ಬೆಂಗಳೂರಿನಲ್ಲಿ ಸಂಚಾರಯುಕ್ತ ಯೋಜನೆ ಜಾರಿ; ರಾಜಕಾಲುವೆ ಬಫರ್ ವಲಯದಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ!
ಬೆಂಗಳೂರಿನಲ್ಲಿ ಸಂಚಾರಯುಕ್ತ ಯೋಜನೆ ಜಾರಿ ಮೂಲಕ ರಾಜಕಾಲುವೆ ಬಫರ್ ವಲಯದಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆರ್.ಆರ್.ನಗರ ವಲಯದ ಹೊಸಕೆರೆಹಳ್ಳಿ ಬಳಿಯ ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ಬೆಂಗಳೂರು (ಜು.30): ರಾಜರಾಜೇಶ್ವರಿ ನಗರ ವಲಯ ಹೊಸಕೆರೆಹಳ್ಳಿ ಕೋಡಿ ರಸ್ತೆಯ ಬಳಿ ಬರುವ ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕೆ ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಬಫರ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಸೂಚಿಸಿದರು. ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ, ಭೂಸ್ವಾಧೀನದ ಅವಶ್ಯಕತೆಯಿದ್ದರೆ ಅಂತಹ ಜಾಗಕ್ಕೆ ಟಿಡಿಆರ್ ನೀಡಿ ಅದನ್ನು ವಶಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಹೊಸಕೆರೆ ಹಳ್ಳಿ ಕೋಡಿ ರಸ್ತೆ ಬಳಿಯಿರುವ ಸುತ್ತಮುತ್ತಲಿನ ಕ್ರಾಸ್ ರಸ್ತೆಗಳನ್ನು ಪರಿಶೀಲಿಸಿ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಿದರು.
300 ಕಿ.ಮೀ ಸಂಚಾರಯುಕ್ತ ರಸ್ತೆ ನಿರ್ಮಾಣ:
ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡುವ ದೃಷ್ಟಿಯಿಂದ ರಾಜಕಾಲುವೆಗಳ ಬಫರ್ ವಲಯದಲ್ಲಿ ‘ಸಂಚಾರಯುಕ್ತ ಯೋಜನೆ’ ಅಡಿ 300 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.
ಈ ಪೈಕಿ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ 70 ಕಿ.ಮೀ ಉದ್ದದ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ ಎಂದು ಎಂದು ಬಿಸ್ಮೈಲ್ ನ ತಾಂತ್ರಿಕ ನಿರ್ದೇಶಕರು ಮಾಹಿತಿ ನೀಡಿದರು.
ಹೊಸಕೆರೆಹಳ್ಳಿ ಮೇಲ್ಸೇತುವೆ ಪರಿಶೀಲನೆ:
ಹೊರ ವರ್ತುಲ ರಸ್ತೆಯ ಪಿ.ಇ.ಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್ ನಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಯು ವೇಗವಾಗಿ ನಡೆಯುತ್ತಿದ್ದು, ಅಕ್ಟೋಬರ್ 2025ರಲ್ಲಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು.
ಹೊಸಕೆರೆಹಳ್ಳಿ ಜಂಕ್ಷನ್ ನಲ್ಲಿ 500 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ. 85 ರಷ್ಟು ಪೂರ್ಣಗೊಂಡಿದ್ದು, ನಾಯಂಡಹಳ್ಳಿ ಜಂಕ್ಷನ್ ಕಡೆಯ ಡೌನ್ ರ್ಯಾಂಪ್ ಕಾಮಗಾರಿ ಮಾತ್ರ ಬಾಕಿಯಿದೆ, ಈ ಸಂಬಂಧ ಬಾಕಿಯಿರುವ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಮಂಡಳಿಯಿಂದ ದುರಸ್ತಿ ಕಾರ್ಯ ಕೈಗೊಳ್ಳಿ:
ಹೊಸಕೆರೆ ಹಳ್ಳಿಯ ಶ್ರೀನಿವಾಸ ರಸ್ತೆಯಲ್ಲಿ ಜಲಮಂಡಳಿಯು ಸಂಪೂರ್ಣ ರಸ್ತೆಯನ್ನು ಅಗೆದು ಕಾಮಗಾರಿ ನಡೆಸಿದ್ದು, ಕಾಮಗಾರಿ ಪೂರ್ಣಗೊಂಡಿದ್ದರೂ ಕೂಡಾ ಇನ್ನೂ ದುರಸ್ತಿ ಕಾರ್ಯ ನಡೆಸಿರುವುದಿಲ್ಲ. ಈ ಸಂಬಂಧ ಜಲಮಂಡಳಿ ಅಧಿಕಾರಿಗಳಿಗೆ ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳಬೇಕು.
ಈ ವೇಳೆ ಬಿ.ಎಂ.ಆರ್.ಡಿ.ಎ ಆಯುಕ್ತರಾದ ರಾಜೇಂದ್ರ ಚೋಳನ್, ವಿಶೇಷ ಆಯುಕ್ತರಾದ ಕರೀಗೌಡ, ವಲಯ ಆಯುಕ್ತರಾದ ಸತೀಶ್, ಬಿಸ್ಮೈಲ್ ನ ತಾಂತ್ರಿಕ ನಿರ್ದೇಶಕರಾದ ಬಿ.ಎಸ್ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ರಾಜೇಶ್, ಸ್ವಯಂಪ್ರಭಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

