ಬರ್ತಡೇ ಸಂಭ್ರಮದಲ್ಲಿ ರೆಟ್ರೋ ಸ್ಟಾರ್ ಹೇಳಿದ 10 ಸಂಗತಿಗಳಿವು
ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿಅವರಿಗೆ ಹುಟ್ಟುಹಬ್ಬದ ಸಂಭ್ರಮ (ಜು 7). ಅವರ ಗೆಳೆಯರು ಈ ಹುಟ್ಟು ಹಬ್ಬದ ಸಂಭ್ರಮವನ್ನು ಬೆಂಗಳೂರಿನಲ್ಲಿ ಸರಳವಾಗಿ ಆಚರಣೆ ಮಾಡುತ್ತಿದ್ದರೆ, ರಿಷಬ್ ಶೆಟ್ಟಿಮಾತ್ರ ತಮ್ಮ ಹುಟ್ಟೂರಿನಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದಾರೆ. ‘ನಾನು ನನ್ನ ಹುಟ್ಟುಹಬ್ಬವನ್ನು ಎಂದೂ ಆಚರಣೆ ಮಾಡಿಕೊಂಡಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಾನು ಬೇರೆಯವರ ಜನ್ಮದಿನಾಚರಣೆಗಳನ್ನು ಮುಂದೆ ನಿಂತು ಸೆಲೆಬ್ರೇಟ್ ಮಾಡುವುದು ಮಾತ್ರ ನನಗೆ ಗೊತ್ತು’ ಇದು ರಿಷಬ್ ಶೆಟ್ಟಿಅವರ ಮಾತು. ಅಂದಹಾಗೆ ಅವರು ಈ ಸಂಭ್ರಮದಲ್ಲಿ ಹೇಳಿಕೊಂಡಿದ್ದೇನು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.
ನನ್ನ ನಿರ್ಮಾಣದ ಸಂಸ್ಥೆಯಲ್ಲಿ ಒಂದು ಹೊಸ ಸಿನಿಮಾ ಘೋಷಣೆ ಮಾಡಿದ್ದೇನೆ. ಇದನ್ನು ನಾನು ನಿರ್ದೇಶನ ಮಾಡಲ್ಲ. ನನ್ನ ಜತೆ ಕೆಲಸ ಮಾಡಿದ ಹುಡುಗನೊಬ್ಬ ನಿರ್ದೇಶನ ಮಾಡುತ್ತಾನೆ. ನಾನು ನಿರ್ಮಾಪಕ ಮಾತ್ರ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್ ನಂ.5 ಹೆಸರಿನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿರುವೆ
ನನ್ನ ನಟನೆಯ ಚಿತ್ರಗಳ ಪೈಕಿ ರಾಜ್ ಬಿ ಶೆಟ್ಟಿಕಾಂಬಿನೇಷನ್ನಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಕ್ಷನ್ ಕೆಲಸ ಕೂಡ ಮುಕ್ತಾಯವಾಗಿದೆ. ಎಲ್ಲವೂ ಸರಿಯಾಗಿದ್ದರೆ ಇದೇ ಜೂನ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾ ಸಂಕಷ್ಟಎದುರಾಯಿತು.
ಕೊರೋನಾ ತೊಲಗಿದ ಕೂಡಲೇ ನನ್ನ ನಟನೆಯ ಚಿತ್ರಗಳಲ್ಲಿ ಮೊದಲು ಶೂಟಿಂಗ್ಗೆ ಹೊರಡುವುದು ‘ಹರಿಕಥೆ ಅಲ್ಲಾ ಗಿರಿಕಥೆ’. ಇದೊಂದು ಕಾಮಿಡಿ ಡ್ರಾಮಾ ಕತೆ. ತುಂಬಾ ಚೆನ್ನಾಗಿದೆ ಕತೆ.
ಬೆಲ್ಬಾಟಮ್ 2 ಚಿತ್ರಕ್ಕೆ ಕತೆ, ಚಿತ್ರಕಥೆ ಪೂರ್ತಿ ಆಗಿದೆ. ಸಂಭಾಷಣೆ ಬರವಣಿಗೆ ಕೂಡ ಮುಕ್ತಾಯವಾಗಿದೆ. ಜಯತೀರ್ಥ, ಸಂತೋಷ್ ಹಾಗೂ ಟಿ ಕೆ ದಯಾನಂದ ತಂಡ ಇಲ್ಲಿ ಕೆಲಸ ಮಾಡುತ್ತಿದೆ. ಹಿಂದಿನ ಭಾಗದ ಕತೆ ಮುಂದುವರಿಯುತ್ತ ಎನ್ನುವುದಕ್ಕಿಂತ ಹೊಸ ಹೊಸ ವಿಷಯಗಳನ್ನು ಹೊತ್ತು ಬರಲಿರುವ ಸಿನಿಮಾ ಇದು.
ರುದ್ರಪ್ರಯಾಗ ನನ್ನ ನಿರ್ದೇಶನದ ಸಿನಿಮಾ. ಅನಂತ್ನಾಗ್ ಅವರದ್ದೇ ಪ್ರಮುಖ ಪಾತ್ರ. ಎಲ್ಲವೂ ರೆಡಿ ಇದ್ದರೂ ಶೂಟಿಂಗ್ಗೆ ಹೋಗದಿರುವುದಕ್ಕೆ ಕಾರಣ ಮತ್ತೆ ಅದೇ ಕೊರೋನಾ ಸಂಕಷ್ಟ.
ನಾನು ನಿರ್ದೇಶನ ಮಾಡುವ, ನಿರ್ಮಿಸುವ ಮತ್ತು ನಟಿಸುವ ಒಟ್ಟು 6 ಚಿತ್ರಗಳಿವೆ. ಎಲ್ಲದಕ್ಕೂ ಕತೆ, ಚಿತ್ರಕಥೆ, ಸಂಭಾಷಣೆ ಅಂತಿಮವಾಗಿದೆ. ಹೀಗಾಗಿ ಅಂದುಕೊಂಡಂತೆ ‘ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರೀಕರಣ ಮುಗಿದ ಕೂಡಲೇ ನನ್ನ ನಿರ್ಮಾಣದ ಸಿನಿಮಾ ಶೂಟಿಂಗ್ಗೆ ಹೋಗಲಿದೆ. ಇದರ ನಂತರ ‘ಬೆಲ್ಬಾಟಮ್ 2’ ಸೆಟ್ಗೆ ಹೋಗಲಿದೆ.
ವಿನು ಬಳಂಜ ಅವರ ನಿರ್ದೇಶನದಲ್ಲಿ ಒಪ್ಪಿಕೊಂಡಿರುವ ‘ನಾಥೂರಾಮ್’ ಬಿಗ್ ಬಜೆಟ್ ಸಿನಿಮಾ. ಚಿತ್ರಕಥೆ ಮಾಡುವುದಕ್ಕೆ ತುಂಬಾ ಸಮಯ ಬೇಕು. ಅದರ ಬರವಣಿಗೆ ಕೆಲಸ ಮುಗಿದ ಮೇಲೆಯೇ ಅದರ ಶೂಟಿಂಗ್ ಮಾತು.
ಜುಲೈ ತಿಂಗಳಲ್ಲಿ ಅನುಮತಿ ಸಿಕ್ಕ ಕೂಡಲೇ ಶೂಟಿಂಗ್ಗೆ ಹೋಗುವ ಪ್ಲಾನ್ ಇತ್ತು. ಆದರೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಬಹಳ ಬೇಗ ಹರಡುತ್ತಿದೆ. ಹೀಗಾಗಿ ಶೂಟಿಂಗ್ ಯಾವ ರೀತಿ ಮಾಡಬೇಕು, ಎಷ್ಟುಜನ ಇರಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆಯಲ್ಲೇ ಇದ್ದೇವೆ.
ನನ್ನ ಹುಟ್ಟು ಹಬ್ಬದ ಸಂಭ್ರಮದ ಬಗ್ಗೆ ಹೇಳುವುದಾದರೆ ನಟ, ನಿರ್ದೇಶಕ, ನಿರ್ಮಾಪಕ ಆದ ಮೇಲೆ ಹೆಚ್ಚು ಜನ ಹುಟ್ಟು ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಏನೂ ಅಲ್ಲದಿದ್ದಾಗ ನಾವು ಸ್ನೇಹಿತರೇ ಮಾತ್ರ ಸೇರಿ ಕೇಕ್ ಕಟ್ ಮಾಡುತ್ತಿದ್ವಿ. ಇದೇ ನನಗೆ ಕಂಡ ವ್ಯತ್ಯಾಸ.
ಈ ಬಾರಿ ಕೊರೋನಾ ಕಾರಣಕ್ಕೆ ನಾನು ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಹೀಗಾಗಿ ಕೆಲಸದ ಮೇಲೆ ಊರಿಗೆ ಬಂದಿದ್ದೇನೆ. ಪತ್ನಿ ಮತ್ತು ಮಗನ ಜತೆ ಕೂಡ ಇರಲಿಕ್ಕೆ ಆಗಿಲ್ಲ. ಹಾಗೆ ನೋಡಿದರೆ ಹುಟ್ಟು ಹಬ್ಬ, ಹೊಸ ವರ್ಷಗಳನ್ನು ಸೆಲೆಬ್ರೆಟ್ ಮಾಡಿಕೊಳ್ಳುವುದಕ್ಕಿಂತ ಆ ದಿನ ಏನಾದರೂ ಕೆಲಸ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ.