ಕೊರೋನಾ ಎಫೆಕ್ಟ್; ಸೆಕ್ಯೂರಿಟಿ ಗಾರ್ಡ್ ಆದ ನಟ ಶ್ರೀನಾಥ್ ವಸಿಷ್ಠ
ಬೆಂಗಳೂರು(ಜು. 13) ಲಾಕ್ ಡೌನ್ ತಂದಿಟ್ಟ ಸಮಸ್ಯೆಗಳು ಒಂದೇ ಎರಡೇ. ಕಿರುತೆರೆಯ ಹಿರಿಯ ಕಲಾವಿದರೊಬ್ಬರು ಸೆಕ್ಯೂರಿಟಿ ಗಾರ್ಡ್ ಆಗಿ ಬದಲಾಗಿದ್ದಾರೆ. ಅವರೇ ಸಂತಸದಿಂದ ವಿಚಾರ ಹಂಚಿಕೊಂಡಿದ್ದಾರೆ.
ಕಿರುತೆರೆ ಕಲಾವಿದ ಶ್ರೀನಾಥ್ ವಸಿಷ್ಠ ವಾಸ ಮಾಡುತ್ತಿರುವ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಸಿಬ್ಬಂದಿಗೂ ಸೋಂಕು ತಗುಲಿದೆ. ಅವರ ಜೊತೆಗೆ ಇನ್ನೂ ಮೂರು ಮಂದಿ ಕ್ವಾರಂಟೈನ್ ಆಗಿದ್ದಾರೆ. ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಕೆಲಸಕ್ಕೆ ಅದರ ನಿವಾಸಿಗಳೇ ಮುಂದಾಗಿದ್ದು ವಸಿಷ್ಠ ತಮ್ಮ ಪಾಳಿಯ ಕೆಲಸ ಮುಗಿಸಿದ್ದಾರೆ.
'ನಾವಿರುವ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ಗೆ ಕೊರೊನಾ ದೃಢವಾಗಿದೆ. ಅವರ ಜೊತೆಗಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಹಾಗಾಗಿ, ಅಪಾರ್ಟ್ಮೆಂಟ್ನ ಕಮಿಟಿಯವರು 10 ದಿನಗಳ ಕಾಲ ಸೆಕ್ಯುರಿಟಿ ಕೆಲಸವನ್ನು ನಿವಾಸಿಗಳೇ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಕ್ಕೆ ನಾವೆಲ್ಲ ಒಪ್ಪಿದೆವು ಎಂದು ಬರೆದುಕೊಂಡಿದ್ದಾರೆ.
ಮಧ್ಯಾಹ್ನ 2ರಿಂದ 10 ಗಂಟೆವರೆಗೆ ನನ್ನ ಶಿಫ್ಟ್ನ ಕೆಲಸವನ್ನು ಗೇಟ್ನ ಬಳಿ ಕುಳಿತುಕೊಂಡು ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ಶಿಫ್ಟ್ ಅನ್ನು ನನ್ನ ಮಗ ಋತ್ವಿಕ್ ವಸಿಷ್ಠ ಮಾಡಿದ್ದಾನೆ. ಸರ್ವೇಜನ ಸುಖಿನೋ ಭವಂತು ಎಂದು ಶ್ರೀನಾಥ್ ಕೇಳಿಕೊಂಡಿದ್ದಾರೆ.
ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಶ್ರೀನಾಥ್ ಅನೇಕ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಧಾರಾವಾಹಿಗಳ ಮೂಲಕ ಕನ್ನಡ ಜನರ ಮನಗೆದ್ದ ನಟ ಹಂಚಿಕೊಂಡ ಸಂಗತಿ ನಿಮ್ಮ ಮುಂದೆ ಇಟ್ಟಿದ್ದೇವೆ.