ಗ್ಯಾರೇಜ್ ಕ್ವೀನ್, ಸೀತಮ್ಮಳ ಸೊಸೆ 'ರೌಡಿ ಬೇಬಿ ಸತ್ಯ' ಈಗ ಪೊಲೀಸ್ ಇನ್ಸ್ಪೆಕ್ಟರ್!
ಒಂದು ಏರಿಯಾಗೆ ಒಬ್ನೇ ರೌಡಿ ಹಾಗೂ ಒಬ್ನೇ ಪೊಲೀಸ್ ಇರಬೇಕು, ಅವರೆಡೂ ನಾನೇ ಆಗಿರಬೇಕು ಡೈಲಾಗ್ ಹೇಳುತ್ತಿದ್ದ ಜೀ ಕನ್ನಡ ಸತ್ಯ ಧಾರಾವಾಹಿಯ ಗ್ಯಾರೇಜ್ ಹುಡುಗಿ ಸತ್ಯ ಈಗ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾಳೆ.
ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಡುವುದು ಹಾಗೂ ರೌಡಿಗಳು ಮತ್ತು ದುರುಳರನ್ನು ಸದೆಬಡಿಯುವ ಪೊಲೀಸ್ ಅಧಿಕಾರಿ ಆಗಬೇಕೆಂಬುದು ಸತ್ಯಳ ಬಾಲ್ಯದಿಂದ ಇರುವ ದೊಡ್ಡ ಮಹದಾಸೆಯಾಗಿತ್ತು.
ಆದರೆ, ತಂದೆಯನ್ನು ಕಳೆದುಕೊಂಡು ಅನಿವಾರ್ಯವಾಗಿ ಜೀವನ ನಿರ್ವಹಣೆಗಾಗಿ ಗ್ಯಾರೇಜ್ ಕೆಲಸಕ್ಕಿಳಿದ ಸತ್ಯ, ಪೊಲೀಸ್ ಆಗುವ ಆಸೆಯನ್ನು ಕನಸಾಗಿಯೇ ಉಳಿಸಿಬಿಟ್ಟಿದ್ದಳು. ಇನ್ನು ಕೆಲವು ದಿನಗಳಿಂದ ಪೊಲೀಸ್ ಟ್ರೇನಿಂಗ್ ಪಡೆದ ಸತ್ಯ, ತರಬೇತಿ ಅವಧಿಯಲ್ಲಿ ಆಕೆಯ ಜಾಣ್ಮೆ ಹಾಗೂ ಖದರ್ ಅನ್ನು ಅಲ್ಲಿನ ಅಧಿಕಾರಿಗಳಿಗೂ ತೋರಿಸಿದ್ದಳು.
ಆದರೆ, ಪ್ರೀತಿಸಿದ ಶ್ರೀಮಂತ ಹುಡುಗ ಕಾರ್ತಿಕ್ನನ್ನು ಮದುವೆಯಾದ ನಂತರ ಅವಳ ಅದೃಷ್ಟವೇ ಬದಲಾಗಿತ್ತು. ಮುನಿದ ಅತ್ತೆಯನ್ನು ಒಲಿಸಿಕೊಂಡ ಸತ್ಯ ತನ್ನ ಒಂದೊಂದೇ ಕನಸನ್ನು ನನಸು ಮಾಡಿಕೊಳ್ಳುತ್ತಾ ಸಾಗಿದ್ದಾಳೆ.
ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಸತ್ಯ ಅತ್ತೆ ಮನೆಯಲ್ಲಿದ್ದುಕೊಂಡೇ ಪಿಯುಸಿ ಹಾಗೂ ಪದವಿ ತರಗತಿ ಪರೀಕ್ಷೆ ಕಟ್ಟಿಕೊಂಡು ಪಾಸ್ ಆಗಿದ್ದಾಳೆ. ಅದೂ ಕೂಡ ಪರೀಕ್ಷೆ ಬರೆಯುವ ವೇಳೆ ಕೈಗೆ ಗಾಯವಾದಾಗ ಆಕೆಯ ಅತ್ತೆಯೇ ಪರೀಕ್ಷೆ ಬರೆದಿದ್ದಳು.
ತರಬೇತಿ ಅವಧಿ ಪೂರ್ಣಗೊಂಡು ಒಂದು ಪೊಲೀಸ್ ಠಾಣೆಗೆ ಅಪಾಯಿಂಟ್ ಆಗಿರುವ ಸತ್ಯ ಈಗ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾಳೆ. ಪೊಲೀಸ್ ಇನ್ಸ್ಪೆಕ್ಟರ್ ಸತ್ಯ ಪ್ರೊಬೆಷನರಿ ಅವಧಿಯಲ್ಲಿದ್ದರೂ ಎಲ್ಲ ಜವಾಬ್ದಾರಿ ನಿರ್ವಹಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ.
ಗ್ಯಾರೇಜ್ನಲ್ಲಿ ಕೆಲಸ ಮಾಡುವಾಗ ಬಾಬ್ ಕಟ್ ಹೇರ್ ಸ್ಟೈಲ್, ಪ್ಯಾಂಟ್ ಶರ್ಟ್ ಧರಿಸುತ್ತಿದ್ದ ಸತ್ಯ ಈಗ ಪೊಲೀಸ್ ಸಮವಸ್ತ್ರ ಧರಿಸಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಸತ್ಯ ಮಾಲಾಶ್ರೀ ತರ ಇದ್ದೀರಾ ಸೂಪರ್ ಸತ್ಯ ಹೆಣ್ಣು ಮಕ್ಕಳು ಇದೇ ತರ ಇರಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಫೋರೆನನ್ಸಿಕ್, ನೈಟ್ ಡ್ಯೂಟಿ, ಗಸ್ತು, ಬಂದೋಬಸ್ತ್ ಹಾಗೂ ಮರ್ಡರ್ ಸ್ಪಾಟ್ಗಳಿಗೆ ಹೋಗಬೇಕು. ನೀವು ಯಾವುದಕ್ಕೂ ಹಿಂಜರಿಯದೇ ಮುನ್ನುಗ್ಗಿ ಕೆಲಸ ಮಾಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸತ್ಯ ನೀನು ಪೊಲೀಸ್ ಟ್ರೈನಿಂಗ್ನಲ್ಲಿ ಎಲ್ಲವನ್ನೂ ಥಿಯರಿ ಕೇಳಿರುತ್ತೀಯ. ಈಗ ಎಲ್ಲವನ್ನೂ ಪ್ರಾಯೋಗಿಕವಾಗಿ ಎಲ್ಲ ಕರ್ತವ್ಯ ನಿರ್ವಹಿಸಿ ಕಲಿಯಬೇಕು. ಪೊಲೀಸರು ಸತ್ಯ, ನ್ಯಾಯ ಕರ್ತವ್ಯದ ಪರವಾಗಿ ಹೋರಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಕರ್ನಾಟಕ ಪೊಲೀಸ್ ಎಂಬ ಹೆಸರಿಗೆ ನೀವು ಹೆಮ್ಮೆಯ ಗರಿಯಾಗಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ, ಸ್ಟೇಷನ್ ಇನ್ಚಾರ್ಜ್ ಪೊಲೀಸ್ ಅಧಿಕಾರಿ ಸೂರ್ಯ ಪ್ರಕಾಶ್ ಹೆಣ್ಣು ಮಕ್ಕಳಿಗೆ ನೈಟ್ ಡ್ಯೂಟಿ, ಮರ್ಡರ್ ಸ್ಪಾಟ್ ವಿಸಿಟ್ ಸೇರಿದಂತೆ ಎಲ್ಲ ಡ್ಯೂಟಿ ಬೇಡವೆಂದು ಹೇಳುತ್ತಾರೆ. ಆದರೆ, ಮುಂದೇನಾಗುತ್ತೋ ಅದನ್ನು ನಾವು ಕಾದು ನೋಡಬೇಕಿದೆ..