಎದುರಿಸಲು ಸಾಧ್ಯವಾಯಿತು. ಶಸ್ತ್ರಚಿಕಿತ್ಸೆಯ ನಂತರ ಅಮ್ಮ ಮತ್ತು ಅಪ್ಪನ ಮುಖ ನೋಡಿದಾಗ ನನ್ನಲ್ಲಿದ್ದ ಭಯವು ಅಚಲ ಶಕ್ತಿಯಾಗಿ ಬದಲಾಯಿತು. ಈಗ ನಾನು ಗುಣಮುಖಳಾಗುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದೇನೆ," ಎಂದು ರಾಜಶ್ರೀ ಬರೆದಿದ್ದಾರೆ.

ಸಾಮಾಜಿಕ ಕಾರ್ಯದ ಸಂಕಲ್ಪ

ರಾಜಶ್ರೀ ಕೇವಲ ನಟನೆಯಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಸೇವೆಗಾಗಿಯೂ ಗುರುತಿಸಿಕೊಂಡಿದ್ದಾರೆ. 2026ರಲ್ಲಿ ಅವರು ಹಳ್ಳಿಗಳಲ್ಲಿ ಎರಡು ಶಾಲೆಗಳ ನಿರ್ಮಾಣ, ನದಿಯೊಂದರ ಪುನರುಜ್ಜೀವನ ಮತ್ತು ಕೆಲವು ಪ್ರತಿಭಾವಂತರ ಕಥೆಗಳನ್ನು ಚಿತ್ರೀಕರಿಸುವ ಗುರಿ ಹೊಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಕ್ಯಾನ್ಸರ್‌ನಿಂದಾಗಿ ನನ್ನ ಯಾವುದೇ ಪ್ಲ್ಯಾನ್ ಬದಲಾಗುವುದಿಲ್ಲ. ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ಎಲ್ಲವನ್ನೂ ಪೂರೈಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈಗ ನಾನು ಹೆಚ್ಚಿನ ಕೆಲಸ ಮಾಡಬೇಕಿದೆ," ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.