- Home
- Karnataka Districts
- ಹಾಸನ: ಜೀತಕ್ಕಿದ್ದ 18ಮಂದಿ ರಕ್ಷಣೆ, ಕೂಡಿ ಹಾಕಿದ್ದ ಶೆಡ್ನಿಂದ ಓರ್ವ ತಪ್ಪಿಸಿಕೊಂಡಿದ್ದರಿಂದ ಬಯಲಾಯ್ತು ಕರಾಳ ಸತ್ಯ!
ಹಾಸನ: ಜೀತಕ್ಕಿದ್ದ 18ಮಂದಿ ರಕ್ಷಣೆ, ಕೂಡಿ ಹಾಕಿದ್ದ ಶೆಡ್ನಿಂದ ಓರ್ವ ತಪ್ಪಿಸಿಕೊಂಡಿದ್ದರಿಂದ ಬಯಲಾಯ್ತು ಕರಾಳ ಸತ್ಯ!
ಹಾಸನದಲ್ಲಿ, ಜೀತ ಪದ್ಧತಿಯಡಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ.

18 ಮಂದಿಗೆ ಜೀತವಿಮುಕ್ತಿ
ಹಾಸನ ಜಿಲ್ಲೆಯಲ್ಲಿ ಮಾನವೀಯತೆಯನ್ನು ಮರೆತಿರುವ ಜೀತಪದ್ದತಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತಂದು, ಯಾವುದೇ ಸಂಬಳ ನೀಡದೇ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದ ಆರೋಪದಡಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿ 18 ಮಂದಿಯನ್ನು ಜೀತದಿಂದ ಮುಕ್ತಗೊಳಿಸಿದ್ದಾರೆ.
ತಾಯಿಯ ಕಣ್ಣೀರಿನಿಂದ ಆರಂಭವಾದ ರಕ್ಷಣಾ ಕಾರ್ಯ
ಈ ಭಾರೀ ಅಕ್ರಮವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಎಕ್ಸ್ಕ್ಲೂಸಿವ್ ವರದಿಯ ಮೂಲಕ ಬಹಿರಂಗಪಡಿಸಿದೆ. ಹಾಸನದ ವರದಿಗಾರ ಹರೀಶ್ ಅವರಿಗೆ ವಿಜಯಪುರ ಮೂಲದ ವೃದ್ಧೆಯೊಬ್ಬರು ಭೇಟಿ ನೀಡಿ, ತಮ್ಮ ಮಗ ಈರಣ್ಣನನ್ನು ಜೀತವಿರಿಸಿಕೊಂಡಿದ್ದಾರೆ ಎಂದು ಕಣ್ಣೀರಿನಿಂದ ತಮ್ಮ ನೋವು ತೋಡಿಕೊಂಡಿದ್ದರು. ಈ ಮಾಹಿತಿ ಹೊರಬಂದ ಬಳಿಕ ಸುವರ್ಣ ನ್ಯೂಸ್, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡುವೆ ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳಲಾಯಿತು.
ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ದಾಳಿ
ಪೊಲೀಸ್ ಅಧೀಕ್ಷಕ (ಎಎಸ್ಪಿ) ತಮ್ಮಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಜೀತದಲ್ಲಿದ್ದ 18 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಒಂದೇ ಶೆಡ್ನಲ್ಲಿ ಅಕ್ರಮ ಬಂಧನ
ಈ ಜೀತಪದ್ದತಿ ಬೇಲೂರು ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ನಡೆಯುತ್ತಿತ್ತು . ನಾಗರಾಜ್ ಮತ್ತು ಮೋಹನೇಶ್ ಎಂಬವರು ಕಾರ್ಮಿಕರನ್ನು ಒಂದೇ ಶೆಡ್ನಲ್ಲಿ ಅಕ್ರಮವಾಗಿ ಬಂಧಿಸಿ, ಮೂಲಭೂತ ಸೌಲಭ್ಯಗಳಿಲ್ಲದೆ ಅಮಾನವೀಯವಾಗಿ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿತ್ತು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಸಿ, ರಾತ್ರಿ ಮತ್ತೆ ಶೆಡ್ಗೆ ಕರೆತಂದು ಇಡಲಾಗುತ್ತಿತ್ತು. ಹೊರಗಿನವರ ಸಂಪರ್ಕವಾಗದಂತೆ ಕಠಿಣ ನಿಗಾವಹಿಸಿ, ಕಾರ್ಮಿಕರನ್ನು ಭೀತಿಯಲ್ಲಿಟ್ಟಿದ್ದರು ಎನ್ನಲಾಗಿದೆ.
ರೈಲ್ವೆ ನಿಲ್ದಾಣಗಳಿಂದ ಜನರ ಕರೆತರುವುದು
ಆರೋಪಿಗಳು ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯವಿಲ್ಲದೆ ಇದ್ದ ಜನರನ್ನು ಗುರುತಿಸಿ, ಕೆಲಸ ನೀಡುವ ನೆಪದಲ್ಲಿ ಕರೆತಂದು ಹಣ ನೀಡದೆ ದುಡಿಸಿಕೊಳ್ಳುತ್ತಿದ್ದರು ಎಂಬುದು ಬಹಿರಂಗವಾಗಿದೆ. ಒಂದೇ ಶೆಡ್ನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಜನರು ನರಕಸದೃಶ ಜೀವನ ನಡೆಸುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.
ವಿವಿಧ ರಾಜ್ಯಗಳ ಕಾರ್ಮಿಕರು
ಜೀತದಿಂದ ಮುಕ್ತಗೊಳಿಸಲಾದವರಲ್ಲಿ ಕೇರಳ, ಒರಿಸ್ಸಾ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಹೊರರಾಜ್ಯಗಳ ಕಾರ್ಮಿಕರಿದ್ದು, ರಾಜ್ಯದ ಹಾವೇರಿ, ವಿಜಯಪುರ, ಗದಗ, ಕಾಸರಗೋಡು ಸೇರಿದಂತೆ ಹಲವೆಡೆಗಳಿಂದ ಬಂದವರು ಇದ್ದರು. ಇವರ ದುಡಿಮೆಯಿಂದ ಸಂಪಾದಿಸಿದ ಹಣವನ್ನು ನಾಗರಾಜ್ ಮತ್ತು ಮೋಹನೇಶ್ ತಮ್ಮದಾಗಿಸಿಕೊಂಡು, ಕಾರ್ಮಿಕರಿಗೆ ಒಂದು ರೂಪಾಯಿ ಕೂಡ ನೀಡದೇ ಜೀತವಿರಿಸಿಕೊಂಡಿದ್ದರು ಎಂಬುದು ಆರೋಪವಾಗಿದೆ.
ರಜತ್ ಪರಾರಿ; ಕುಟುಂಬಕ್ಕೆ ಮಾಹಿತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಮೂಲದ ರಜತ್ ಎಂಬಾತ ತಪ್ಪಿಸಿಕೊಂಡು ಹೋಗಿದ್ದಾನೆ. ಈರಣ್ಣನ ಸ್ನೇಹಿತನಾಗಿದ್ದ ರಜತ್, ಈರಣ್ಣನನ್ನು ಬೇಲೂರಿನಲ್ಲಿ ಜೀತವಿರಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆತನ ಕುಟುಂಬಕ್ಕೆ ನೀಡಿದ್ದನು. ನಂತರ ಸುವರ್ಣ ನ್ಯೂಸ್ ಈರಣ್ಣನ ತಾಯಿ ಹಾಗೂ ಕುಟುಂಬವನ್ನು ಸಂಪರ್ಕಿಸಿ, ರಕ್ಷಣಾ ಕಾರ್ಯಾಚರಣೆಗೆ ದಾರಿ ಮಾಡಿಕೊಟ್ಟಿತು.
ಜೀತಪದ್ದತಿ ನಿಷೇಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಿಸಲಾದ 18 ಮಂದಿಗೆ ಪುನರ್ವಸತಿ, ಆಹಾರ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ. ಈ ಘಟನೆ ಜೀತಪದ್ದತಿ ಎಂಬ ಸಾಮಾಜಿಕ ಕಳಂಕ ಇನ್ನೂ ಜೀವಂತವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂತಹ ಅಮಾನವೀಯ ಕೃತ್ಯಗಳ ವಿರುದ್ಧ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕೆಂಬ ಸಂದೇಶವನ್ನು ನೀಡುತ್ತಿದೆ.

