ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ಲಕ್ಷಣಗಳು ಇರುವವರು ಹಾಗೂ ಆರೋಗ್ಯವಂತರ ಪೈಕಿ ರ್ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಈ ಮೂರು ದಿನಗಳಲ್ಲಿ ಚೀನಾದ ಒಬ್ಬ ವ್ಯಕ್ತಿಯೂ ಸೇರಿದಂತೆ ಒಟ್ಟು 9 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಬೆಂಗಳೂರು (ಡಿ.26): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ಲಕ್ಷಣಗಳು ಇರುವವರು ಹಾಗೂ ಆರೋಗ್ಯವಂತರ ಪೈಕಿ ರ್ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಈ ಮೂರು ದಿನಗಳಲ್ಲಿ ಚೀನಾದ ಒಬ್ಬ ವ್ಯಕ್ತಿಯೂ ಸೇರಿದಂತೆ ಒಟ್ಟು 9 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಚೀನಾದಲ್ಲಿ ಕರೊನಾ ಸೋಂಕು ಉಲ್ಬಣಗೊಂಡಿದ್ದು, ಬಿಎಫ್‌ 7 ಕೋವಿಡ್‌ ರೂಪಾಂತರಿ ಮಾದರಿಯ ಸೋಂಕು ಪತ್ತೆಯಾದ ಬೆನ್ನಲೇ ಮತ್ತೆ ಇಡೀ ಜಗತ್ತು ಆತಂಕಕ್ಕೆ ಒಳಗಾಗಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನ ಸೇವಾ ಸೌಲಭ್ಯಗಳನ್ನು ಹೊಂದಿದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೂ ಆರ್‌ಟಿ-ಪಿಸಿಆರ್‌ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಅದರಲ್ಲಿ ಸೋಂಕಿತರು ಪತ್ತೆ ಆಗುತ್ತಿರುವುದು ಆತಂಕಕ್ಕೆ ಕಾರವಾಗಿದೆ. ಇನ್ನು ಚೀನಾದಿಂದ ಆಗಮಿಸಿದ್ದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆ ಆಗಿದ್ದು, ಬಿಎಫ್‌-7 ಮಾದರಿಯ ಸೋಂಕು ಇದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

90 ದಿನದಲ್ಲಿ ಸ್ಮಶಾನವಾಗುತ್ತಾ ಚೀನಾ? ಕರ್ಮ ಬಿಡೋಲ್ಲ ಬಿಡಿ!

ಆರೋಗ್ಯ ಇಲಾಖೆ ಆಯುಕ್ತರು ಹೇಳಿದ್ದೇನು?: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಮೂರು ದಿನಗಳಿಂದ ಕರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದವರನ್ನು ಹಾಗೂ ರ್ಯಾಂಡಮ್‌ ಆಗಿ ಪ್ರಯಾಣಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಿದ್ದರಿಂದ 9 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆದರೆ, ಇದು ಯಾವ ಮಾದರಿಯ ಕೋವಿಡ್‌ ಸೋಂಕು ಎಂಬುದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಸೋಂಕಿತರ ಪೈಕಿ 4 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ: ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪೈಕಿ 9 ಮಂದಿ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 5 ಮಂದಿಗೆ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅವರಿಗೆ ಮನೆಯಲ್ಲಿದ್ದು ಸಂಪೂರ್ಣ ಗುಣಮುಖ ಆದ ನಂತರವೇ ಮನೆಯಿಮದ ಹೊರಬರುವಂತೆ ಸೂಚಿಸಲಾಗಿದೆ. ಉಳಿದಂತೆ 4 ಮಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಓರ್ವ ವ್ಯಕ್ತಿ ಚೀನಾದಿಂದ ಬಂದಿದ್ದಾನೆ. ಒಟ್ಟಾರೆ ಒಂಭತ್ತೂ ಕೋವಿಡ್‌ ಸೋಂಕಿತರ ಮಾದರಿಗಳನ್ನು ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ರೂಪಾಂತರಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ತಿಳಿಸಿದ್ದಾರೆ.

Covid Guideline; ಕೊರೋನಾ ನಿರ್ಬಂಧ: ಇಂದು ಮಹತ್ವದ ಸಭೆ

ನಿಯಮ ಪಾಲಿಸದ ಸಾರ್ವಜನಿಕರು: ಕೋವಿಡ್‌ ಹಿನ್ನೆಲೆಯಲ್ಲಿ ಬಸ್‌, ರೈಲು ಮತ್ತು ಮೆಟ್ರೋದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರ್ಕಾರ ಈಗಾಗಲೇ ಆದೇಶವನ್ನು ಹೊರಡಿಸಿದೆ. ಆದರೆ, ಬೆಂಗಳೂರು ಸೇರಿ ಯಾವುದೇ ಪ್ರದೇಶದಲ್ಲಿ ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಹಾಕದೆ ಜನಜಂಗುಳಿಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ. ಇನ್ನು ಬಸ್‌ಗಳು, ರೈಲುಗಳಲ್ಲಿ ಮಾಸ್ಕ್‌ ಹಾಕುತ್ತಿಲ್ಲ. ಅನಾರೋಗ್ಯ ಇದ್ದರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಬೇಕಾಬಿಟ್ಟಿಯಾಗಿ ಜನರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಕೋವಿಡ್‌ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.