Imandar ಇನಾಮ್ದಾರ್ ಚಿತ್ರಕ್ಕೆ ರಂಜನ್ ಛತ್ರಪತಿ ನಾಯಕ; ದ್ವೇಷದ ಕಿಚ್ಚನ್ನು ಬೂದಿಯಾಗಿಸುವ ಸುಂದರ ಕಥೆ
ಶ್ರೀಕುಂತಿಯಮ್ಮ ಪ್ರೊಡಕ್ಷನ್ಸ್ ಮತ್ತು ತಸ್ಮಯ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ " "ಇನಾಮ್ದಾರ್" ಚಲನಚಿತ್ರ ಟೀಸರ್ ವೈರಲ್ ಆಗುತ್ತಿದೆ.
ಬೆಂಗಳೂರು
ವರದಿ : ನಟರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರಾಗಿ ಕಾಣುವ ದುರ್ಗಮ ಕಾಡು, ಆ ಕಾಡಿನ ಒಳಗೆ ಹೊರ ಪ್ರಪಂಚ ದಿಂದ ದೂರ ಉಳಿದ ಕಾಡು ಜನಾಂಗ. ಇನ್ನೊಂದೆಡೆ ಅಗಾಧ ಬಯಲು ಸೀಮೆಯ ಗಟ್ಟಿ ನೆಲದ ಮನೆತನ.
ಇವೆರಡು ಸಮುದಾಯಕ್ಕೆ ಕೊಂಡಿಯಂತೆ ಕಾಡಿನ ಮಧ್ಯೆ ಸ್ಥಿತನಾಗಿರುವ ಪರಮಶಿವ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾಡು ಜನಾಂಗ ಮತ್ತು ಉತ್ತರ ಕರ್ನಾಟಕದ ಇನಾಮ್ದಾರ್ ವಂಶದ ಮಧ್ಯೆ ಇರುವ ವಿಶೇಷ ಆಚರಣೆಯೇ ಇವರ ಸಾಮರಸ್ಯದ ಜೀವನಕ್ಕೆ ಸಾಕ್ಷಿಯಾಗಿದೆ.
ಇಂತಹ ಸುಂದರ ಸಾಮರಸ್ಯಕ್ಕೆ ಸಂಭ್ರಮಾಚರಣೆ ಸಂದರ್ಭದಲ್ಲಿಯೇ ದ್ವೇಷದ ಕಿಚ್ಚು ಹೊತ್ತಿಕೊಳ್ಳುತ್ತದೆ. ಈ ಕಿಚ್ಚಿನಲ್ಲಿ ಎರಡು ಕಡೆಯ ಅದೇಷ್ಟೋ ಜೀವಗಳು ಜೀವ ಕಳೆದುಕೊಂಡರೆ, ಒಂದಿಷ್ಟು ಜನ ಅದೇ ಕಿಚ್ಚಿನಲ್ಲಿ ಮೈ ಬೆಚ್ಚಾಗಿಸಿ ಸುಖ ಕಾಣುವ ಆಸೆಯಲ್ಲಿ ದಿನದೂಡುತ್ತಾರೆ.
ಅದೇ ಪಶ್ಚಿಮ ಘಟ್ಟದ ತಪ್ಪಲಿನ ಪರಮಶಿವನ ವರಪ್ರಸಾದವಾಗಿ ಜನಿಸಿದ ಇನಾಮ್ದಾರ್ ವಂಶದ ಕುಡಿ ತನ್ನ ಮೂಲ ಹುಡುಕಿಕೊಂಡು ಹೊರಟು, ಈ ವರ್ಣ ದ್ವೇಷದ ಕಿಚ್ಚನ್ನು ಬೂದಿಯಾಗಿಸುವ ಸುಂದರ ಕಥಾ ಹಂದರವೇ 'ಇನಾಮ್ದಾರ್'.
ಇಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಹಸಿರು ಕಾಡಿನ ತೋರಣವಿದೆ, ಉತ್ತರ ಕರ್ನಾಟಕದ ಗಟ್ಟಿ ಮಣ್ಣಿನ ಗಮಲು ಇದೆ. ಜಾತಿ ಧರ್ಮದ ಹೊರತಾಗಿ ದೇಹವರ್ಣದ ಹಿನ್ನಲೆಯಲ್ಲಿ ಹೊತ್ತಿಕೊಳ್ಳುವ ಕಿಡಿ ಇದೆ. ಕಾಡುಜನರ ವಿಶಿಷ್ಡ ಪದ್ಧತಿ, ಆಚರಣೆ, ಆರಾಧನೆ ಇದೆ, ಸಂಭ್ರಮವನ್ನು ಸಂಭ್ರಮಿಸುವ ಜನರ ಸಂತಸವಿದೆ.
ರಾಜ್ಯದ ಎರಡು ಭಾಗಗಳ ಭಾಷೆಗಳ ಸೊಗಡಿದೆ...ಹೊಸ ಪ್ರಯತ್ನದೊಂದಿಗೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ದಾಖಲೆ ಬರೆಯುವಂತಹ ಚಿತ್ರ ಇದಾಗಿದೆ.
Imanda
ಶ್ರೀಕುಂತಿಯಮ್ಮ ಪ್ರೊಡಕ್ಷನ್ಸ್ ಮತ್ತು ತಸ್ಮಯ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಇನಾಮ್ದಾರ್' ಚಲನಚಿತ್ರ ಟೀಸರದ ಬಿಡುಗಡೆ ಸಮಾರಂಭ ನಡೆಯಿತು.
ಈ ಸಂದರ್ಭದ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕರಾದ ನಿರಂಜನ್ ತಲ್ಲೂರು, ಚಿತ್ರದ ನಾಯಕ ನಟ ರಂಜನ್ ಛತ್ರಪತಿ, ನಾಯಕಿಯರಾದ ಚಿರಶ್ರೀ ಅಂಚನ್, ಎಸ್ತರ್ ನೋರೊನ್ಹಾ, ಮುಖ್ಯಭೂಮಿಕೆಯಲ್ಲಿರುವ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಎಂ.ಕೆ.ಮಠ, ರಘುಪಾಂಡೇಶ್ವರ್, ಯಶ್ ಆಚಾರ್ಯ, ಕರಣ್ ಕುಂದರ್ ಭಾಗಿಯಾಗಿದ್ದರು.