- Home
- Entertainment
- Sandalwood
- ಕಿಚ್ಚನ ಸಿನಿಮಾ ಜೀವನವನ್ನೇ ಬಾಯಿಗೆ ಬರಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ; ಆ ಘಟನೆಯನ್ನ ಬಿಚ್ಚಿಟ್ಟ ಸುದೀಪ್!
ಕಿಚ್ಚನ ಸಿನಿಮಾ ಜೀವನವನ್ನೇ ಬಾಯಿಗೆ ಬರಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ; ಆ ಘಟನೆಯನ್ನ ಬಿಚ್ಚಿಟ್ಟ ಸುದೀಪ್!
ಉಪೇಂದ್ರ ಚಿತ್ರರಂಗಕ್ಕೆ ಬಂದಾಗ 'ನಮಗೆ ಭವಿಷ್ಯವೇ ಇಲ್ಲ' ಎಂದು ಕಿಚ್ಚ ಸುದೀಪ್ ಏಕೆ ಭಯಪಟ್ಟಿದ್ದರು? ಅವರ ಆತಂಕಕ್ಕೆ ಕಾರಣವೇನು? ಸುದೀಪ್ ಅವರ ಆರಂಭಿಕ ದಿನಗಳ ಹೋರಾಟ ಮತ್ತು ಯಶಸ್ಸಿನ ಹಾದಿಯ ಕುರಿತು ತಿಳಿಯಲು ಓದಿ.

ಕನ್ನಡ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ, ಕೇವಲ ಸ್ವಂತ ಪರಿಶ್ರಮ ಮತ್ತು ಅಮೋಘ ನಟನೆಯ ಮೂಲಕ ಇಂದು ಭಾರತೀಯ ಚಿತ್ರರಂಗದ ಅಪ್ರತಿಮ ನಾಯಕನಾಗಿ ಬೆಳೆದು ನಿಂತವರು ಕಿಚ್ಚ ಸುದೀಪ್. ಸ್ಯಾಂಡಲ್ವುಡ್ನಿಂದ ಆರಂಭವಾದ ಇವರ ಪಯಣ ಇಂದು ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ವರೆಗೆ ಪಸರಿಸಿದೆ. ಆದರೆ, ಇಂತಹ ಸುದೀಪ್ ಅವರು ನಟ ಉಪೇಂದ್ರ ಚಿತ್ರರಂಗಕ್ಕೆ ಕಾಲಿಟ್ಟಾಗ ನಮಗೆ ಭವಿಷ್ಯವೇ ಇಲ್ಲವೆಂಬಂತೆ ಭಯ ಪಟ್ಟಿದ್ದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಸಿನಿಮಾ ಕೆರಿಯರ್ ಆರಂಭಿಸಿದಾಗ ಘಟಾನುಘಟಿ ನಾಯಕರ ಸಿನಿಮಾಗಳು 100 ದಿನಗಳನ್ನು ಪೂರೈಸುವುದನ್ನು ನೋಡಿ ನಮಗೆಲ್ಲಾ ಹೊಸಬರಿಗೆ ಅವಕಾಶ ಸಿಗುತ್ತವೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಇದರ ಜೊತೆಗೆ, ಕಲೆಯನ್ನು ನಂಬಿಕೊಂಡಿದ್ದ ಅವರು ಕಲಾ ಸರಸ್ವತಿ ನಮ್ಮನ್ನು ಕೈಬಿಡುವುದಿಲ್ಲ ಎಂಬ ಧೈರ್ಯದಲ್ಲಿದ್ದರು. ಆದರೆ, ಚಿತ್ರರಂಗಕ್ಕೆ ನಟ ಉಪೇಂದ್ರ ಅವರು ಬರುತ್ತಿದ್ದಂತೆಯೇ ತಮಗೆ ಸಿನಿಮಾ ರಂಗದಲ್ಲಿ ಭವಿಷ್ಯವೇ ಇಲ್ಲವೆಂದು ಭಯಪಟ್ಟುಕೊಂಡಿದ್ದರು. ಇದಕ್ಕೆ ಕಾರಣವನ್ನೂ ಸ್ವತಃ ಕಿಚ್ಚ ಸುದೀಪ್ ಅವರೇ ಬಿಚ್ಚಿಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ನಾನು ಕನ್ನಡ ಚಿತ್ರರಂಗಕ್ಕೆ ಬಂದಾಗ 1996 ಅಲ್ಲಿ ಸ್ವಲ್ಪನಾದರೂ ನಮ್ಮ ಸಿನಿಮಾ ಭವಿಷ್ಯದ ಬಗ್ಗೆ ಹೋಪ್ ಇತ್ತು. ಆದರೆ, 1997ರಲ್ಲಿ ಮಾತ್ರ ಎಂಟ್ರಿ ಕೊಟ್ರಪ್ಪಾ ಉಪ್ಪಿ ಸರ್, ಎಂಟೈರ್ ಕರ್ನಾಟಕವನ್ನೇ ಅಲ್ಲಾಡಿಸಿಬಿಟ್ಟರು. ನಮಗೆ ಸಿನಿಮಾದಲ್ಲಿ ಸರ್ವೈವ್ ಆಗ್ತೀವಿ ಎಂಬ ಸ್ವಲ್ಪ ನಂಬಿಕೆಯೂ ಹೋಗಿಬಿಡ್ತು ನಮಗೆ. ನಾವೆಲ್ಲಾ ಮುಂದಕ್ಕೆ ಹೇಗೆ ಬರ್ತೀವಿ ಎಂಬ ಚಿಂತೆಯಾಗಿತ್ತು.
ಕ್ರೇಜ್ ಅಂದರೆ ಈ ತರಹ ಎಂಬಂತೆ ತಿರುಗಿಕೊಂಡಿತ್ತು. ಆ ವ್ಯಕ್ತಿ (ಉಪೇಂದ್ರ) ಮಾಡಿದ್ದನ್ನ ಮಾತ್ರ ಜನ ಒಪ್ಕೋತಿದಾರೆ ಅಂದಾಗ ನಾವು ಎಲ್ಲಿ ಫಿಟ್ ಆಗ್ತೀವಿ ಎಂಬ ಆತಂಕ ಶುರುವಾಗಿತ್ತು. ಉಪೇಂದ್ರ ಸರ್ ತರಹ ಮಾಡೋಕೆ ನಮಗೆ ಆಗೊಲ್ಲ. ಅವರಿಗೆ ಬರವಣಿಗೆ, ನಿರ್ದೇಶನ, ಅವರೊಬ್ಬ ಕಂಪ್ಲೀಟ್ ಪ್ಯಾಕೇಜ್ ಆಗಿದ್ದಾರೆ. ಅದು ನಮ್ಮಿಂದ ಸಾಧ್ಯವಿಲ್ಲ.
ವಿಡಿಯೋಗೆ ಈ ಲಿಂಕ್ ಕ್ಲಿಕ್ ಮಾಡಿ: https://youtube.com/shorts/K2PHobL9sCc?si=0xnQxAU9uHb2ZVD1
ಕಿಚ್ಚ ಸುದೀಪ್ ಅವರು, 1997ರಲ್ಲಿ 'ತಾಯವ್ವ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸುದೀಪ್ ಅವರಿಗೆ ಆರಂಭದ ದಿನಗಳು ಸುಲಭವಾಗಿರಲಿಲ್ಲ. 'ಪ್ರತ್ಯರ್ಥ' ಮತ್ತು 'ಸುನಿಲ್' ಚಿತ್ರಗಳ ನಂತರ 2001ರಲ್ಲಿ ಬಿಡುಗಡೆಯಾದ 'ಹುಚ್ಚ' ಚಿತ್ರ ಸುದೀಪ್ ಅವರ ಬದುಕನ್ನೇ ಬದಲಿಸಿತು. ಈ ಚಿತ್ರದ 'ಕಿಚ್ಚ' ಪಾತ್ರ ಇಂದಿಗೂ ಅವರ ಹೆಸರಿನೊಂದಿಗೆ ಅಂಟಿಕೊಂಡಿದೆ. ನಂತರ 'ನಂದಿ', 'ಸ್ವಾತಿಮುತ್ತು', 'ಮೈ ಆಟೋಗ್ರಾಫ್', 'ಮುಸ್ಸಂಜೆ ಮಾತು', 'ಕೆಂಪೇಗೌಡ'ದಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಸುದೀಪ್ ಕನ್ನಡ ಚಿತ್ರರಂಗದ ಅನಿವಾರ್ಯ ನಟನಾಗಿ ಬೆಳೆದರು.
ಸುದೀಪ್ ಕೇವಲ ನಟನಾಗಿ ಉಳಿಯದೆ ನಿರ್ದೇಶಕ (ಮೈ ಆಟೋಗ್ರಾಫ್, ಶಾಂತಿನಿವಾಸ), ಗಾಯಕ, ಕಥೆಗಾರ ಮತ್ತು ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಇವರು, ಬಹುಭಾಷಾ ತಾರೆಯಾಗಿ ಮಿಂಚಿದ್ದಾರೆ. ರಾಜಮೌಳಿ ನಿರ್ದೇಶನದ 'ಈಗ' (Eega) ಚಿತ್ರ ಸುದೀಪ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿತು. ಅಮಿತಾಭ್ ಬಚ್ಚನ್ ಅವರೊಂದಿಗೆ 'ರನ್', ಸಲ್ಮಾನ್ ಖಾನ್ ಜೊತೆ 'ದಬಾಂಗ್-3' ಚಿತ್ರಗಳಲ್ಲಿ ನಟಿಸಿ ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಇತ್ತೀಚಿನ 'ವಿಕ್ರಾಂತ್ ರೋಣ' ಚಿತ್ರದ ಮೂಲಕ ಸುದೀಪ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದರು.
ಕಳೆದ 11 ಸೀಸನ್ಗಳಿಂದ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಅನ್ನು ಸುದೀಪ್ ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅವರ ನಿರೂಪಣಾ ಶೈಲಿ, ಶನಿವಾರ ಮತ್ತು ಭಾನುವಾರದ 'ಕಿಚ್ಚನ ಪಂಚಾಯಿತಿ' ಕಾರ್ಯಕ್ರಮದ ಮೂಲಕ ಅವರು ಕನ್ನಡಿಗರ ಮನೆಮಾತಾಗಿದ್ದಾರೆ. ಅವರ ಗಾಂಭೀರ್ಯದ ಮಾತುಗಳು ಮತ್ತು ತಪ್ಪು ಮಾಡಿದ ಸ್ಪರ್ಧಿಗಳನ್ನು ತಿದ್ದುವ ರೀತಿ ಅವರಿಗೆ ಅಪಾರ ಗೌರವ ತಂದುಕೊಟ್ಟಿದೆ. ಇನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ತಾವೇ ವೈಯಕ್ತಿಕವಾಗಿ ಅಡುಗೆ ಮಾಡಿ ಕಳುಹಿಸುವುದು, ಸ್ಪರ್ಧಿಗಳು ಕೇಳಿದ್ದನ್ನು ಎಷ್ಟೇ ದುಬಾರಿಯಾಗಿದ್ದರೂ ಒಂಚೂರು ಹಿಂಜರಿಕೆ ಮಾಡಿಕೊಳ್ಳದೇ ಕೊಟ್ಟುಬಿಡುವುದು ಇದು ಅವರ ಒಳ್ಳೆಯ ಗುಣಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

