ನಾವು ನಮ್ಮವರು ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅಮೂಲ್ಯ, ಶರಣ್… ಜೊತೆಯಾದ ತಾರಾ
ಝೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ನಾವು ನಮ್ಮವರು ಆರಂಭವಾಗಿದ್ದು ಈಗಾಗಲೇ ಪ್ರೊಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಅತ್ಯುತ್ತಮ ಧಾರಾವಾಹಿಗಳು, ರಿಯಾಲಿಟಿ ಶೋಗಳ ಮೂಲಕ ಮನರಂಜಿಸುತ್ತಾ ಬಂದಿರುವ ಝೀ ಕನ್ನಡದಲ್ಲಿ (Zee Kannada) ಈಗಷ್ಟೇ ಭರ್ಜರಿ ಬ್ಯಾಚುಲರ್ ಕೊನೆಯಾಗಿದೆ, ಅಷ್ಟರಲ್ಲೇ ಹೊಸ ರಿಯಾಲಿಟಿ ಶೋ ಕುರಿತು ಪ್ರೊಮೋ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಹೌದು, ಝೀ ಕನ್ನಡ ವಾಹಿನಿಯು ಈಗ ‘ನಾವು ನಮ್ಮವರು’ ರಿಯಾಲಿಟಿ (reality show) ಶೋ ಮೂಲಕ ಜನರಿಗೆ ಮನರಂಜನೆ ನೀಡಲು ಮುಂದಾಗಿದೆ. ಸಂಬಂಧಗಳು ನಿಜವಾಗಿರೋ ಕಥೆಗಳನ್ನು ಮರೆಯಲಾಗದು! ಪ್ರೀತಿ, ನಗು, ಒಗ್ಗಟ್ಟು ಹಾಗೂ ಬಾಂಧವ್ಯದ ಕ್ಷಣಗಳನ್ನು ಹೊತ್ತು ಬರ್ತಿದೆ...ನಾವು ನಮ್ಮವರು ಎನ್ನುತ್ತಾ ಪ್ರೊಮೋ ರಿಲೀಸ್ ಮಾಡಲಾಗಿದೆ.
ಈ ಹೊಸ ರಿಯಾಲಿಟಿ ಶೋನಲ್ಲಿ ನಟಿಯರಾದ ತಾರಾ (Tara Anuradha), ಅಮೂಲ್ಯ ಹಾಗೂ ನಟ ಶರಣ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಪ್ರೊಮೋ ಸಖತ್ ವಿಭಿನ್ನವಾಗಿದ್ದು, ಬಿಡುಗಡೆಯಾದ ಪ್ರೊಮೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ.
ಪ್ರೊಮೋದಲ್ಲಿ ಹುಬ್ಬಳ್ಳಿ ಸುರಂಗದ ಮೂಲಕ ಸಾಗುವ ರೈಲಿನಲ್ಲಿ ಶರಣ್ ಹಾಗೂ ತಾರಾ ತಿಂಡಿಯನ್ನು ಹಂಚಿಕೊಳ್ಳುತ್ತಾ, ಹಳೆಯ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ. ಮನೆಗೆ ಬಂದವರಿಗೆ ಒಂದು ತುತ್ತಾದರೂ ತಿನಿಸಬೇಕು ಎಂದು ನಮ್ಮ ಅತ್ತೆ ಯಾವಾಗಲೂ ಹೇಳುವವರು ಎನ್ನುವ ತಾರಾ, ಊರಲ್ಲಿ ದಾರಿಯಲ್ಲಿ ಸಿಕ್ಕಿದವರನ್ನೆಲ್ಲಾ ಟ್ರಾಕ್ಟರ್ ಗೆ ಹತ್ತಿಸಿ, ಹಳೆಯ ಚಿತ್ರ ಗೀತೆ ಕೇಳುತ್ತಾ, ಅಮ್ಮ ಕೊಟ್ಟ ಬುತ್ತಿ ತಿನ್ನುವ ನೆನೆಪೇ ಚೆಂದ ಎನ್ನುತ್ತಾರೆ ಶರಣ್ (Sharan).
ಮತ್ತೊಂದು ಸಲ ತಾರಾ ಅಜ್ಜಿಯನ್ನು ನೆನಪಿಸುತ್ತಾ ನಮ್ಮ ಅಜ್ಜಿ ತಲೆಗೆ ತುಬಾ ಹೆಣ್ಣೆ ಹಚ್ಚಿ, ಹಂಡೆ ತುಂಬಾ ಬಿಸಿ ನೀರು ಮಾಡಿ ಸ್ನಾನ ಮಾಡಿಸುತ್ತಿದ್ದರು ಎಂದರೆ, ಶರಣ ನಾವೆಲ್ಲಾ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಜೊತೆಯಾಗಿ ಬಾವಿಗೆ ಬಿದ್ವಿ ಅಂದ್ರೆ ಅದೇ ನಮಗೆ ಸ್ನಾನ ಎಂದು ನಗುತ್ತಾರೆ. ಆವಾಗ ಎಂಟ್ರಿ ಕೊಡುವ ಅಮೂಲ್ಯ (Amulya) ಬಾಲ್ಯದಲ್ಲಿ ಮಾವನ ಮಕ್ಕಳ ಜೊತೆ ಸೇರಿ ಹೂವು ಕಟ್ಟಿದ ನೆನಪನ್ನು ಹೇಳುತ್ತಾರೆ.
ಈವಾಗ ಶರಣ್ ನಾವು ನಮ್ಮವರ ಜೊತೆ ಊರಲ್ಲಿ ಇದ್ದು ಬಿಟ್ರೆ ಎಷ್ಟು ಚೆಂದ ಅಲ್ವಾ? ಎನ್ನುತ್ತಾರೆ. ಕೊನೆಗೆ ಎಲ್ಲರೂ ಊರು ತಲುಪುತ್ತಾರೆ. ಸ್ಟೆಷನ್ ನಲ್ಲಿ ಅವರನ್ನು ಸ್ವಾಗತಿಸಲು ಅಜ್ಜ ಅಜ್ಜಿಯಿಂದ ಹಿಡಿದು ಪುಟ್ಟ ಮಕ್ಕಳವರೆಗೂ ನೆರೆದಿರುತ್ತಾರೆ. ಆ ಮೂಲಕ ಇದು ಸಂಬಂಧಗಳ ಸಂಭ್ರಮ ಸಾರುವ ಹಬ್ಬ ಎಂದು ತೋರಿಸಿಕೊಟ್ಟಿದ್ದಾರೆ.
ನಾವು ನಮ್ಮವರು (Navu Nammavaru) ರಿಯಾಲಿಟಿ ಶೋ ಇದೇ ಆಗಸ್ಟ್ 2ರಿಂದ ಆರಂಭವಾಗಲಿದ್ದು, ಯಾವ ರೀತಿ ಶೋ ಮೂಡಿ ಬರಲಿದೆ. ಈ ರಿಯಾಲಿಟಿ ಶೋಗೆ ಯಾರು ನಿರೂಪಕರಾಗಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.