- Home
- Entertainment
- Sandalwood
- ಸಾಗರದಲ್ಲಿ ಸಿನಿಮಾ ಶೂಟಿಂಗ್, ಮಧ್ಯರಾತ್ರಿ ಆ ನಿರ್ಮಾಪಕ..; ಕರಾಳ ಮುಖ ಬಿಚ್ಚಿಟ್ಟ ಕಾಂತಾರ ಸಿನಿಮಾದ ವಸಂತಕ್ಕ!
ಸಾಗರದಲ್ಲಿ ಸಿನಿಮಾ ಶೂಟಿಂಗ್, ಮಧ್ಯರಾತ್ರಿ ಆ ನಿರ್ಮಾಪಕ..; ಕರಾಳ ಮುಖ ಬಿಚ್ಚಿಟ್ಟ ಕಾಂತಾರ ಸಿನಿಮಾದ ವಸಂತಕ್ಕ!
Actress Prathima Naik: ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರತಿಮಾ ನಾಯಕ್ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಓರ್ವ ನಿರ್ಮಾಪಕ ರಾತ್ರಿ ಅನುಚಿತವಾಗಿ ವರ್ತಿಸಲು ರೆಡಿಯಾದ ಘಟನೆಯನ್ನು ಕನ್ನಡ ಪಿಚ್ಚರ್ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.

ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು
ಚಿತ್ರರಂಗವು ಒಂಥರ ಬಣ್ಣದ ಲೋಕ. ಇಲ್ಲಿ ಒಂದಿಷ್ಟು ಕರಾಳ ಮುಖಗಳೂ ಇವೆ. 'ಕಾಂತಾರ' ಸಿನಿಮಾದಲ್ಲಿ 'ವಸಂತಕ್ಕ' ಪಾತ್ರದ ಮೂಲಕ ಜನಪ್ರಿಯರಾದ ಪ್ರತಿಮಾ ಅವರು, ಕಾಸ್ಟಿಂಗ್ ಕೌಚ್ ಮಾದರಿಯ ಕಿರುಕುಳ ಎದುರಿಸಿದ್ದೆ, ನಿರ್ಮಾಪಕ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ.
ಸಾಗರದಲ್ಲಿ ಒಂದಿನ ಆ ನಿರ್ಮಾಪಕ
ಸಾಗರದಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ, ದಿನವಿಡೀ ಶೂಟಿಂಗ್ ಮುಗಿಸಿ ಪ್ರತಿಮಾ ನಾಯಕ್ ಅವರು ತಮ್ಮ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ಯಾರೋ ಬಂದು ಅವರ ರೂಮ್ ಬಾಗಿಲನ್ನು ಜೋರಾಗಿ ಬಡಿದಿದ್ದಾರೆ. ಯಾರೆಂದು ಕಿಟಕಿಯಲ್ಲಿ ನೋಡಿದಾಗ ಅಲ್ಲಿ ಆ ಸಿನಿಮಾದ ನಿರ್ಮಾಪಕ ನಿಂತಿದ್ದಾರೆ.
ಪ್ರತಿಮಾ ಅವರು ಆಗ "ಯಾಕೆ ಸರ್ ಈ ಟೈಮ್ಗೆ ಬಂದಿದ್ದೀರಿ?" ಎಂದು ಪ್ರತಿಮಾ ಕೇಳಿದಾಗ, ಆ ನಿರ್ಮಾಪಕ "ನಿಮ್ಮ ಪಾತ್ರದ ಬಗ್ಗೆ ಡಿಸ್ಕಸ್ ಮಾಡಬೇಕು, ಬಾಗಿಲು ತೆರೆಯಿರಿ" ಎಂದಿದ್ದಾನೆ. ಆಗ ಪ್ರತಿಮಾ ಅವರು "ಸರ್, ಪಾತ್ರದ ಬಗ್ಗೆ ಚರ್ಚೆ ಮಾಡಲು ಇದು ಸಮಯವಲ್ಲ. ಏನಿದ್ದರೂ ಬೆಳಗ್ಗೆ ಡೈರೆಕ್ಟರ್ ಜೊತೆ ಮಾತಾಡಿ. ಈಗ ಬಾಗಿಲು ತೆಗೆಯಲು ಸಾಧ್ಯವಿಲ್ಲ" ಎಂದು ನೇರವಾಗಿ ಹೇಳಿದ್ದಾರೆ. ಇದು ನಿರ್ಮಾಪಕನಿಗೆ ಸಿಟ್ಟು ತರಿಸಿದೆ.
ಆ ನೋವಿನಲ್ಲಿ 3km ನಡೆದುಕೊಂಡು ಹೋದೆ
ಬಾಗಿಲು ತೆಗೆಯದಿದ್ದಕ್ಕೆ ಆ ನಿರ್ಮಾಪಕ ಪ್ರತಿಮಾ ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದನು. ಮಾರನೇ ದಿನ ಕಾಡಿನ ಮಧ್ಯೆ ಶೂಟಿಂಗ್ ನಡೆಯುತ್ತಿದ್ದಾಗ ಪ್ರತಿಮಾ ಅವರಿಗೆ ಪಿರಿಯಡ್ಸ್ (Menstruation) ಸಮಸ್ಯೆಯಾಗಿ ಆರೋಗ್ಯ ಹದಗೆಟ್ಟಿತ್ತು. ಅತೀವ ನೋವಿನಲ್ಲಿದ್ದ ಅವರು ರೂಮಿಗೆ ಹೋಗಲು ಗಾಡಿಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು.
ಆದರೆ, ನಿರ್ಮಾಪಕ ಉದ್ದೇಶಪೂರ್ವಕವಾಗಿಯೇ ಗಾಡಿ ಕಳಿಸದೆ ಸತಾಯಿಸಿದ್ದಾನೆ. ಗಂಟೆಗಳ ಕಾಲ ಕಾದರೂ ಯಾರೂ ಸಹಾಯಕ್ಕೆ ಬಾರದಿದ್ದಾಗ, ಪ್ರತಿಮಾ ಅವರು ಅನಿವಾರ್ಯವಾಗಿ ಆ ಕಾಡಿನ ದಾರಿಯಲ್ಲೇ ಸುಮಾರು 2-3 ಕಿಲೋಮೀಟರ್ ನಡ್ಕೊಂಡು ಮುಖ್ಯ ರಸ್ತೆಗೆ ಬಂದು ತಲುಪಿದ್ದರು.
ಇಂಡಸ್ಟ್ರಿಯಲ್ಲಿ ನೀನು ಇಲ್ಲದ ಹಾಗೆ ಮಾಡ್ತೀನಿ
ಪ್ರತಿಮಾ ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಗಾಬರಿಯಾದ ನಿರ್ಮಾಪಕ, ಕಾರ್ ತೆಗೆದುಕೊಂಡು ಬಂದು ಅವರನ್ನು ತಡೆದಿದ್ದಾನೆ. ಅಲ್ಲಿಯೂ ಆತನ ಅಹಂಕಾರ ಕಡಿಮೆಯಾಗಿರಲಿಲ್ಲ. "ಏನಮ್ಮಾ ಸೀನ್ ಕ್ರಿಯೇಟ್ ಮಾಡ್ತಾ ಇದ್ದೀಯಾ? ನೀನು ಬಾಗಿಲು ತೆಗಿತಿಯೋ ಇಲ್ವೋ ನೋಡ್ತೀನಿ. ನಿನ್ನನ್ನ ಈ ಇಂಡಸ್ಟ್ರಿಯಲ್ಲಿ ಇಲ್ಲದ ಹಾಗೆ ಮಾಡ್ತೀನಿ" ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಮಾ ಅವರು "ನೋಡಪ್ಪ, ನನಗೆ ಈ ಇಂಡಸ್ಟ್ರಿಯಿಂದಲೇ ಬದುಕು ಆಗಬೇಕಿಲ್ಲ. ನನ್ನ ಕೆಲಸವನ್ನು ನಾನು ದೇವರೆಂದು ನಂಬಿದ್ದೇನೆ. ನೀನು ಏನು ಮಾಡ್ತೀಯೋ ಮಾಡಿಕೋ, ನಾನು ನಿನ್ನ ಗಾಡಿಯಲ್ಲಿ ಬರಲ್ಲ" ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿಗಳ ನಡುವೆಯೂ ಗೆದ್ದು ನಿಂತ ನಟಿ
ಆ ಘಟನೆಯ ನಂತರ ಆ ನಿರ್ಮಾಪಕ ಚಿತ್ರರಂಗದಲ್ಲಿ ಪ್ರತಿಮಾ ನಾಯಕ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದರಂತೆ. "ಪ್ರತಿಮಾ ಸೆಟ್ಟಿಗೆ ಬಂದರೆ ಕೆಲಸ ಕೆಡಿಸ್ತಾರೆ, ಕಿರಿಕಿರಿ ಮಾಡ್ತಾರೆ" ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರಂತೆ. ಇದರಿಂದಾಗಿ ಒಂದೆರಡು ವರ್ಷ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಆದರೆ, ಸತ್ಯ ಹೆಚ್ಚು ಕಾಲ ಅಡಗಿರಲಿಲ್ಲ. ಈ ಬಗ್ಗೆ ಪ್ರತಿಮಾ ಅವರೇ ಹೇಳಿಕೊಂಡಿದ್ದಾರೆ.
60 ಸಿನಿಮಾಗಳಲ್ಲಿ ನಟನೆ
ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ಗಿರೀಶ್ ಕಾಸರವಳ್ಳಿ ಅವರಂತಹ ದಿಗ್ಗಜ ನಿರ್ದೇಶಕರು ಪ್ರತಿಮಾರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿದರು. ಇಂದು ಅವರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮ್ಮದೇ ಆದ ಗೌರವ ಸಂಪಾದಿಸಿದ್ದಾರೆ. "ನನ್ನನ್ನು ಪ್ರೀತಿಸುವ ಒಂದು ಗುಂಪು ಇವತ್ತಿಗೂ ನನ್ನ ಕೈ ಬಿಟ್ಟಿಲ್ಲ" ಎನ್ನುವ ಪ್ರತಿಮಾ ನಾಯಕ್, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಹೊಸ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

