ಮುಖೇಶ್ ಅಂಬಾನಿ - ಅಜಿಮ್ ಪ್ರೇಮ್ಜೀ ಭಾರತದ ಶ್ರೀಮಂತ ವ್ಯಕ್ತಿಗಳು ಓದಿದ್ದೇನು?
ಚಲನಚಿತ್ರ ತಾರೆಯರ ಶಿಕ್ಷಣದ ಹಿನ್ನೆಲೆ ಯಾವಾಗಲೂ ಸುದ್ದಿಯಲ್ಲಿರುತ್ತದೆ. ದೇಶದ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಗಳ ಶಿಕ್ಷಣದ ಬಗ್ಗೆ ಯೋಚಿಸಿದ್ದೀರಾ? ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳು ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಮುಖೇಶ್ ಅಂಬಾನಿಯಿಂದ ಅಜೀಮ್ ಪ್ರೇಮ್ಜೀ ವರೆಗೆ ನಮ್ಮ ದೇಶದ ಕುಬೇರರ ಶಿಕ್ಷಣದ ಹಿನ್ನೆಲೆ ಇಲ್ಲಿದೆ.
ನಮ್ಮ ದೇಶದ ಕುಬೇರರು ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಅವರು ಏನು ಓದಿದ್ದಾರೆಂದು ನಿಮಗೆ ತಿಳಿದಿಯೇ. ಇಲ್ಲಿದೆ ಅಂತಹ ಶ್ರೀಮಂತ ವ್ಯಕ್ತಿಗಳ ಶೈಕ್ಷಣಿಕ ಹಿನ್ನೆಲೆ ಹಾಗೂ ವಿವರ.
ಮುಖೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮುಂಬೈ ನಗರದ ಹಿಲ್ ಗ್ರ್ಯಾಂಜ್ ಹೈಸ್ಕೂಲ್ನಲ್ಲಿ ಶಿಕ್ಷಣ ಮುಗಿಸಿ, ಮುಂಬೈನ ಇನ್ಸ್ಟೂಟ್ ಅಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ನಂತರ, ಹೆಚ್ಚಿನ ಶಿಕ್ಷಣಗಾಗಿ ಯುಎಸ್ನ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದ್ದರು. ಆದರೆ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಬಂದು ತಂದೆಯ ವ್ಯವಹಾರ ನೋಡಿಕೊಳ್ಳಲು ಆರಂಭಿಸಿದರು.
ರತನ್ ಟಾಟಾ
ಭಾರತೀಯ ಉದ್ಯಮಿ, ಹೂಡಿಕೆದಾರ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಹಾಗೂ ಟಾಟಾ ಗ್ರೂಪ್ಸ್ನ ಅಧ್ಯಕ್ಷರಾಗಿದ್ದ ರತನ್ ನೇವಲ್ ಟಾಟಾ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ್ (2008) ಮತ್ತು ಪದ್ಮಭೂಷಣ್ (2000) ಪಡೆದಿದ್ದಾರೆ. ಅವರು ಪ್ರತಿಷ್ಠಿತ ಕ್ಯಾಥೆಡ್ರಲ್ ಮತ್ತು ಜಾನ್ ಕ್ಯಾನನ್ ಶಾಲೆ, ಬಿಷಪ್ ಕಾಟನ್ ಶಾಲೆ (ಶಿಮ್ಲಾ), ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ನ ಹಳೆಯ ವಿದ್ಯಾರ್ಥಿ. ಕಾರ್ನೆಲ್ ವಿಶ್ವವಿದ್ಯಾಲಯದಿಂದ ವಾಸ್ತುಶಿಲ್ಪದಲ್ಲಿ ಸ್ಟರ್ಕಚರಲ್ ಎಂಜಿನಿಯರಿಂಗ್ ನೊಂದಿಗೆ ಬಿಎಸ್ ಮುಗಿಸಿದರು. ನಂತರ 1975ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ನಿಂದ ಆಡ್ವಾನ್ಸ್ಡ್ ಮ್ಯಾನೇಜ್ಮೇಂಟ್ ಪ್ರೋಗ್ರಾಂ ಪೂರ್ಣಗೊಳಿಸಿದರು.
ರಾಧಾಕೃಷ್ಣ ದಮಾನಿ
ರಾಧಾಕೃಷ್ಣ ದಮಾನಿ ಭಾರತದ ಎರಡನೇ ಮತ್ತು ವಿಶ್ವದ 34 ನೇ ಶ್ರೀಮಂತ ವ್ಯಕ್ತಿ. 'ರಿಟೇಲ್ ಕಿಂಗ್ ಆಫ್ ಇಂಡಿಯಾ' ಎಂದು ಪ್ರಸಿದ್ಧವಾಗಿರುವ ದಮಾನಿ ಆಸ್ತಿ 16.6 ಬಿಲಿಯನ್ ಡಾಲರ್ ಆಗಿದೆ. ಬಾಂಬೆ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ದಮಾನಿ ಪ್ರಯತ್ನಿಸಿದರು. ಆದರೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಮೊದಲಿನಿಂದಲೂ ಅಕೌಂಟಿಂಗ್ ಅಧ್ಯಯನ ಮಾಡಲು ಆಸಕ್ತಿ ಹೊಂದಿದ್ದರು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಹೊಂದಿರುವ ಇವರು ಡಿಗ್ರಿಗಳಿಗಿಂತ ಹೊಸ ಐಡಿಯಾಗಳು ಮುಖ್ಯ ಹಾಗೂ ಸಾಮರ್ಥ್ಯದ ಮೇಲೆ ನಮ್ಮ ಐಡೆಂಟಿಯನ್ನು ಸೃಷ್ಟಿಸಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಶಿವ ನಾಡರ್
ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಶಿವ ನಾಡರ್. ಶಿವ ನಾಡರ್ ಎಚ್ಸಿಎಲ್ನ ಸ್ಥಾಪಕರಾಗಿದ್ದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 114 ನೇ ಸ್ಥಾನದಲ್ಲಿದ್ದರು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮುಲ್ಲೈಪುಜಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶಿವ, ಕುಂಬಕೋಣಂನ ಟೌನ್ ಹೈಯರ್ ಸೆಕೆಂಡರಿ ಶಾಲೆಯಿಂದ ಆರಂಭಿಕ ಶಿಕ್ಷಣವನ್ನು ಪಡೆದರು. ಅಮೆರಿಕನ್ ಕಾಲೇಜು ಮಧುರೈನಿಂದ ಪ್ರೀ ಯೂನಿವರ್ಸಿಟಿ ಮುಗಿಸಿದ ನಂತರ ಕೊಯಮತ್ತೂರಿನ ಪಿಎಸ್ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪೂರೈಸಿದರು.
ಲಕ್ಷ್ಮಿ ಮಿತ್ತಲ್
ಭಾರತದ 8 ನೇ ಶ್ರೀಮಂತ ವ್ಯಕ್ತಿ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ವಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿ 170 ನೇ ಸ್ಥಾನದಲ್ಲಿದ್ದಾರೆ. ಮಿತ್ತಲ್ ಶ್ರೀ ದೌಲತ್ರಮ್ ನೋಪಾನಿ ವಿದ್ಯಾಲಯದಿಂದ ಶಿಕ್ಷಣ ಪಡೆದರು. ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ವಾಣಿಜ್ಯ ಮತ್ತು ವ್ಯವಹಾರದಲ್ಲಿ ಪದವಿ ಪಡೆದಿದ್ದಾರೆ.
ಡಾ.ಸೈರಸ್ ಪೂನವಾಲಾ
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕರು ಹಾಗೂ ಭಾರತದ 7ನೇ ಶ್ರೀಮಂತ ವ್ಯಕ್ತಿ ಡಾ.ಸೈರಸ್ ಪೂನವಾಲಾ ವಿಶ್ವದ 161ನೇ ಸಿರಿವಂತೆ. ಪೂನವಾಲಾ ಕುಟುಂಬದಲ್ಲಿ ಜನಿಸಿದ್ದು, ಅವರ ಪ್ರಾಚೀನ ವ್ಯವಹಾರ ಕುದುರೆ ಓಟವಾಗಿತ್ತು. ಪೂನವಾಲಾ ಸ್ಟಡ್ ಫಾರ್ಮ್ ಹೊಂದಿದ್ದರು. ಪುಣೆಯ ಬಿಷಪ್ ಶಾಲೆಯಿಂದ ಶಿಕ್ಷಣ ಪಡೆದಿದ್ದಾರೆ. 1966ರಲ್ಲಿ ಬೃಹತ್ ಮಹಾರಾಷ್ಟ್ರ ವಾಣಿಜ್ಯ ಕಾಲೇಜಿನಿಂದ (ಬಿಎಂಸಿಸಿ) ಪದವಿ ಪಡೆದರು. 1988ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ಗೌತಮ್ ಅದಾನಿ
ಗೌತಮ್ ಅದಾನಿ ಭಾರತದ 7ನೇ ಶ್ರೀಮಂತ ವ್ಯಕ್ತಿ. ಅದಾನಿ ವಿಶ್ವದ 162ನೇ ಶ್ರೀಮಂತ. ಗೌತಮ್ ಅದಾನಿ ತಮ್ಮ ಆರಂಭಿಕ ಶಿಕ್ಷಣವನ್ನು ಅಹಮದಾಬಾದ್ನ ಸಿ.ಎನ್ ವಿದ್ಯಾಲಯದಿಂದ ಮಾಡಿದರು. ಅವರು ಪದವಿಗಾಗಿ ಗುಜರಾತ್ ಯುನಿವರ್ಸಿಟಿ ಅಫ್ ಕಾಮರ್ಸ್ಗೆ ಜಾಯಿನ್ ಆಗಿದ್ದರು. ಆದರೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮಹೀಂದ್ರಾ ಬ್ರದರ್ಸ್ ಮುಂಬೈ ಬ್ರಾಂಚ್ನಲ್ಲಿ ವಜ್ರಗಳನ್ನು ವಿಂಗಡಿಸುವ ತಮ್ಮ ಮೊದಲ ಕೆಲಸ ಪಡೆದರು. ಅದಾನಿ ಮುಂಬೈನ ಅತಿದೊಡ್ಡ ಆಭರಣ ಮಾರುಕಟ್ಟೆಯಾದ ಜಾವೇರಿ ಬಜಾರ್ನಲ್ಲಿ ವಜ್ರ ದಲ್ಲಾಳಿಯಾಗಿ ಕೆಲಸ ಮಾಡಿದರು.
ಅಜೀಮ್ ಪ್ರೇಮ್ಜೀ
ವಿಪ್ರೋ ಲಿಮಿಟೆಡ್ನ ಅಧ್ಯಕ್ಷ ಅಜೀಮ್ ಪ್ರೇಮ್ಜೀ ಭಾರತೀಯ ವ್ಯವಹಾರ ಉದ್ಯಮಿ, ಹೂಡಿಕೆದಾರ ಮತ್ತು ಎಂಜಿನಿಯರ್ ಅವರನ್ನು ಭಾರತೀಯ ಐಟಿ ಉದ್ಯಮದ Czar ಎಂದೂ ಕರೆಯುತ್ತಾರೆ. ವಿದ್ಯಾರ್ಥಿಯಾಗಿದ್ದಾಗಲೇ ವ್ಯವಹಾರದಲ್ಲಿ ತೊಡಗಿದ್ದರಿಂದ ಅಧ್ಯಯನವನ್ನು ಪೂರ್ಣಗೊಳಿಸದ ಕಾರಣ ಟೀಕೆಗೆ ಗುರಿಯಾದರು. ಅವರು ಮತ್ತೆ 1995 ರಲ್ಲಿ ಶಿಕ್ಷಣವನ್ನು ಪುನರಾರಂಭಿಸಿದರು ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಕರೆಸ್ಪಾಂಡೆನ್ಸ್ ತರಗತಿಗಳ ಮೂಲಕ ಎಂಜಿನಿಯರಿಂಗ್ ಪದವಿ ಪಡೆದರು. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ.
ಸುನಿಲ್ ಮಿತ್ತಲ್
ಆರನೇ ಶ್ರೀಮಂತ ಭಾರತೀಯ ಹಾಗೂ ಟೆಲಿಕಾಂ ಕೈಗಾರಿಕೋದ್ಯಮಿ ಸುನಿಲ್ ಮಿತ್ತಲ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 154ನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿವಿಯಿಂದ ಬಿಎ ಪದವಿ ಪಡೆದಿದ್ದಾರೆ. ಇದಲ್ಲದೆ ಹಾರ್ವರ್ಡ್ ಬಿಸಿನೆಸ್ ಶಾಲೆಯಲ್ಲಿಯೂ ಅಧ್ಯಯನ ಮಾಡಿದ್ದಾರೆ. ಬಾಲ್ಯದಿಂದಲೂ ಉದ್ಯಮಿ ಆಗಬೇಕೆಂಬ ಆಸೆ ಹೊಂದಿದ್ದ ಮಿತ್ತಲ್, ತಮ್ಮ ತಂದೆಯಿಂದ 20 ಸಾವಿರ ರೂಪಾಯಿಗಳನ್ನು ಸಾಲ ಪಡೆಯುವ ಮೂಲಕ ಬೈಸಿಕಲ್ ಭಾಗಗಳನ್ನು ತಯಾರಿಸಲು ಒಂದು ಘಟಕ ಆರಂಭಿಸಿದರು. ಮೂರು ವರ್ಷಗಳಲ್ಲಿ ಅದೆರಡು ಘಟಕಗಳಾದವು.
ಕುಮಾರ್ ಬಿರ್ಲಾ
ಭಾರತದ ಅತಿದೊಡ್ಡ ಸಂಘ ಸಂಸ್ಥೆಗಳಲ್ಲಿ ಒಂದಾದ ಆದಿತ್ಯ ಬಿರ್ಲಾ ಗ್ರೂಪ್ನ ಅಧ್ಯಕ್ಷರಾದ ಕುಮಾರ್ ಬಿರ್ಲಾ ಭಾರತದ 9 ನೇ ಶ್ರೀಮಂತ ವ್ಯಕ್ತಿ. ಆದಿತ್ಯ ಬಿರ್ಲಾ ಮದುವೆಯಾದ ಒಂದು ವರ್ಷದ ನಂತರ ಹೆಂಡತಿಯೊಂದಿಗೆ ಲಂಡನ್ಗೆ ಹೋಗಿ ಲಂಡನ್ ಬಿಸಿನೆಸ್ ಸ್ಕೂಲ್ನಿಂದ ಎಮ್ಬಿಎ ಮಾಡಿದರು.