- Home
- Karnataka Districts
- ಭಟ್ಕಳ ದುರಂತ: ಇವರು ಎಣಿಸಿದ್ದೇ ಒಂದು, ವಿಧಿಯಾಟವೇ ಮತ್ತೊಂದು! ಒಂದು ತುತ್ತು ಊಟಕ್ಕೆ 11 ಜೀವಗಳು ಬಲಿ!
ಭಟ್ಕಳ ದುರಂತ: ಇವರು ಎಣಿಸಿದ್ದೇ ಒಂದು, ವಿಧಿಯಾಟವೇ ಮತ್ತೊಂದು! ಒಂದು ತುತ್ತು ಊಟಕ್ಕೆ 11 ಜೀವಗಳು ಬಲಿ!
ವರದಿ: ರಾಘವೇಂದ್ರ ಹೆಬ್ಬಾರಭಟ್ಕಳದ ಸಾರದಹೊಳೆ ಗ್ರಾಮದ 11 ಬಡ ಕೂಲಿ ಕಾರ್ಮಿಕರು ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು, ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ ಮೃತರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿತು.

ವಿಧಿ ಆಟ ಆಡದೇ ಇದ್ದರೆ ಕುಟುಂಬದವರ ಜತೆ ಕುಳಿತು ಊಟ ಮಾಡುತ್ತಿದ್ದರು
ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಶಿರಾಲಿಯ ತಟ್ಟಿಹಕ್ಲಿನ ವೆಂಕಟಾಪುರ ಹೊಳೆ ನೀರಿನಲ್ಲಿ ನಡೆದ 11 ಜನರ ಸಾವಿನ ದುರ್ಘಟನೆಯಿಂದ ಮೃತರ ಊರಾದ ಸಾರದಹೊಳೆಯಲ್ಲಿ ನೀರವ ಮೌನ ಆವರಿಸಿದೆ. ವಿಧಿ ಆಟ ಆಡದೇ ಇದ್ದರೆ ಸಾರದಹೊಳೆಯ ಈ 11 ಜನರೂ ಭಾನುವಾರ ಮಧ್ಯಾಹ್ನ ತಾವು ಸಂಗ್ರಹಿಸಿದ್ದ (ಮಳವಿ) ಕಪ್ಪೆಚಿಪ್ಪಿನ ಪದಾರ್ಥ ತಯಾರಿಸಿ ಮನೆಯಲ್ಲಿ ಆರಾಮವಾಗಿ ಕುಟುಂಬದವರ ಜತೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಇವರ ಪಾಲಿಗೆ ವಿಧಿಯಾಟವೇ ಬೇರೆಯಾಗಿತ್ತು.

ಬೆಳಗಿನ ಜಾವ ಸುರಿದ ಭಾರೀ ಮಳೆ ನಿಂತ ಮೇಲೆ ಕಪ್ಪೆ ಚಿಪ್ಪು ಸಂಗ್ರಹಿಸಲು ಒಟ್ಟಿಗೆ ತೆರಳಿದ್ದರು
ಭಾನುವಾರ ಬೆಳಗಿನ ಜಾವ ಸುರಿದ ಭಾರೀ ಮಳೆ ನಿಂತ ಮೇಲೆ ಕಪ್ಪೆ ಚಿಪ್ಪು ಸಂಗ್ರಹಿಸಲು ಒಟ್ಟಿಗೆ ತೆರಳಿದ್ದ ಸಾರದಹೊಳೆಯ ಹೆಗ್ಗಡತಿಮನೆ, ಹಿರೇಹಿತ್ಲು ಕುಟುಂಬದ 14 ಜನರು ತಟ್ಟಿಹಕ್ಲಿನಲ್ಲಿ ಕೂಡುವ ವೆಂಕಟಾಪುರ ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸಿದ್ದಾರೆ. ಇನ್ನೇನು ಎಲ್ಲರೂ ದಡಕ್ಕೆ ಬರಬೇಕು ಎನ್ನುವಷ್ಟರಲ್ಲೇ ನೀರಿನ ಉಬ್ಬರ ಜಾಸ್ತಿಯಾಗಿ ಇವರನ್ನು ಆವರಿಸಿದ್ದು, ಮೇಲಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಎಲ್ಲರೂ ಒಟ್ಟಿಗೆ ನಿಂತು ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದರು. 14 ಜನರಲ್ಲಿ ಮೂವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಬದುಕುಳಿದ ಮಾದೇವಿ ಮಂಜುನಾಥ ನಾಯ್ಕ, ನಾಗರತ್ನಾ ಈಶ್ವರ ನಾಯ್ಕ ಮತ್ತು ಲಲಿತಾ ಜಗದೀಶ ನಾಯ್ಕ ಇವರು ತಮ್ಮ ಕಣ್ಣಾರೆ 11 ಜನರು ನೀರಲ್ಲಿ ಮುಳುಗುವ ದೃಶ್ಯ ನೋಡಿದ್ದಾರೆ. ನಾಗರತ್ನಾ ಈಶ್ವರ ನಾಯ್ಕ ಅವರ ಅಕ್ಕ ಮೃತಪಟ್ಟಿದ್ದು, ಅವರು ನಾಗರತ್ನಾ ಅವರನ್ನು ದಡಕ್ಕೆ ದೂಡಿದ್ದರಿಂದ ಬಚಾವ್ ಆಗಿದ್ದಾರೆ.
ಸಾರದಹೊಳೆಯಲ್ಲಿ ನೀರವ ಮೌನ
ಸಾರದಹೊಳೆಯಲ್ಲಿ ನೀರವ ಮೌನ ಆವರಿಸಿದ್ದು, ಮೃತರೆಲ್ಲರೂ ಕೂಲಿ ಮಾಡುವವರು ಮತ್ತು ತೀರಾ ಬಡವರು. ಅವರು ಕೂಲಿಯ ಜತೆಗೆ ಕಪ್ಪೆಚಿಪ್ಪು ಸಂಗ್ರಹಿಸಿ ಮಾರಾಟ ಮಾಡುವ ಕೆಲಸದಲ್ಲೂ ನಿರತರಾಗಿದ್ದರು. ಭಾನುವಾರ ರಜೆ ಆದ್ದರಿಂದ ಮನೆಯಲ್ಲಿ ಕುಟುಂಬದವರು ಎಲ್ಲರೂ ಇರುತ್ತಾರೆ, ಮಧ್ಯಾಹ್ನದೊಳಗೆ ಕಪ್ಪೆಚಿಪ್ಪು ಸಂಗ್ರಹಿಸಿ ತಂದು ಮನೆಯಲ್ಲೇ ಆಹಾರ ಪದಾರ್ಥ ಮಾಡಿ, ಊಟ ಮಾಡುವ ಉದ್ದೇಶದಿಂದ ಎಲ್ಲರೂ ಒಟ್ಟಿಗೆ ಸೇರಿ ತಟ್ಟಿಹಕ್ಲು ಹೊಳೆಗೆ ಹೋಗಿದ್ದಾರೆ.
ದುರಂತದಿಂದ ಮೃತ ಕುಟುಂಬದವರು ಕಂಗಾಲಾಗಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದ ಮನೆಯವರೆಲ್ಲರೂ ಕಣ್ಣೀರು ಹರಿಸುತ್ತಿದ್ದರು. ಮೃತಪಟ್ಟವರ ಮನೆಯಲ್ಲಿ ಹೆಚ್ಚಿನವರು ಸಣ್ಣಮಕ್ಕಳು, ಶಾಲಾ-ಕಾಲೇಜಿಗೆ ಹೋಗುವವರು ಇದ್ದಾರೆ. ಕೆಲವರು ಮಾತ್ರ ಸಣ್ಣ ದುಡಿಮೆ ಮಾಡುತ್ತಿದ್ದಾರೆ. ಲಕ್ಷ್ಮೀ ಶಿವರಾಮ ನಾಯ್ಕ ನಿಧನದಿಂದ ಅವರ ಮಕ್ಕಳು ಅನಾಥರಾಗಿದ್ದಾರೆ. ಲಕ್ಷ್ಮೀಯ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಇವರೇ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಒಂದು ಮನೆಯಲ್ಲಿ ಪತಿ, ಪತ್ನಿ ಇಬ್ಬರೂ ಮೃತರಾಗಿದ್ದು, ಮಕ್ಕಳು ಕುಟುಂಬದವರು ಮರುಗುವ ದೃಶ್ಯ ಯಾರಿಗೂ ಹೇಳತೀರದು.
ದಾಯಾದಿ ಕುಟುಂಬದ 8 ಮಂದಿ ಸಾವು
ವಿಧಿ ಯಾಕಾದರೂ ಇವರ ಬಾಳಿನಲ್ಲಿ ಆಟ ಆಟ ಆಡಬೇಕಿತ್ತು ಎನ್ನುವುದೇ ಪ್ರಶ್ನೆಯಾಗಿದೆ. ಒಂದೇ ದಾಯಾದಿ ಕುಟುಂಬದ 8 ಮಂದಿ ಅಸುನೀಗಿದ್ದಾರೆ. ಇವರೆಲ್ಲರ ಮನೆ ಆಸುಪಾಸು ಇದ್ದು, ಎಲ್ಲರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದರು. ಭಟ್ಕಳ ಕಂಡಂತಹ ದೊಡ್ಡ ದುರಂತ ಇದಾಗಿದೆ. ಯಾರು ಎಷ್ಟೇ ಧೈರ್ಯ, ಸಾಂತ್ವನ ಹೇಳಿದರೂ ದುರ್ಘಟನೆ ನಡೆದು ಹೋಗಿದೆ. ಇನ್ನಾದರೂ ಜಾಗೃತಿ ವಹಿಸಬೇಕು. ಮೃತರು ತೀರಾ ಬಡಕುಟುಂಬದವರಾಗಿದ್ದರಿಂದ ಮತ್ತು ಕಪ್ಪೆಚಿಪ್ಪು ಸಂಗ್ರಹಿಸಿ ಮಾರಾಟ ಮಾಡುವವರಾಗಿದ್ದರಿಂದ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದ್ದರೂ ಮತ್ತಷ್ಟು ಹೆಚ್ಚಿನ ಪರಿಹಾರ ನೀಡುವ ಜತೆಗೆ ಅಗತ್ಯವಿದ್ದವರಿಗೆ ಹೊಸ ಮನೆ ನಿರ್ಮಾಣ ಮತ್ತು ಮಕ್ಕಳ ವಿದ್ಯಾಭ್ಯಾಸ, ಕಲಿತವರಿಗೆ ಉದ್ಯೋಗದ ಜವಾಬ್ದಾರಿ ವಹಿಸಿಕೊಂಡರೆ ಅನುಕೂಲವಾದೀತು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕುಟುಂಬದ ಗದ್ದೆಯಲ್ಲಿ 8 ಜನರ ಸಾಮೂಹಿಕ ಅಂತ್ಯಸಂಸ್ಕಾರ
ಶಿರಾಲಿಯ ತಟ್ಟಿಹಕ್ಲಿನ ವೆಂಕಟಾಪುರ ಹೊಳೆ ನೀರಿನಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರು ಪಾಲಾಗಿದ್ದ ಮಾದೇವ ನಾಯ್ಕ ಅವರ ಮೃತದೇಹ ಪತ್ತೆಯಾಗುವ ಮೂಲಕ ಮೃತರ ಸಂಖ್ಯೆ 11 ಕ್ಕೇರಿದ್ದು, ಉಳಿದ ಮೂವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಹೇಳತೀರದಾಗಿದೆ. ಎಲ್ಲೆಲ್ಲೂ ದುಃಖ ಮಡುಗಟ್ಟಿದೆ.
ಭಾನುವಾರ ಸಂಜೆಯಾದರೂ ಇಬ್ಬರು ಪತ್ತೆಯಾಗದ ಕಾರಣ ಈಜು ತಜ್ಞ ಈಶ್ವರ ಮಲ್ಪೆ ಅವರು ತಮ್ಮ ತಂಡದವರನ್ನು ಕಳುಹಿಸಿಕೊಟ್ಟಿದ್ದು, ಓರ್ವರನ್ನು ನೀರಿನಲ್ಲಿ ಪತ್ತೆ ಹಚ್ಚುವಲ್ಲಿ ಸಫಲರಾದರು. ಆನಂತರ ರಾತ್ರಿ ಬಂದ ಈಶ್ವರ ಮಲ್ಪೆ ಅವರೇ ತಡರಾತ್ರಿಯ ತನಕ ಹುಡುಕಾಡಿದರೂ ಮಾದೇವ ನಾಯ್ಕ ಪತ್ತೆಯಾಗಿರಲಿಲ್ಲ. ಆನಂತರ ಸೋಮವಾರ ಬೆಳಗ್ಗೆ ಮಾದೇವ ಮೃತ ಸ್ಥಿತಿಯಲ್ಲಿ ಬಂಡೆಯೊಂದರ ನಡುವೆ ಸಿಲುಕಿದ್ದು, ಅವರ ಮೃತದೇಹವನ್ನು ಮೇಲಕ್ಕೆತ್ತುವ ಮೂಲಕ ಎಲ್ಲ ೧೧ ಜನರನ್ನು ಪತ್ತೆ ಹಚ್ಚಿದಂತಾಗಿದೆ.
ಜನರ ಸಾಮೂಹಿಕ ಅಂತ್ಯಸಂಸ್ಕಾರ
ಸಾರದೊಳೆಯಲ್ಲಿ ಒಂದೇ ದಾಯಾದಿ ಕುಟುಂಬದ 8 ಜನರು ಮೃತಪಟ್ಟಿದ್ದರಿಂದ ಕುಟುಂಬದ ಗದ್ದೆಯಲ್ಲೇ ಸೋಮವಾರ ಬೆಳಗ್ಗೆ ಎಲ್ಲರದ್ದೂ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಇನ್ನಿಬ್ಬರದ್ದು ಅಳ್ವೆಕೋಡಿಯಲ್ಲಿ, ಮತ್ತೊಬ್ಬರದ್ದು ಸಾರದಹೊಳೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇಡೀ ಗ್ರಾಮದಲ್ಲಿ ಮೌನ ಆವರಿಸಿತ್ತು. ಸಾರದಹೊಳೆಯ ಅಂಗಡಿ ಮುಂಗಟ್ಟುಗಳನ್ನೂ ಮುಚ್ಚಿ ಸಂತಾಪ ಸೂಚಿಸಲಾಯಿತು. ಒಂದೇ ಗ್ರಾಮದವರು 11 ಜನರು ಜಲ ದುರಂತದಲ್ಲಿ ಮೃತಪಟ್ಟಿರುವುದು ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿತು. ಮೃತರ ಅಂತಿಮ ದರ್ಶನಕ್ಕೆ ಸ್ಥಳೀಯರು, ಸಂಬಂಧಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಎಂಟು ಮಂದಿಯ ಅಂತ್ಯಸಂಸ್ಕಾರ ಒಂದೇ ಸ್ಥಳದಲ್ಲಿ ನಡೆದಿದ್ದು ಅತ್ಯಂತ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾಯಿತು. ಪರಿವಾರದವರ ಹಾಗೂ ಗ್ರಾಮಸ್ಥರ ಆಕ್ರಂದನ ಮನಕಲಕುವಂತಿತ್ತು. ಪತಿ, ಪತ್ನಿ ಮೃತದೇಹವನ್ನು ಒಂದೇ ಚಿತೆಯಲ್ಲಿ ಇರಿಸಿ ಅಂತ್ಯಸಂಸ್ಕಾರ ನೆರವೇರಿಸಿದ ದೃಶ್ಯ ಅಲ್ಲಿದ್ದವರ ಕಣ್ಣೀರನ್ನು ತರಿಸಿತು.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಸರ್ಕಾರದಿಂದ ಅಗತ್ಯ ಪರಿಹಾರ ಹಾಗೂ ನೆರವು ನೀಡುವ ಭರವಸೆ ನೀಡಿದರು.

