ಭಾರತ-ಪಾಕ್ ಯುದ್ಧ ಸನ್ನಿವೇಶ: ರಜೆ ಮೊಟಕುಗೊಳಿಸಿ ದಿಢೀರ್ ಕರ್ತವ್ಯಕ್ಕೆ ವಾಪಸಾದ ಹಾಸನ 5 ಯೋಧರು
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ಭವಿಸಿರುವ ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಐವರು ಯೋಧರು ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ. ಹೊಳೆನರಸೀಪುರ ಮತ್ತು ಅರಸೀಕೆರೆ ತಾಲ್ಲೂಕಿನ ಈ ಯೋಧರ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

ಹಾಸನ (ಮೇ 11): ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ಭವಿಸಿರುವ ಯುದ್ಧ ಸನ್ನಿವೇಶದ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಿಂದ ರಜೆ ಮೇಲೆ ಊರಿಗೆ ಬಂದಿದ್ದ ಐವರು ಯೋಧರು ತ್ವರಿತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ದೇಶದ ಸೇವೆ ಮೇಲು ಎಂಬ ಧ್ಯೇಯವನ್ನು ಮುಡಿಗೇರಿಸಿಕೊಂಡ ಈ ಯೋಧರ ಕ್ರಿಯೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಉಣ್ಣೆನಹಳ್ಳಿ ಗ್ರಾಮದ ಸಹೋದರರಾದ ಸುದರ್ಶನ್ ಮತ್ತು ಮಧುಕುಮಾರ್ ರಜೆಗಾಗಿ ಗ್ರಾಮಕ್ಕೆ ಬಂದು ಕೆಲವೇ ದಿನ ಕಳೆದಿದ್ದರು. ಆದರೂ ಕೂಡಲೇ ಬಂದ ಸೇನೆಯ ಕರೆಯ ಮೇರೆಗೆ ತಮ್ಮ ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಹೊರಟಿದ್ದಾರೆ. ಸುದರ್ಶನ್ ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಧುಕುಮಾರ್ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅದೇ ರೀತಿ ಅರಸೀಕೆರೆ ತಾಲ್ಲೂಕಿನ ಹರಪನಹಳ್ಳಿ, ಬಸವನಪುರ ಮತ್ತು ಹರಿಹರಪುರ ಗ್ರಾಮಗಳ ಯೋಧರಾದ ಸಂಜೀವ್ ನಾಯ್ಕ್, ದಿನೇಶ್ ನಾಯ್ಕ್ ಮತ್ತು ಹರೀಶ್ ನಾಯ್ಕ್ ಕೂಡ ತಮ್ಮ ರಜೆಯನ್ನು ಮುಕ್ತಾಯಗೊಳಿಸಿ ಸೇನೆಯ ಕರ್ತವ್ಯಕ್ಕೆ ಮರಳಿದ್ದಾರೆ. ದೇಶಕ್ಕೆ ಬದ್ಧರಾಗಿರುವ ಈ ಯೋಧರು ತಮ್ಮ ಕುಟುಂಬ ಮತ್ತು ಗ್ರಾಮವನ್ನು ತಾತ್ಕಾಲಿಕವಾಗಿ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇನ್ನು ರೈಲ್ವೆ ನಿಲ್ದಾಣದಲ್ಲಿ ಈ ಮೂವರು ಯೋಧರನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಇವರನ್ನು ಸನ್ಮಾನಿಸಿ ಶುಭಾಶಯ ಕೋರಿದರು. ದೇಶಕ್ಕಾಗಿ ಸದುದ್ದೇಶದಿಂದ ರಜೆಯನ್ನು ತ್ಯಜಿಸಿ ಕರ್ತವ್ಯಕ್ಕೆ ಮರಳಿರುವ ಈ ಯೋಧರು ನಮ್ಮೆಲ್ಲರ ಹೆಮ್ಮೆ' ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

