- Home
- Life
- Women
- IAS Keerthi Jalli : ನೆರೆಪೀಡಿತ ಗ್ರಾಮಕ್ಕೆ ಬೋಟ್ ಮೂಲಕ ಹೋಗ್ತಾರೆ, ಬರೀಗಾಲಿನಲ್ಲೇ ನಡೆದು ಸಮಸ್ಯೆ ಗಮನಿಸ್ತಾರೆ!
IAS Keerthi Jalli : ನೆರೆಪೀಡಿತ ಗ್ರಾಮಕ್ಕೆ ಬೋಟ್ ಮೂಲಕ ಹೋಗ್ತಾರೆ, ಬರೀಗಾಲಿನಲ್ಲೇ ನಡೆದು ಸಮಸ್ಯೆ ಗಮನಿಸ್ತಾರೆ!
ಇತ್ತೀಚೆಗೆ ಅಸ್ಸಾಂನಲ್ಲಿ ದೊಡ್ಡ ಮಟ್ಟದಲ್ಲಿ ನೆರೆ ಸಮಸ್ಯೆ ಉಂಟಾಯಿತು. ದೆಹಲಿಯ ನಾಯಿ ಪ್ರೇಮಿ ಐಎಎಸ್ ಅಧಿಕಾರಿಯ ಸುದ್ದಿಯ ಎದುರು, ಅಸ್ಸಾಂ ಪ್ರವಾಹದ ಸಮಯದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ (IAS Keerthi Jalli ) ಮಾಡಿದ ಕೆಲಸ ಹೆಚ್ಚಾಗಿ ಗಮನಕ್ಕೆ ಬರಲಿಲ್ಲ. ನೆರೆಪೀಡಿತ ಗ್ರಾಮಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಈ ಕಾಲದಲ್ಲಿ 32 ವರ್ಷದ ಕೀರ್ತಿ ಜಲ್ಲಿ, ಬೋಟ್ ಗಳ ಮೂಲಕ ತೆರಳಿದ್ದರು. ಕೆಸರು, ಕೊಚ್ಚೆಯಲ್ಲಿ ಬರಿಗಾಲಲ್ಲಿ ನಡೆದು ಮಕ್ಕಳು, ಮಹಿಳೆಯರ ಸಮಸ್ಯೆ ಆಲಿಸಿದ್ದರು. ವೈರಲ್ ಆಗಿರುವ ಚಿತ್ರಗಳಲ್ಲಿ ಎಲ್ಲಿಯೂ ಅವರೊಬ್ಬರು ಡಿಸಿ ಎನ್ನುವ ಭಾವನೆ ಮೂಡುವುದೇ ಇಲ್ಲ. ಜನರ ನಡುವೆಯೇ ನಿಂತು, ಜನರ ಸಮಸ್ಯೆಗಳನ್ನು ಆಲಿಸುವ ಇಂಥ ಅಧಿಕಾರಿಗಳ ಸಂಖ್ಯೆ ಸಾವಿರ, ಲಕ್ಷವಾಗಲಿ. ಈ ಅಧಿಕಾರಿಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಅಸ್ಸಾಂನ ಕ್ಯಾಚಾರ್ ( District Deputy Commissioner in Cachar ) ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ಸಮೀಕ್ಷೆ ಮಾಡುತ್ತಿರುವ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಅವರ ಚಿತ್ರಗಳನ್ನು ನೀವು ಬಹುಶಃ ನೋಡಿದ್ದೀರಿ. ಚಿತ್ರಗಳಲ್ಲಿ ಅಧಿಕಾರಿ ಜಲ್ಲಿ ಸೀರೆ ಉಟ್ಟುಕೊಂಡು ಕೆಸರುಮಯ ಭೂಮಿಯಲ್ಲಿ ಬರಿಗಾಲಿನಲ್ಲಿ ನಡೆದು ಹಾನಿಯನ್ನು ಪರಿಶೀಲನೆ ಮಾಡುತ್ತಿದ್ದರು.
ಕೀರ್ತಿ ಜಲ್ಲಿ ಹೈದರಾಬಾದ್ನ (Hyderabad) ಬರೆಂಗಲ್ ಜಿಲ್ಲೆಯಲ್ಲಿರು. 1989ರಲ್ಲಿ ಜನಿಸಿದ ಕೀರ್ತಿ ಜಲ್ಲಿ 2012ರಲ್ಲಿ ಐಎಎಸ್ ಅಧಿಕಾರಿಯಾದರು. ಅಸ್ಸಾಂ-ಮೇಘಾಲಯ ಕೆಡರ್ ಅಧಿಕಾರಿಯಾಗಿರುವ ಕೀರ್ತಿ, ಅವರು ಕ್ಯಾಚಾರ್ ಜಿಲ್ಲಾಧಿಕಾರಿ, ಆಗಿ ನೇಮಕಗೊಳ್ಳುವ ಮೊದಲು ಅವರು ಹೈಲ್ಕಂಡಿ ಮತ್ತು ಜೋರ್ಹತ್ ಸೇರಿದಂತೆ ಹಲವಾರು ಅಸ್ಸಾಂ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಅಸ್ಸಾಂ ಬರಾಕ್ ಕಣಿವೆಯ ಹೈಲಕಂಡಿ ಜಿಲ್ಲೆಯಲ್ಲಿ ಮೊದಲ ಮಹಿಳಾ ಜಿಲ್ಲಾ ಡೆಪ್ಯೂಟಿ ಕಮಿಷನರ್ ಆಗಿ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಕೀರ್ತಿ ಜಲ್ಲಿಯ ಪತಿಯ ಹೆಸರು ಆದಿತ್ಯ ಶಶಿಕಾಂತ್ (Aditya Shashikant). ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಇವರ ವಿವಾಹವಾಗಿತ್ತು. ಇವರ ವಿವಾಹದ ಸುದ್ದಿ ಕೂಡ ಸ್ಫೂರ್ತಿ ತುಂಬುವಂಥದ್ದು. ಕೀರ್ತಿ ಹಾಗೂ ಆದಿತ್ಯ 2020ರ ಕೊನೆಯಲ್ಲಿಯೇ ವಿವಾಹವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಸ್ವತಃ ಕೀರ್ತಿ ಅವರೇ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದರು.
ಜಿಲ್ಲೆಯ ಜನರು ಕೋವಿಡ್-19 ಇಂದ ಸಂಕಷ್ಟದಲ್ಲಿರುವ ವೇಳೆ ಮದುವೆ ಎಲ್ಲಾ ಬೇಡ. ಇದೆಲ್ಲ ಮುಗಿದ ಬಳಿಕ ಮದುವೆ ಆಗುವುದಾಗಿ ಹೇಳಿದ್ದರು. ಉದ್ಯಮಿಯಾಗಿದ್ದ ಆದಿತ್ಯ, ಕಳೆದ ಸೆಪ್ಟೆಂಬರ್ ನಲ್ಲಿ ಕ್ಯಾಚಾರ್ ಗೆ ತೆರಳಿ ಕೀರ್ತಿ ಅವರನ್ನು ವಿವಾಹವಾದರು. ಇವರ ವಿವಾಹ ಸಮಾರಂಭ ಕೂಡ ತೀರಾ ಸರಳವಾಗಿ ನೆರವೇರಿತು. ಮದುವೆಯಾದ ಮರುದಿನವೇ ಇವರು ಕಚೇರಿಗೆ ಆಗಮಿಸಿದ್ದರು.
"ನನ್ನ ಮದುವೆಗೆ ರಜೆ ತೆಗೆದುಕೊಳ್ಳುವ ಬಗ್ಗೆ ಯೋಚಿಸಲು ನನಗೆ ಸಾಧ್ಯವಿರಲಿಲ್ಲ. ಮದುವೆ ಯಾರೊಬ್ಬರ ಜೀವನದ ಪ್ರಮುಖ ಘಟನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದರೆ ಸರಾಸರಿ ಧನಾತ್ಮಕ ಪ್ರಕರಣಗಳು ಸುಮಾರು 100 ರಷ್ಟಿರುವ ನನ್ನ ಜಿಲ್ಲೆಯಿಂದ ದೂರ ಹೋಗುವುದನ್ನು ನಾನು ಊಹಿಸಲು ಸಾಧ್ಯವಾಗಲಿಲ್ಲ ಮತ್ತು ನಾನು ಜೀವಗಳನ್ನು ಉಳಿಸಲು ಹೋರಾಡುತ್ತಿದ್ದೇನೆ ಎಂದು ಕೀರ್ತಿ ಹೇಳಿದ್ದರು.
ಅಸ್ಸಾಂನ ನೆರೆ ಪೀಡಿತ ಪ್ರದೇಶಗಳಲ್ಲಿ ಸ್ವತಃ ಡಿಸಿ ಬಂದು ಪರಿಶೀಲನೆ ಮಾಡಿದ್ದನ್ನು ಅಲ್ಲಿನ ಜನರಿಗೆ ನಂಬಲು ಆಗುತ್ತಿಲ್ಲ. 80 ವರ್ಷದ ಮಹಿಳೆಯೊಬ್ಬರು, "ನನ್ನ ಜೀವಿತದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರನ್ನು ಕಣ್ಣಾರೆ ನೋಡಿದ್ದೇನೆ' ಎಂದಿದ್ದಾರೆ. ಸಾಧಾರಣ ಸೀರೆಯುಟ್ಟು, ಕಲ್ಲು, ಕೆಸರು ಮಣ್ಣಿನಲ್ಲಿ ನಡೆದು ಜನರನ್ನು ತಲುಪುವ ಇಂಥ ಜಿಲ್ಲಾಧಿಕಾರಿಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು.