‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..’; ಭಟ್ರು ಹಾಡು ವೈರಲ್!
ತುಂಬಾ ಹಿಂದೆ ಬಂದ ‘ಪರಪಂಚ’ ಚಿತ್ರದ ಈ ಹಾಡನ್ನು ಕೇಳಿರುತ್ತೀರಿ.‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ..’ ಈ ಹಾಡು ಈಗ ವಿಪರೀತ ಸದ್ದು ಮಾಡುತ್ತಿದೆ
ಸಾಮಾಜಿಕ ಜಾಲತಾಣಗಳಲ್ಲಿ ನೀವು ಅರ್ಧ ಗಂಟೆ ಸಮಯ ಕಳೆದರೆ ಈ ಹಾಡಿನ ಸಾಲುಗಳನ್ನು ಎರಡ್ಮೂರು ಬಾರಿಯಾದರೂ ಕೇಳುತ್ತೀರಿ.
ಸಿನಿಮಾ ಬಂದಾಗ ಅಷ್ಟೇನೂ ಜನಪ್ರಿಯವಾಗದೇ ಹೋದರೂ, ಈಗ ಕೊರೋನಾ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿರುವ ಕಾರಣ ಮತ್ತೆ ಫೇಮಸ್ ಆಗ್ತಿದೆ.
ಈ ಹಾಡಿನ ಸೂತ್ರದಾರ ನಿರ್ದೇಶಕ ಯೋಗರಾಜ್ ಭಟ್. ಹಾಡಿದವರು ಹುಚ್ಚ ವೆಂಕಟ್.
ಸದ್ಯದ ಪರಿಸ್ಥಿತಿಯನ್ನು ನೋಡಿದ ಮೇಲೆ ಸ್ವತಃ ಯೋಗರಾಜ್ ಭಟ್ ಅವರೇ ತಮ್ಮ ಈ ಹಾಡನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಹಾಡು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.
‘ನಾವೆಲ್ಲರೂ ಎಲ್ಲಿಂದಲೋ ಬಂದವರು, ಎಲ್ಲಿಗೋ ಹೊಂಟವರು, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಎಲ್ಲಿಗೆ? .. ಇದು ಸದಾ ಕಾಡುವ ಭಾವ. ಎಂದೋ ಬರೆದ ಹಾಡು ಇಂದಿಗೆ ಹೆಚ್ಚು ಪ್ರಸ್ತುತ’ ಎಂದು ಯೋಗರಾಜ್ ಭಟ್ ಅವರು ಬರೆದುಕೊಂಡಿದ್ದಾರೆ.
ನಗರದಿಂದ ಹಳ್ಳಿಗಳ ಕಡೆಗೆ ಹೋಗುತ್ತಿರುವ ಜನರಿಗೆ, ಇಲ್ಲೇ ಉಳಿದುಕೊಂಡು ಒದ್ದಾಡುತ್ತಿರುವವರಿಗೆ, ಕ್ರಿಷ್ ಜೋಷಿ ನಿರ್ದೇಶನದಲ್ಲಿ 2016ರಲ್ಲಿ ತೆರೆಕಂಡಿದ್ದ ‘ಪರಪಂಚ’ ಚಿತ್ರದ ಈ ಹಾಡು ನೆನಪಾಗುತ್ತಿದೆ.
ದಿಗಂತ್, ಅನಂತ್ ನಾಗ್, ರಾಗಿಣಿ, ಭಾವನಾ ರಾವ್, ದತ್ತಣ್ಣ, ರಂಗಾಯಣ ರಘು ಅವರು ನಟಿಸಿರುವ ಸಿನಿಮಾ ಇದು.