ಶೂಟಿಂಗ್ ವೇಳೆ ಕೊರಗಜ್ಜನ ಪವಾಡ; ಕರಿಹೈದ ಕರಿಯಜ್ಜ ತಂಡ ಅತಿಮಾನುಷ ಅನುಭವ
ಕರಿಹೈದ ಕರಿಯಜ್ಜ ಚಿತ್ರದಲ್ಲಿ ಅತಿಮಾನುಷ ಅನುಭವದ ಬಗ್ಗೆ ಮಾತನಾಡಿದ ಸಂದೀಪ್ ಸೋಪರ್ಕರ್.
ಫೋಟೋ ಕೃಪೆ: ಮನು
‘ಕರಿಹೈದ ಕರಿ ಅಜ್ಜ ಸಿನಿಮಾದಲ್ಲಿ ನಾನು ಗುಳಿಗ ದೈವದ ಪಾತ್ರ ಮಾಡುತ್ತಿದ್ದೇನೆ. ಗುಳಿಗನ ನೃತ್ಯವೂ ಇದೆ. ಈ ಪಾತ್ರ ಶೂಟಿಂಗ್ ವೇಳೆ ಅತಿಮಾನುಷ ಅನುಭವವಾಯ್ತು. ಭೂತದ ಗಗ್ಗರ ಹಿಡಿದು ಅಭಿನಯಿಸುತ್ತಿದ್ದೆ.'
'ಅದು ಭಾರವಿತ್ತು. ಯಾವುದೋ ಒಂದು ಹೊತ್ತಲ್ಲಿ ನನ್ನ ಕೈಮೀರಿದ ಅನುಭವವಾಯ್ತು. ಅದನ್ನು ಮಾತಲ್ಲಿ ವಿವರಿಸಲಾರೆ. ಕಟ್ ಹೇಳಿದ ಮರುಕ್ಷಣ ನನಗೆ ನಿಲ್ಲಲೂ ಆಗದೇ ಕುಸಿಯತೊಡಗಿದೆ.’
ಇವು ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್, ಡಾನ್ಸರ್ ಸಂದೀಪ್ ಸೋಪರ್ಕರ್ ಮಾತುಗಳು. ಸುಧೀರ್ ಅತ್ತಾವರ್ ನಿರ್ದೇಶನದ ‘ಕರಿಹೈದ ಕರಿ ಅಜ್ಜ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.
‘ನನ್ನ ಬದುಕಿನಲ್ಲಿ ಇಂಥದ್ದೊಂದು ಅನುಭವ ಇದೇ ಮೊದಲು. ಬಂಡೆಯಿಂದ ಬಂಡೆಗೆ ಹಾರುವ, ಬಲು ಎತ್ತರದಿಂದ ಡ್ಯೂಪ್ ಬಳಸದೇ ಜಿಗಿದದ್ದೆಲ್ಲ ಮರೆಯಲಾಗದ ಅನುಭವ. ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಕಾಂತಾರ ಸಿನಿಮಾ ನೋಡಿಲ್ಲ’ ಎಂದರವರು.
ನಿರ್ದೇಶಕ ಸುಧೀರ್ ಅತ್ತಾವರ, ‘ಶೂಟಿಂಗ್ ವೇಳೆ ಅನೇಕ ಪವಾಡದ ಅನುಭವಗಳಾಗಿವೆ. ಶೂಟಿಂಗ್ ಮುಗಿದ ಮರುದಿನವೇ ಕೋಲ ನಡೆಸಲು ಅವಕಾಶ ಸಿಕ್ಕಿದ್ದೂ ಪವಾಡವೇ. ಆದರೆ ಕೊರಗಜ್ಜನಿಗೆ ವಿಸ್ಕಿ, ಬ್ರಾಂಡಿ ಕಾಣಿಕೆ ನೀಡುವ ಪದ್ಧತಿ ಯಾಕೋ ಸರಿ ಕಾಣುತ್ತಿಲ್ಲ.
ಕೊರಗ ಜನಾಂಗದವರೇ ಹೇಳಿದ ಕಥೆಯಿಂದ ಈ ಸಿನಿಮಾ ಮಾಡಲಾಗಿದೆ. ಎಲ್ಲಾ ಹಂತದಲ್ಲೂ ದೈವದ ಅನುಮತಿ ಪಡೆಯಲಾಗಿದೆ’ ಎಂದರು. ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ನಟಿಯರಾದ ಶ್ರುತಿ, ಭವ್ಯಾ ಅನುಭವ ಹಂಚಿಕೊಂಡರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಸಿನಿಮಾ ನಿರ್ಮಾಣ ಹಿಂದಿನ ಕಾರಣ ವಿವರಿಸಿದರು.
‘ಈ ಸಿನಿಮಾ ಚಿತ್ರೀಕರಣದ ವೇಳೆ ಧಾರ್ಮಿಕ ಸಂಘಟನೆಯವರು ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದ್ದರು. ಎರಡು ದಿನಗಳ ಚಿತ್ರೀಕರಣ ಸ್ಥಗಿತದಿಂದ ನಿರ್ಮಾಪಕರಿಗೆ 30 ಲಕ್ಷಕ್ಕೂ ಅಧಿಕ ನಷ್ಟವಾಗಿದೆ’ ಸಂದೀಪ್ ಸೋಪರ್ಕರ್ ಹೇಳಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಸುಧೀರ್, ‘ಗುಳಿಗ ಪಾತ್ರಕ್ಕೆ ಕೇರಳದ ತೈಯ್ಯಂ ವೇಷ ಬಳಸಿದ್ದೆವು. ಇದು ಅರ್ಥವಾಗದೇ ಅವರು ದಾಳಿ ಮಾಡಿದರು. ಮಾತುಕತೆ ಮೂಲಕ ಈ ಪ್ರಕರಣ ಇತ್ಯರ್ಥವಾಯಿತು’ ಎಂದರು.