ನಾನೀಗ ತರಕಾರಿ, ಮಾಂಸ ಕತ್ತರಿಸೋದು ಕಲಿಯಬೇಕಿದೆ: ಅನಿರುದ್ಧ ಹೇಳಿಕೆ ವೈರಲ್
ಯಜಮಾನ ಸಿನಿಮಾದ ಮುಹೂರ್ತ ಆದ ಜಾಗದಲ್ಲೇ ‘ಶೆಫ್ ಚಿದಂಬರ’ ಮುಹೂರ್ತ. ನಟ ಅನಿರುದ್ಧ್ ಮಾತು...
‘ಪ್ರತೀ ಸಿನಿಮಾ ಮಾಡುವಾಗಲೂ ನಾನು ಸಿದ್ಧತೆ ಮಾಡ್ಕೊಂಡೇ ಹೋಗ್ತೀನಿ. ಇದೀಗ ಶೆಫ್ ಚಿದಂಬರ ಚಿತ್ರದ ಪಾತ್ರಕ್ಕೆ ಪಳಗಿದ ಶೆಫ್ ರೀತಿ ತರಕಾರಿ, ಮಾಂಸ ಕತ್ತರಿಸೋದನ್ನ ಕಲಿಯಬೇಕಿದೆ.’ - ಈ ಮಾತು ಹೇಳಿದ್ದು ಅನಿರುದ್ಧ ಜತ್ಕರ್.
ಅವರ ಹೊಸ ಸಿನಿಮಾ ‘ಶೆಫ್ ಚಿದಂಬರ’ ಮುಹೂರ್ತ ಬೆಂಗಳೂರಿನ ರಾಮಾಂಜನೇಯ ದೇಗುಲದಲ್ಲಿ ನಡೆದಿದೆ. ಉಪೇಂದ್ರ ಕ್ಲಾಪ್ ಮಾಡಿದರೆ, ಭಾರತಿ ವಿಷ್ಣುವರ್ಧನ್ ಕ್ಯಾಮರಾಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅನಿರುದ್ಧ, ‘ಇದೊಂದು ಡಾರ್ಕ್ ಕಾಮಿಡಿ ಚಿತ್ರ. ಭಿನ್ನವಾದ ಪಾತ್ರ. ಐದು ವರ್ಷಗಳಾದ ಮೇಲೆ ಹಿರಿತೆರೆಗೆ ಬರುತ್ತಿದ್ದೇನೆ. ಈ ಸಿನಿಮಾದ ನಿರ್ದೇಶಕ ಆನಂದ್ ರಾಜ್ ಸಿಕ್ಕಿದ್ದು ಆಕಸ್ಮಿಕವಾಗಿ.
ಬೇರೆ ನಿರ್ದೇಶಕರು ತಮ್ಮ ಸ್ಕ್ರಿಪ್ಟ್ ಹೇಳಲು ಬಂದಿದ್ದರು. ಅವರ ಜೊತೆಗೆ ಬಂದವರು ಆನಂದ್ ರಾಜ್. ಇವರು ಹೇಳಿದ ಕಥೆ ಸಿಕ್ಕಾಪಟ್ಟೆ ಇಷ್ಟವಾಗಿ ಈ ಪ್ರಾಜೆಕ್ಟ್ಗೆ ಸೈನ್ ಮಾಡಿದೆ.
ನಿರ್ಮಾಪಕಿ ಸಿಕ್ಕಿದ್ದು ಮತ್ತೊಂದು ಕಥೆ. ನಾವೆಲ್ಲ ಈ ಸಿನಿಮಾಗಾಗಿ ಒಗ್ಗೂಡಿದ್ದು ಋಣಾನುಬಂಧ’ ಎಂದರು. ಭಾರತಿ ವಿಷ್ಣುವರ್ಧನ್, ‘ಯಜಮಾನ ಸಿನಿಮಾದ ಮುಹೂರ್ತ ಇದೇ ಜಾಗದಲ್ಲಿ ಆಗಿತ್ತು.
ಈ ಸಿನಿಮಾ ಮುಹೂರ್ತದಲ್ಲಿ ಹಿಂದಿನ ದಿನಗಳೇ ನೆನಪಾಗುತ್ತಿದ್ದವು. ಚಿತ್ರ ಯಶಸ್ವಿ ಆಗಲಿ’ ಎಂದು ಶುಭ ಹಾರೈಸಿದರು. ನಿರ್ದೇಶಕ ಆನಂದ್ ರಾಜ್, ‘ಚಿತ್ರದಲ್ಲಿ ಒಂದು ಕೊಲೆ ಸನ್ನಿವೇಶ ಬರುತ್ತೆ ಮತ್ತು ಒಬ್ಬ ಶೆಫ್ನ ಬದುಕಿನ ಕಥೆಯೂ ಇದೆ.
ಇವೆರಡರ ನಡುವೆ ಸಾಗುವ ಡಾರ್ಕ್ ಕಾಮಿಡಿ ಚಿತ್ರವಿದು’ ಎಂದರು. ನಾಯಕಿಯರಾದ ರೇಚಲ್ ಡೇವಿಡ್, ನಿಧಿ ಸುಬ್ಬಯ್ಯ, ನಿರ್ಮಾಪಕಿ ರೂಪಾ ಡಿ ಎನ್ ಹಾಜರಿದ್ದರು.