- Home
- Entertainment
- Sandalwood
- ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ: ವ್ಯತ್ಯಾಸ ಹೇಳಿದ ಕವಿರಾಜ್
ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ: ವ್ಯತ್ಯಾಸ ಹೇಳಿದ ಕವಿರಾಜ್
ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಗೀತ ರಚನೆಕಾರ ಕವಿರಾಜ್ ಪೋಸ್ಟ್
ಚಂದನವನ ಸಿನಿಮಾಗಳಿಗೆ ಸುಂದರ ಹಾಡುಗಳನ್ನು ನೀಡಿರುವ ಗೀತ ರಚನೆಕಾರ ಕವಿರಾಜ್ ಅವರ ಫೇಸ್ಬುಕ್ ಪೋಸ್ಟ್ ವೈರಲ್ ಆಗುತ್ತಿದೆ. 15 ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಕವಿರಾಜ್ ಹಂಚಿಕೊಂಡಿದ್ದಾರೆ. 2011 ಮತ್ತು 2013 ಹಾಗೂ 2026ರಲ್ಲಿ ಮಾಡಿದ ಪೋಸ್ಟ್ ನಡುವಿನ ವ್ಯತ್ಯಾಸವನ್ನು ಕವಿರಾಜ್ ವಿವರವಾಗಿ ಬರೆದುಕೊಂಡಿದ್ದಾರೆ.
ಕವಿರಾಜ್ ಎಫ್ಬಿ ಪೋಸ್ಟ್ನಲ್ಲಿ ಏನಿದೆ?
15 ವರ್ಷಗಳಲ್ಲಿ ದೇಶ ಎಷ್ಟೊಂದು ಬದಲಾಗಿದೆ. ಜನ ಎಷ್ಟೊಂದು ಬದಲಾಗಿದ್ದಾರೆ. 2011 ಮತ್ತು 2013ರಲ್ಲಿ ನಾನು ಫೇಸ್ ಬುಕ್ ಅಲ್ಲಿ ಮಾಡಿದ ಪೋಸ್ಟ್ ಗಳು ಇವು. ಅಣ್ಣಾ ಹಜಾರೆಯವರ ನಿರಶನ ಬೆಂಬಲಿಸಿ ಮೂರ್ನಾಲ್ಕು ದಿನ ಫ್ರೀಡಂ ಪಾರ್ಕ್ ಅಲ್ಲಿ ಕುಳಿತಿದ್ದೆ. ಅವತ್ತು ಯುಪಿಎ ಅಧಿಕಾರದಲ್ಲಿತ್ತು. ಆ ಸರಕಾರವನ್ನು ಬೈದು ಭಾಷಣ ಕೂಡಾ ಮಾಡಿದ್ದೆ. ಭ್ರಷ್ಟಾಚಾರ ತೊಲಗಬೇಕು ಎಂಬ ನಮ್ಮ ಹಂಬಲ, ಬೆಂಬಲ, ಬದ್ಧತೆ ಮಾತ್ರ ಶುದ್ದವಾಗಿತ್ತು. ಅವತ್ತು ಯಾರೂ ನಿಂದಿಸಿರಲಿಲ್ಲ, ಯಾರೂ ದ್ವೇಷಿಸಿರಲಿಲ್ಲ.
ಡಿಸೈನ್ ಡಿಸೈನ್ ನಿಂದನೆ
ಇವತ್ತು ಹೆಚ್ಚು ಕಡಿಮೆ ಅಂತದ್ದೇ ಹೋರಾಟ, ಅದನ್ನು ಬೆಂಬಲಿಸಿ ಪೋಸ್ಟ್ ಹಾಕಿದರೆ ಡಿಸೈನ್ ಡಿಸೈನ್ ನಿಂದನೆ, ದ್ವೇಷ. ಪರವಾಗಿಲ್ಲ. ಇದೆಲ್ಲ ಅಭ್ಯಾಸವಾಗಿದೆ. ಅವತ್ತೂ ನಾನು ಅನ್ಯಾಯದ ವಿರುದ್ಧ, ಇವತ್ತೂ ಕೂಡಾ. ಅಕ್ಕ ಮಹಾದೇವಿ ಹೇಳಿದಂತೆ, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ.
ಯಾಕೆ ಈ ಪೋಸ್ಟ್?
ಜುಲೈ 15ರಂದು ದೆಹಲಿಯ ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಸಿಜೆಪಿ ಹೋರಾಟ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹದ ಕುರಿತು ಕವಿರಾಜ್ ತಮ್ಮ ಅಭಿಪ್ರಾಯವನ್ನು ಫೇಸ್ಬುಕ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದರು. ಹಾಗೆಯೇ ನ್ಯಾಯ ಕೇಳುವವರು, ಆಳುವರರನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳೆನ್ನುವ ಹೀನ ಮನಸ್ಥಿತಿಯ ಜನ ಅದನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ಈ ದೇಶಕ್ಕೆ, ನಿಜಕ್ಕೂ ದೇಶದ ಒಳಿತು ಬಯಸುವವರಿಗೆ ನೀವು ಬೇಕು ಎಂದಿದ್ದರು.
ನೆಗೆಟಿವ್ ಕಮೆಂಟ್
ಕವಿರಾಜ್ ಅವರ ಈ ಪೋಸ್ಟ್ಗೆ ಪರ-ವಿರೋಧ ಕಮೆಂಟ್ಗಳು ಬಂದಿವೆ. ಈ ಕಮೆಂಟ್ ಗಮನಿಸಿದ ಕವಿರಾಜ್, ಈ ಹಿಂದೆ 2011 ಮತ್ತು 2013ರಲ್ಲಿ ಅಣ್ಣಾ ಹಜಾರೆ ಉಪವಾಸ ಕುರಿತ ಬರೆದುಕೊಂಡ ಪೋಸ್ಟ್ಗೆ ಬಂದ ಕಮೆಂಟ್ಗಳ ಜೊತೆ ಹೋಲಿಕೆ ಮಾಡಿದ್ದಾರೆ. ಕಳೆದ 15 ವರ್ಷಗಳಲ್ಲಿ ದೇಶ ಮತ್ತು ದೇಶದ ಜನತೆ ಬದಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

