ಹಾಸನದ ಸಕಲೇಶಪುರದಲ್ಲಿ, ಕೆನರಾ ಬ್ಯಾಂಕ್ ₹9.34 ಸಾಲ ಬಾಕಿಗಾಗಿ ಗ್ರಾಹಕರಿಗೆ ಕರೆ ಮಾಡಿದೆ. ಗ್ರಾಹಕ ₹10 ಪಾವತಿಸಿದರೂ, 66 ಪೈಸೆ ಚಿಲ್ಲರೆ ವಾಪಸ್ ನೀಡದ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಈ ಘಟನೆಯು ಬ್ಯಾಂಕ್‌ಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹಾಸನ: ಬ್ಯಾಂಕ್ ವ್ಯವಸ್ಥೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಹ ಅಚ್ಚರಿಯ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಕೇವಲ ₹9 ರೂ 34 ಪೈಸೆ ಸಾಲ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ಕೆನರಾ ಬ್ಯಾಂಕ್ ನಿಂದ ಗ್ರಾಹಕರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಸಾಲ ಕಟ್ಟಿದ ನಂತರ ಚಿಲ್ಲರೆ ನೀಡದ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಲೇರಲು ಗ್ರಾಹಕ ತೀರ್ಮಾ ಮಾಡಿದ್ದಾನೆ.

Add Asianetnews Kannada as a Preferred SourcegooglePreferred

ಸಕಲೇಶಪುರ ತಾಲೂಕಿನ ನಿವಾಸಿ ಚರಣ್ ಎಂಬ ಗ್ರಾಹಕರಿಗೆ, ತಮ್ಮ ಸಾಲ ಖಾತೆಯಲ್ಲಿ ₹9.34 ಬಾಕಿ ಉಳಿದಿದೆ ಕಟ್ಟಿ ಎಂದು ಬ್ಯಾಂಕ್ ಸಿಬ್ಬಂದಿಯಿಂದ ದೂರವಾಣಿ ಕರೆ ಬಂದಿದೆ. ಕರೆ ಬಂದ ತಕ್ಷಣವೇ ಚರಣ್ ಅವರು ಯಾವುದೇ ವಿಳಂಬವಿಲ್ಲದೆ ಬ್ಯಾಂಕ್‌ಗೆ ತೆರಳಿ ₹10 ಹಣವನ್ನು ಪಾವತಿಸಿದ್ದಾರೆ.

66 ಪೈಸೆ ವಾಪಸ್ ಕೊಡದ ಬ್ಯಾಂಕ್ ವಿರುದ್ಧ ಅಸಮಾಧಾನ

₹9.34 ಬಾಕಿಗೆ ₹10 ಪಾವತಿಸಿದರೂ ಉಳಿದ 66 ಪೈಸೆಯನ್ನು ಬ್ಯಾಂಕ್ ವಾಪಸ್ ನೀಡಲಿಲ್ಲ ಎಂದು ಚರಣ್ ಆರೋಪಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಅವರು, “ನಾನು ಹೆಚ್ಚಾಗಿ ಕೊಟ್ಟ ಹಣವನ್ನು ವಾಪಸ್ ಕೊಡದಿದ್ದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬ್ಯಾಂಕಿನ ವಾಸ್ತವತೆ ಬಿಚ್ಚಿಟ್ಟ ಗ್ರಾಹಕ

ಚರಣ್ ಅವರು ಈ ಹಿಂದೆ ಬ್ಯಾಂಕ್‌ನಿಂದ ₹50,000 ಸಾಲ ಪಡೆದಿದ್ದರು. ಆ ಸಾಲದ ಬಹುತೇಕ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದು, ಕೇವಲ ₹9.34 ಮಾತ್ರ ಬಾಕಿ ಉಳಿದಿತ್ತು. ಈ ಅತಿ ಸಣ್ಣ ಮೊತ್ತದ ಬಾಕಿಗಾಗಿ ಕೂಡ ಬ್ಯಾಂಕ್‌ನಿಂದ ಕರೆ ಮಾಡಿರುವುದನ್ನು ಪ್ರಶ್ನಿಸಿದ ಚರಣ್, “ಕೇವಲ 9 ರೂಪಾಯಿ 34 ಪೈಸೆಗಾಗಿ ಬ್ಯಾಂಕ್ ಕರೆ ಮಾಡುತ್ತದೆ ಎಂದರೆ, ಗ್ರಾಹಕರ ಮೇಲೆ ಇರುವ ಒತ್ತಡ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಸಕಲೇಶಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಘಟನೆ

ಈ ಘಟನೆ ಸಕಲೇಶಪುರ ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಸಾಲದ ಉಳಿಕೆ ಮೊತ್ತ ಪಾವತಿಸಲು ಕರೆ ಮಾಡಿದ್ದ ಬ್ಯಾಂಕ್, ಹೆಚ್ಚಾಗಿ ಪಾವತಿಸಿದ ಹಣವನ್ನು ವಾಪಸ್ ನೀಡದಿರುವುದು ಗ್ರಾಹಕ ಹಕ್ಕುಗಳ ಕುರಿತು ಪ್ರಶ್ನೆ ಎತ್ತಿದೆ. 10 ರೂಪಾಯಿ ಪಾವತಿಸಿದ್ದೇನೆ, ಆದರೆ 66 ಪೈಸೆ ವಾಪಸ್ ಕೊಡಲಾಗಿಲ್ಲ. ಇದು ಹಣದ ಪ್ರಶ್ನೆ ಅಲ್ಲ, ನ್ಯಾಯದ ಪ್ರಶ್ನೆ. ಅಗತ್ಯವಿದ್ದರೆ ಬ್ಯಾಂಕ್ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಚರಣ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ಮತ್ತೊಮ್ಮೆ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅತಿ ಸಣ್ಣ ಮೊತ್ತಗಳ ವಿಚಾರದಲ್ಲೂ ಬ್ಯಾಂಕ್ ಮಾನವೀಯತೆ ಹಾಗೂ ಸ್ಪಷ್ಟ ನೀತಿ ಅಗತ್ಯವಿದೆ ಎಂಬ ಸಂದೇಶ ನೀಡುತ್ತಿದೆ.