- Home
- Entertainment
- Sandalwood
- ಬರಹಗಾರರು ನಿರ್ದೇಶನಕ್ಕೆ ಬರಬೇಕು, ಆಗಲೇ ಸ್ಟ್ರಾಂಗ್ ಕಂಟೆಂಟ್ ಬರಲು ಸಾಧ್ಯ: ಗೋಲ್ಡನ್ ಸ್ಟಾರ್ ಗಣೇಶ್
ಬರಹಗಾರರು ನಿರ್ದೇಶನಕ್ಕೆ ಬರಬೇಕು, ಆಗಲೇ ಸ್ಟ್ರಾಂಗ್ ಕಂಟೆಂಟ್ ಬರಲು ಸಾಧ್ಯ: ಗೋಲ್ಡನ್ ಸ್ಟಾರ್ ಗಣೇಶ್
‘ಲವ್ ಇನ್ ಮಂಡ್ಯ’ ಖ್ಯಾತಿಯ ಅರಸು ಅಂತಾರೆ ನಿರ್ದೇಶನದ, ಹೆಸರಿಡದ ಸಿನಿಮಾಕ್ಕೆ ಗಣೇಶ್ ನಾಯಕ. ಈ ವರ್ಷವೇ ಬಿಡುಗಡೆ ಎಂದು ಮುಹೂರ್ತ ಸಮಾರಂಭದಲ್ಲಿ ನಟ ಹೇಳಿಕೆ. ಸಿನಿಮಾ ಟೈಟಲ್ ಶೀಘ್ರದಲ್ಲೇ ಬಿಡುಗಡೆ ಮಾಡ್ತೀವಿ ಎಂದ ಅಂತಾರೆ.

‘ಹಾಸ್ಯ ನಟ ರವಿಶಂಕರ ಗೌಡ ನನಗೆ ಬಹಳ ಕಾಲದಿಂದ ಆತ್ಮೀಯ. ನನಗೆ ಜನಪ್ರಿಯತೆ ತಂದುಕೊಟ್ಟ ಕಾಮಿಡಿ ಟೈಮ್ ನಿರೂಪಣೆಗೆ ಮೊದಲು ಕರೆ ಹೋಗಿದ್ದು ರವಿಶಂಕರ್ಗೆ. ಆದರೆ ಆತ ಸಿಲ್ಲಿಲಲ್ಲಿ ಸೀರಿಯಲ್ನಲ್ಲಿ ಬ್ಯುಸಿ ಇದ್ದ ಕಾರಣ ನನ್ನ ನಂಬರ್ ಕೊಟ್ಟಿದ್ದಾನೆ. ಹೀಗೆ ನನಗೆ ಮನರಂಜನಾ ಮಾಧ್ಯಮಕ್ಕೆ ಬರಲು ಅವಕಾಶ ಸಿಕ್ಕಿತು’ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
ಅರಸು ಅಂತಾರೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಗಣೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಗಣೇಶ್, ರವಿಶಂಕರ್ ಮೂಲಕ ನನಗೆ ಬಂದ ಈ ಆಫರ್ ಬಗ್ಗೆ ಹಿಂದೆಲ್ಲೂ ಹೇಳಿಲ್ಲ. ಆತ ಹಾಗೂ ನನ್ನ ನಡುವಿನ ಸ್ನೇಹ ಇಂದೂ ಹಾಗೇ ಇದೆ.
ಆದರೆ ಆತನ ನಟನೆಯ ಸಿನಿಮಾ ಸಂಖ್ಯೆ ಸಾವಿರದ ಸಮೀಪ ಬಂದಿವೆ. ನಾನಿನ್ನೂ ನಲವತ್ತೈದರ ಆಸುಪಾಸಿನಲ್ಲಿದ್ದೇನೆ ಎಂದರು. ಉತ್ತಮ ಬರಹಗಾರ ನಿರ್ದೇಶಕನಾಗಿ ಸಿಗಲು ಕಲಾವಿದರಿಗೆ ಯೋಗ ಇರಬೇಕು. ಅರಸು ಅಂತಾರೆ ಅದ್ಭುತ ಬರಹಗಾರ. ಅವರು 2019ರಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ಮೆಸೇಜ್ ಮಾಡಿದ್ದರು.
ಈಗ ಅವರೊಂದಿಗೆ ಸಿನಿಮಾ ಮಾಡಲು ಕಾಲ ಕೂಡಿಬಂದಿದೆ. ಹೆಚ್ಚು ಹೆಚ್ಚು ಬರಹಗಾರರು ನಿರ್ದೇಶನ ಕ್ಷೇತ್ರಕ್ಕೆ ಬರಬೇಕು. ಆಗಲೇ ಸ್ಟ್ರಾಂಗ್ ಕಂಟೆಂಟ್ ಬರಲು ಸಾಧ್ಯ, ಆ ಮೂಲಕ ಈ ಕಾಲದ ಪ್ರೇಕ್ಷಕರನ್ನು ಥೇಟರಿಗೆ ಕರೆತರಲು ಸಾಧ್ಯ ಎಂದು ಗಣೇಶ್ ಹೇಳಿದರು.
‘ಹನುಮಾನ್’ ಖ್ಯಾತಿಯ ನಟಿ ಅಮೃತಾ ಅಯ್ಯರ್, ಗಣೇಶ್ ಅವರಂಥಾ ಸ್ಟಾರ್ ನಟನೊಂದಿಗೆ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಖುಷಿ ಇದೆ. ಮನಸ್ಸಿಗೆ ಮುದ ನೀಡುವಂಥಾ ಈ ಸಿನಿಮಾದ ಕಥೆ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ ಎಂದರು.
ನಿರ್ದೇಶಕ ಅರಸು ಅಂತಾರೆ, ‘ಸಿನಿಮಾದ ಟೈಟಲ್ ಅನ್ನು ಶೀಘ್ರ ಟೀಸರ್ ಮೂಲಕ ರಿವೀಲ್ ಮಾಡಲಾಗುವುದು ಎಂದರು. ರವಿ ಭದ್ರಾವತಿ ನಿರ್ಮಾಪಕರು. ನಿರ್ಮಾಪಕ ಉದಯ್ ಮೆಹ್ತಾ, ಕಲಾವಿದರಾದ ರಂಗಾಯಣ ರಘು, ರವಿಶಂಕರ ಗೌಡ ಸುದ್ದಿಗೋಷ್ಠಿಯಲ್ಲಿದ್ದರು.