- Home
- News
- Politics
- ಇದ್ದರೆಷ್ಟು, ಹೋದರೆಷ್ಟು? ಹಲ್ಚಲ್ ಸೃಷ್ಟಿಸಿದ ಎಂ.ಬಿ.ಪಾಟೀಲ್ ಟ್ವೀಟ್, ಯಾರಿಗೆ ಟಾಂಟ್ ಕೊಟ್ರು ಸಚಿವರು?
ಇದ್ದರೆಷ್ಟು, ಹೋದರೆಷ್ಟು? ಹಲ್ಚಲ್ ಸೃಷ್ಟಿಸಿದ ಎಂ.ಬಿ.ಪಾಟೀಲ್ ಟ್ವೀಟ್, ಯಾರಿಗೆ ಟಾಂಟ್ ಕೊಟ್ರು ಸಚಿವರು?
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ, ಸಚಿವ ಎಂ.ಬಿ. ಪಾಟೀಲ್ ಅವರು ಬಸವಣ್ಣನ ವಚನವನ್ನು ಟ್ವೀಟ್ ಮಾಡಿ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಕೊನೆಗೂ ಸಿದ್ದರಾಮಯ್ಯ ರಾಜೀನಾಮೆ
ಕೊನೆಗೂ ರಾಜ್ಯ ರಾಜಕೀಯದಲ್ಲಿ ಕೆಲವು ತಿಂಗಳುಗಳಿಂದ ಉಂಟಾಗಿದ್ದ ಪ್ರಹಸನಕ್ಕೆ ತೆರೆ ಬಿದ್ದಿದೆ. ಸಿಎಂ ಖುರ್ಚಿ ಬಿಡುವುದಿಲ್ಲ, ಐದು ವರ್ಷ ಪೂರ್ಣ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರು ಈಗ ರಾಜೀನಾಮೆ ನೀಡಿದ್ದು ಮಾಜಿ ಸಿಎಂ ಆಗಿದ್ದಾರೆ. ಇದಕ್ಕೂ ಮುನ್ನ, ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಿಮ್ಮ ಮಾರ್ಗದಲ್ಲಿ ನಡೆಯುತ್ತೇನೆ ಎಂದಿದ್ದಾರೆ.
ಎಂ.ಬಿ.ಪಾಟೀಲ್ ಟ್ವೀಟ್
ಈ ಎಲ್ಲಾ ಪ್ರಕ್ರಿಯೆಯ ನಡುವೆಯೇ ಸಚಿವ ಎಂ.ಬಿ.ಪಾಟೀಲ್ ಅವರು ಮಾಡಿದ್ದ ಕುತೂಹಲದ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಏಕೆ ಹೇಳಿದ್ದಾರೆ, ಇದರ ಅರ್ಥವೇನು? ಡಿಕೆಶಿ ಮುಖ್ಯಮಂತ್ರಿ ಆಗುವುದು ಅವರಿಗೆ ಇಷ್ಟವಿಲ್ಲವೆ, ಅಥವಾ ಸಿದ್ದರಾಮಯ್ಯ ಅವರ ರಾಜೀನಾಮೆ ಇಷ್ಟವಿಲ್ಲವೇ ಇತ್ಯಾದಿಯಾದ ಪ್ರಶ್ನೆಗಳು ಮೂಡಿವೆ.
ಬಸವಣ್ಣನ ವಚನ
ಅಷ್ಟಕ್ಕೂ, ಎಂ.ಬಿ.ಪಾಟೀಲ್ ಅವರು ಟ್ವೀಟ್ನಲ್ಲಿ ಬಸವಣ್ಣದ ವಚನವನ್ನು ಬರೆದಿದ್ದಾರೆ. ಅವರು ಬರೆದದ್ದು ಏನೆಂದರೆ, ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದಡೇನೊ ಶಿವ ಶಿವಾ, ಹೋದಡೇನೊ ಕೂಡಲಸಂಗಮದೇವಯ್ಯಾ,ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ ಎಂದಿದ್ದಾರೆ.
ಏನಿದರ ಅರ್ಥ?
ಅಷ್ಟಕ್ಕೂ ವಚನದ ಅರ್ಥ, ಗಂಡನ ಮೇಲೆ ಪ್ರೀತಿ ಇಲ್ಲದ ಹೆಂಡತಿ ಮತ್ತು ಇಷ್ಟಲಿಂಗದ ಮೇಲೆ ಭಕ್ತಿ/ನಿಷ್ಠೆ ಇಲ್ಲದ ಭಕ್ತ ಇವರಿದ್ದರೆಷ್ಟು, ಹೋದರೆಷ್ಟು? ಅವರಿಂದ ಯಾವುದೇ ಪ್ರಯೋಜನವಿಲ್ಲ. ಹಾಲೂಡಿಸದ ಹಸುವಿನ ಬಳಿ ಹಾಲನ್ನು ಉಣ್ಣದ ಕರುವನ್ನು ಬಿಟ್ಟರೆ ಹೇಗೋ, ಇವರ ಸ್ಥಿತಿಯೂ ಹಾಗೆಯೇ ನಿರರ್ಥಕವಾಗಿರುತ್ತದೆ ಎನ್ನುವುದು.
ಹೇಳಿದ್ದು ಯಾರಿಗೆ?
ಹಾಗಿದ್ದರೆ ಎಂ.ಬಿ.ಪಾಟೀಲ್ ಅವರು ಈ ಮಾತನ್ನು ಹೇಳಲು ಕಾರಣವೇನು ಎನ್ನುವ ಬಗ್ಗೆ ಇದೀಗ ಚರ್ಚೆ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಆಸುಪಾಸಿನ ಸಮಯದಲ್ಲಿ ಈ ಟ್ವೀಟ್ ಮಾಡಿದ್ದರು ಅವರು. ಹಾಗಿದ್ದರೆ, ಏನಿದರ ಅರ್ಥ ಎನ್ನುವ ಬಗ್ಗೆ ಬಗೆಬಗೆ ವಿಶ್ಲೇಷಣೆ ಮಾಡಲಾಗುತ್ತಿದೆ.
ರಾಜೀನಾಮೆ ನೀಡಲ್ಲ ಎಂದಿದ್ದ ಸಚಿವರು
ನಿನ್ನೆಯಷ್ಟೇ ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಆ ಬಗ್ಗೆ ಚರ್ಚೆ ಆಗಲೇ ಇಲ್ಲ ಎಂದು ಪದೇ ಪದೇ ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರ ಮೇಲೆ ಗರಂ ಆಗಿದ್ದರು. ರಾಜ್ಯಸಭೆ, ಎಂಎಲ್ಸಿ ಚುನಾವಣೆ ಬಗ್ಗೆ ಮಾತ್ರ ಚರ್ಚೆ ನಡೆದಿದೆ, ಸಿಎಂ ಬಗ್ಗೆ ಚರ್ಚೆನೇ ಆಗಿಲ್ಲ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

