HDKಗೆ ಇಬ್ಬರ ಜತೆಗೂ ಅನುಭವ ಇದೆ: ಶೋಭಾ ಕರಂದ್ಲಾಜೆ
ಹಾಸನಾಂಬೆ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ/ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಹೋಗಲಿ ಎಂದು ಪೂಜೆ ಸಲ್ಲಿಸಿದ್ದೇನೆ/ ಉಪ ಚುನಾವಣೆಯಲ್ಲಿ ಯಡಿಯೂರಪ್ಪಗೆ ಶಕ್ತಿ ಬರಲಿ ಎಂದು ಪ್ರಾರ್ಥಿಸಿದ್ದೇನೆ
ಹಾಸನ[ಅ. 27] ಹಾಸನಾಂಬೆ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣದ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಯಡಿಯೂರಪ್ಪ ಹಾಗೂ ನರೇಂದ್ರ ಮೋದಿಯವರಿಗೆ ಸಂಕಷ್ಟ ದೂರ ಮಾಡೋ ಶಕ್ತಿ ಕೊಡಲಿ ಎಂದು ಪೂಜೆ ಮಾಡಿದ್ದೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಹೋಗಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಸುಭದ್ರ ಸರ್ಕಾರ, ಉಪ ಚುನಾವಣೆಯಲ್ಲಿ ಯಡಿಯೂರಪ್ಪಗೆ ಶಕ್ತಿ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಭವಿಷ್ಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೂ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ, ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರದ ಸಹವಾಸ ಮಾಡಿದವರು. ಅವರಿಗೆ ಇಬ್ಬರ ಜೊತೆಗೂ ಅನುಭವ ಇದೆ. ಯಾವ ಪಕ್ಷದೊಟ್ಟಿಗೆ ಹೋದಾಗ ಅವರ ಅನುಭವ ಏನು ಎನ್ನೋದು ಅವರಿಗೆ ಗೊತ್ತಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
‘ಕುಮಾರಸ್ವಾಮಿ ಆಲೂಗಡ್ಡೆಯಿಂದ ಶ್ರೀಮಂತರಾದರು’
ಕುಮಾರಸ್ವಾಮಿಗೆ ಕಾಂಗ್ರೆಸ್ ಜೊತೆಗಿನ ಒಂದು ವರ್ಷದ ಅನುಭವ ಅವರಿಗೆ ಕಹಿ ಆಗಿರಬೇಕು. ಜೆಡಿಎಸ್ ಜೊತೆಗೆ ಹೊಂದಾಣಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಿ ವಿಪಕ್ಷನಾಯಕನ ಸ್ಥಾನ ಪಡೆದಿದ್ದಾರೆ. ಸಿದ್ದರಾಮಯ್ಯಗೆ ಎಟುಕದ ದ್ರಾಕ್ಷಿ ಯಾವಾಗಲು ಹುಳಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಬಗ್ಗೆ ಹೆಚ್ಚು ಕಮೆಂಟ್ ಮಾಡೋದಿಲ್ಲ. ಅವರು ಅಧಿಕಾರಲ್ಲಿದ್ದಾಗ,ಜಾತಿ ಧರ್ಮದ ಆಧಾರದ ರಾಜಕೀಯ ಮಾಡಿ ಮತ್ತೆ ಅಧಿಕಾರ ಹಿಡಿಯುವ ಯತ್ನ ಮಾಡಿದರು. ಅವರ ನಾಲಿಗೆ ಮತ್ತು ಭಾಷೆಗೆ ಕಂಟ್ರೋಲ್ ಇಲ್ಲ. ಸಿದ್ದರಾಮಯ್ಯರಿಂದ ಬಹಳ ನಿರೀಕ್ಷೆ ಮಾಡಲಿಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಕುಟುಕಿದರು.
ವೀರ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಎಲ್ಲಿಡಬೇಕೆಂದು ಕಾಂಗ್ರೆಸ್ ಯೋಚನೆ ಮಾಡಲಿ. ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಬರಲ್ಲ. ಚುನಾವಣೆ ಬಳಿಕ ಯಡಿಯೂರಪ್ಪ ಶಕ್ತಿ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.